ಬೆಂಗಳೂರು ರಸ್ತೆಗುಂಡಿ ಸಮಸ್ಯೆ ವಿರುದ್ಧ ಜಾಗೃತಿ ಮೂಡಿಸಲು ಬೀದಿಗೆ ಬಂದ ಯಮರಾಜ!

ಬೆಂಗಳೂರು, ಜುಲೈ 24: ಬೆಂಗಳೂರು ರಸ್ತೆಗುಂಡಿಗಳ ಸಮಸ್ಯೆ ಅದ್ಯಾವ ಕಾಲಕ್ಕೆ ಸರಿ ಹೋಗುತ್ತೋ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಅಪಘಾತಗಳು, ಸಾವು, ನೋವು ಸಂಭವಿಸಿದಾಗ ಸರ್ಕಾರ ಮತ್ತು ಜನಪ್ರತಿನಿಧಿಗಳು ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಆದೇಶ ನೀಡಿ ಕೈತೊಳೆದುಕೊಳ್ಳುತ್ತಾರೆ. ಆದರೆ ಇಲ್ಲಿಯವರೆಗೂ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಗುಂಡಿಗಳಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ರಸ್ತೆ ಗುಂಡಿ ಸಮಸ್ಯೆಯಿಂದ ಬೇಸತ್ತು ಇಲ್ಲೊಬ್ಬ ವ್ಯಕ್ತಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದು, ಈಗ ವೈರಲ್ ಆಗಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಇರುವ ಗುಂಡಿ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ವ್ಯಕ್ತಿ ಯಮರಾಜನಂತೆ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾನೆ. ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳು ಹೇಗೆ ಮರಣಶಯ್ಯೆಯಾಗಿವೆ ಎಂಬ ಸಂದೇಶವನ್ನು ಅಧಿಕಾರಿಗಳಿಗೆ ತಿಳಿಸಲು ಬೆಂಗಳೂರಿನ ಅಂಜನಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಪ್ರತಿಭಟನೆ ನಡೆಸಿದ್ದಾನೆ.

ಕನಕಪುರ ರಸ್ತೆಯ ಚೇಂಜ್‌ಮೇಕರ್ಸ್ ಎಂಬ ಸಂಘಟನೆಯು ಅಧಿಕಾರಿಗಳ ಗಮನ ಸೆಳೆಯಲು ಈ ವಿಶಿಷ್ಟ ಪ್ರತಿಭಟನೆಯನ್ನು ನಡೆಸಿತು. ಅಧಿಕಾರಿಗಳು 10 ವರ್ಷಗಳಿಂದ ಅಂಜನಪುರದ ರಸ್ತೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಈ ಹಾಳಾದ ರಸ್ತೆಗಳಿಂದ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಅದು ಆರೋಪಿಸಿದೆ.

 ಶಾಸಕ ಕೃಷ್ಣಪ್ಪ ಮತ್ತು ಬಿಡಿಎ ವಿರುದ್ಧ ಆರೋಪ

ಶಾಸಕ ಕೃಷ್ಣಪ್ಪ ಮತ್ತು ಬಿಡಿಎ ವಿರುದ್ಧ ಆರೋಪ

ಈ ಭಾಗದ ಶಾಸಕರಾಗಿರುವ ಕೃಷ್ಣಪ್ಪ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿರ್ಲಕ್ಷ್ಯದ ವಿರುದ್ಧ ವ್ಯಂಗ್ಯವಾಡಿದ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ, ಶಾಸಕ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 'ಯಮರಾಜ'ಗೆ ಟೆಂಡರ್ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಯಮರಾಜನ ವೇಷಭೂಷಣ ಧರಿಸಿದ್ದ ವ್ಯಕ್ತಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರ ಜೊತೆಗಿದ್ದ. ಎಮ್ಮೆಯೊಂದನ್ನು ಹಿಡಿದು ತಂದು ವಿನೂತನವಾಗಿ ಪ್ರತಿಭಟನೆ ನಡೆಸಿ ಶಾಸಕ, ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.

 ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ

ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಿಲ್ಲ

"ರಸ್ತೆಗಳಲ್ಲಿ ಯಮರಾಜನೇ? ಆಶ್ಚರ್ಯ ಪಡಬೇಡಿ, ಜನರನ್ನು ಕರೆದುಕೊಂಡು ಹೋಗಲು ಶಾಸಕ ಕೃಷ್ಣಪ್ಪ ಮತ್ತು ಬಿಡಿಎ ಯಮನಿಗೆ ಟೆಂಡರ್ ನೀಡಿದ್ದಾರೆ!. ನಿನ್ನೆ ಕನಕಪುರ ರಸ್ತೆಯ ಚೇಂಜ್‌ಮೇಕರ್ಸ್ ಅಂಜನಾಪುರದ ಗುಂಡಿಗಳ ರಸ್ತೆಗಳ ವಿರುದ್ಧ ವಿಶಿಷ್ಟ ಪ್ರತಿಭಟನೆ ಮಾಡಿದ್ದಾರೆ. ಕಳೆದ ವರ್ಷವೂ ತೀವ್ರ ಪ್ರತಿಭಟನೆ ಮಾಡಲಾಗಿತ್ತು ಆದರೂ ಶಾಸಕ ಕೃಷ್ಣಪ್ಪ ಮತ್ತು ಬಿಡಿಎ ಎಚ್ಚೆತ್ತುಕೊಂಡಿಲ್ಲ!" ಎಂದು ಆರೋಪಿಸಿದ್ದಾರೆ.

 ಹಲವು ಪ್ರಮುಖ ರಸ್ತೆಗಳಲ್ಲಿ ಇದೇ ಸಮಸ್ಯೆ

ಹಲವು ಪ್ರಮುಖ ರಸ್ತೆಗಳಲ್ಲಿ ಇದೇ ಸಮಸ್ಯೆ

ನೈಸ್ ಜಂಕ್ಷನ್‌ನಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ 500 ಮೀಟರ್ ವ್ಯಾಪ್ತಿಯಲ್ಲಿ 40 ಕ್ಕೂ ಹೆಚ್ಚು ಗುಂಡಿಗಳು ಇರುವ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು.

ಕರ್ನಾಟಕ ಹೈಕೋರ್ಟ್ ಕೂಡ ರಸ್ತೆಗುಂಡಿ ಸಮಸ್ಯೆ ಬಗೆಹರಿಸದ ಬಿಬಿಎಂಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೈಕೋರ್ಟ್ ಹೇಳಿತ್ತು. ಹಲವು ಉದ್ಯಮಿಗಳು ಕೂಡ ಬೆಂಗಳೂರಿನ ರಸ್ತೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

 ಡಾಂಬರ್ ಹಾಕಿದ ಒಂದೇ ದಿನದಲ್ಲಿ ಗುಂಡಿ ಬಿದ್ದ ರಸ್ತೆ!

ಡಾಂಬರ್ ಹಾಕಿದ ಒಂದೇ ದಿನದಲ್ಲಿ ಗುಂಡಿ ಬಿದ್ದ ರಸ್ತೆ!

ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನ ಜ್ಞಾನ ಭಾರತಿ ಮುಖ್ಯರಸ್ತೆಗೆ ಡಾಂಬರು ಹಾಕಲು 23.51 ಕೋಟಿ ರುಪಾಯಿ ವೆಚ್ಚ ಮಾಡಿಲಾಗಿತ್ತು. ಆದರೆ ಡಾಂಬರೀಕರಣಗೊಂಡ ಕೇವಲ ಒಂದು ದಿನದಲ್ಲಿ ಗುಂಡಿ ಬಿದ್ದಿತ್ತು. ಘಟನೆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ತನಿಖೆ ನಡೆಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದರು.

ಒಳಚರಂಡಿ ಪೈಪ್‌ಲೈನ್ ಸೋರಿಕೆಯಾಗಿರುವುದು ಗುಂಡಿ ಬೀಳಲು ಕಾರಣ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಅನುಮಾನ ವ್ಯಕ್ತಪಡಿಸಿದ್ದರು. ಇಷ್ಟು ಕಡಿಮೆ ಸಮಯದಲ್ಲಿ ನಿರ್ಮಿಸಲಾಗಿದ್ದು, ಗುಣಮಟ್ಟದ ಕಾಮಗಾರಿ ಮಾಡಿಲ್ಲ ಎಂದು ಆರೋಪ ಕೇಳಿಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+