ದಾರಿ ಮಧ್ಯದಲ್ಲಿ ಸಾವು ನೋಡುವ ಸಂದರ್ಭ ಬರುತ್ತಿರಲಿಲ್ಲ: ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು, ಏ. 14: ಕೊರೊನಾ ವೈರಸ್ ಹರಡದಂತೆ ತಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 3ರ ವರೆಗೆ ದೇಶಾದ್ಯಂತ ಲಾಕ್ಡೌನ್ ವಿಸ್ತರಣೆ ಮಾಡಿದ್ದಾರೆ. ಮೊದಲು ಲಾಕ್ಡೌನ್ ಹಾಗೂ ಲಾಕ್ಡೌನ್ ವಿಸ್ತರಣೆಯನ್ನು ವಿರೋಧ ಪಕ್ಷಗಳ ನಾಯಕರು ಸ್ವಾಗತಿಸಿದ್ದಾರೆ. ಆದರೆ ಲಾಕ್ಡೌನ್ ಜಾರಿಗೆ ತಂದಿರುವ ರೀತಿಯನ್ನು ವಿರೋಧಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಬೆಂಗಳೂರಿನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ದೇಶದ ಹಿತದೃಷ್ಟಿಯಿಂದ ಲಾಕಡೌನ್ಗೆ ನಮ್ಮ ಬೆಂಬಲವಿದೆ. ಪ್ರಧಾನಿ ನರೇಂದ್ರ ಮೋದಿ ಬಡವರು, ನಿರ್ಗತಿಕರಿಗೆ ಹಲವು ಕಾರ್ಯಕ್ರಮ ಜಾರಿ ಮಾಡುತ್ತಾರೆ. ಕಡುಬಡವರಿಗೆ ಏನಾದರೂ ಒಂದು ಉತ್ತಮ ಯೋಜನೆ ರೂಪಿಸುತ್ತಾರೆ ಎಂದು ಭಾವಿಸಿದ್ದೆವು. ಆದರೆ ಪ್ರಧಾನಿ ಮೋದಿ ಅವರು ಮಾಡಿದ ಭಾಷಣ ರಾಜಕೀಯದಿಂದ ಕೂಡಿತ್ತು. ಅವರ ಭಾಷಣ ನಿರಾಶೆ ಮೂಡಿಸಿತು ಎಂದು ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಮ್ಮ ದೇಶದಲ್ಲಿಯೂ ಸಿಂಗಪುರ್ನಂತೆ ವ್ಯವಸ್ಥಿತವಾಗಿ ಲಾಕಡೌನ್ ಮಾಡಬೇಕಿತ್ತು. ಒಂದು ವಾರ ಮೊದಲೇ ಜನರಿಗೆ ಲಾಕ್ಡೌನ್ ಕುರಿತು ಮಾಹಿತಿ ಕೊಟ್ಟಿದ್ದರೆ ಬಡ ಕೂಲಿ ಕಾರ್ಮಿಕರಿಗೆ ಅನುಕೂಲ ಆಗುತ್ತಿತ್ತು. ತಮ್ಮ ಊರಿಗೆ ಹೋಗಲು ಸಮಯಾವಕಾಶ ಕೊಟ್ಟಿದ್ದರೆ ಕೂಲಿ ಕಾರ್ಮಿಕರು ದಾರಿ ಮಧ್ಯದಲ್ಲಿ ಸಾಯುವ ಸ್ಥಿತಿ ನೋಡುವ ಸಂದರ್ಭ ಬರುತ್ತಿರಲಿಲ್ಲ ಎಂದಿದ್ದಾರೆ.

ಒಂದು ಪಕ್ಷಕ್ಕೆ ಸೇರಿದ ಕಾರ್ಯಕರ್ತರು ತಮ್ಮ ಪಕ್ಷದ ಚಿಹ್ನೆ ಶಾಸಕರ ಫೋಟೊ ಹಾಕಿಕೊಂಡು ಕಾರ್ಮಿಕ ಕಲ್ಯಾಣ ನಿಧಿಯ ಪಡಿತರ, ಆಹಾರ ವಸ್ತುಗಳನ್ನು ಹಂಚಿಕೆ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಬಿಜೆಪಿ ಕಾರ್ಯಕರ್ತರ ಮೇಲೆ ಆರೋಪಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಮಾಡಬಾರದು. ಈ ಬಗ್ಗೆ ಸರ್ಕಾರ ಕಠಿಣ ಕ್ರಮಗಳನ್ನು ಜರಗಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಇನ್ನು ಬಿಡಿಎ ವ್ಯಾಪ್ತಿಯಲ್ಲಿ ಬರುವ ಕಾರ್ನರ್ ನಿವೇಶನಗಳನ್ನು ಮಾರಾಟ ಮಾಡಲು ನಿರ್ಧರಿಸಿರುವ ಸರ್ಕಾರದ ಕ್ರಮವನ್ನು ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದ್ದಾರೆ. ಬಿಡಿಎ ನಿವೇಶನವನ್ನು ಪ್ರಸಕ್ತ ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಮಾರಾಟ ಮಾಡಬಾರದು. ಜನರ ಬಳಿ ದುಡ್ಡು ಇಲ್ಲದೇ ಇದ್ದಾಗ ಹರಾಜಿಗೆ ಹೇಗೆ ಬರುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ. ಸರ್ಕಾರದ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಕೆಲಸ ಮಾಡಬಾರದು. ಮೊದಲು ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಸಲಹೆ ನೀಡಿದ್ದಾರೆ.












Click it and Unblock the Notifications