ಪಂಚೆ ಎತ್ತಿ ಕಟ್ಟಿ ಪಾದಯಾತ್ರೆ ಮಾಡಿದ್ದ ಸಿದ್ದು ಎಲ್ಹೋದ್ರು?
ಬೆಂಗಳೂರು, ಮಾರ್ಚ್ 28: ಆಡಳಿತಾರೂಢ ಕಾಂಗ್ರೆಸ್ ಮತ್ತು ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಜೆಡಿಎಸ್ ನಾಯಕರ ಮಧ್ಯೆ ಮಾತಿನ ಬಾಣಬಿರುಸು ಜೋರಾಗಿ ಸಿಡಿಯಲಾರಂಭಿಸಿದೆ.
ಡಿಕೆ ಶಿವಕುಮಾರ್ ಮತ್ತು ತದನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದೆರಡು ದಿನಗಳಿಂದ ಜೆಡಿಎಸ್ ಅಧಿಕಾಯಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಗುರಿಯಾಗಿಸಿಕೊಂಡು ಅವರ ಕುಟುಂಬದ ಮೇಲೆ ಟೀಕಾಸ್ತ್ರ ಬಿಟ್ಟ ಮೇಲೆ ಇದೀಗ ಹಾಸನದ ಜೆಡಿಎಸ್ ಅಭ್ಯರ್ಥಿ ಖುದ್ದು ಎಚ್ ಡಿ ದೇವೇಗೌಡರೇ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಗಣಿ ಲೂಟಿಕಾರರನ್ನು ಸುಮ್ಮನೆ ಬಿಡುವುದಿಲ್ಲ. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಜೈಲಿಗಟ್ಟುತ್ತೇವೆ ಎಂದು ಆರ್ಭಟಿಸಿದ್ದರು. ಜತೆಗೆ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಂಚೆ ಎತ್ತಿ ಕಟ್ಟಿಕೊಂಡು ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರು. ಅವರ ಸಂಪುಟದಲ್ಲಿ ಸಚಿವರಾಗಿರುವ ಶಿವಕುಮಾರ್ ಅನೇಕ ಹಗರಣಗಳಲ್ಲಿ ಭಾಗಿಯಾಗಿರುವುದು ಗೊತ್ತಿಲ್ಲವೇ?' ಎಂದು ಸಿದ್ದು ಸರ್ಕಾರವನ್ನು ಸಮ ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯ ಕೂತಲ್ಲಿ, ನಿಂತಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತ್ನಾಡುತ್ತಿದ್ದಾರೆ. ಆದರೆ ಡಿಕೆಶಿ ಅವರ ವಿರುದ್ಧ ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಲು ಅಡ್ಡಿ ಏನಿದೆ ಎಂದು ಗೌಡರು ಪ್ರಶ್ನಿಸಿದರು.
'ಭ್ರಷ್ಟಾಚಾರದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ. ಈ ಎರಡೂ ಪಕ್ಷಗಳ ನಿಲುವು/ಧೋರಣೆ ಒಂದೇ ಆಗಿದೆ' ಎಂದು ಗೌಡರು ಕಿಡಿಕಾರಿದರು. 'ನಾನು ಯಾವುದೇ ಸನ್ನಿವೇಶದಲ್ಲೂ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ, ಮಾಡುವುದೂ ಇಲ್ಲ. ಆದರೆ ನನ್ನ ಬಗ್ಗೆ ಅವರು ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೆದರಿ ಓಡಿ ಹೋಗುವುದಿಲ್ಲ. ಜೆಡಿಎಸ್ ಕಥೆ ಮುಗಿಸುತ್ತೇನೆ ಎಂದು ಹೊರಟವರು ಏನಾಗಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಜೀವಿತಾವಧಿಯವರೆಗೂ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸೋತಾಗ ಕುಗ್ಗಿಲ್ಲ, ಅದೇ ರೀತಿ ಗೆದ್ದಾಗ ಅಹಂಕಾರದಿಂದ ಮೆರೆದಿಲ್ಲ. ಆದರೆ ಈಗ ಕೆಲವು ಕಾಂಗ್ರೆಸ್ ನಾಯಕರು ಅಹಂಕಾರದಿಂದ ಮೆರೆಯುತ್ತಿದ್ದಾರೆ' ಎಂದು ಗೌಡರು ತೀವ್ರ ವಾಗ್ದಾಳಿ ನಡೆಸಿದರು.
'ಅಹಿಂದಾ ರಾಜಕಾರಣಕ್ಕೆ ಹೆದರಿ ನಾನು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಯುಗಾದಿಯ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಚುನಾವಣಾ ಫಲಿತಾಂಶದ ನಂತರ ದೇವೇಗೌಡರ ಶಕ್ತಿ, ತಾಕತ್ತು ಏನೆಂಬುದು ರಾಜ್ಯದ ಜನರಿಗೆ ಮನವರಿಕೆಯಾಗಲಿದೆ.
ನಾವು 26 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೇವೆ. ಕೊಪ್ಪಳ ಮತ್ತು ದಕ್ಷಿಣ ಕನ್ನಡದಲ್ಲಿ ಮಿತ್ರ ಪಕ್ಷಗಳಿಗೆ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಆದರೆ ಕೊಪ್ಪಳದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ಕೊಡುವುದಾಗಿ ಹೇಳಿದ್ದೇವೆ ಎಂಬುದು ಸರಿಯಲ್ಲ. ಅದು ಸತ್ಯಕ್ಕೆ ದೂರವಾದ ಮಾತು. ಈ ಬಗ್ಗೆ ಇನ್ನೂ ನಿರ್ಧಾರ ಮಾಡಬೇಕಾಗಿದೆ' ಎಂದು ಸ್ಪಷ್ಟಪಡಿಸಿದರು.












Click it and Unblock the Notifications