ಬಿಬಿಎಂಪಿ ಆಯುಕ್ತರಿಗೆ ಉಪ ಲೋಕಾಯುಕ್ತರಿಂದ ಸಮನ್ಸ್
ಬೆಂಗಳೂರು, ಡಿ. 12: ನಗರದಲ್ಲಿ ಈಚೆಗೆ ಬಿಬಿಎಂಪಿ ಕೈಗೊಂಡಿದ್ದ ರಸ್ತೆ ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಬಂದಿದೆ. ಈ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡುವಂತೆ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ ಆಡಿ ಅವರು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಅವರಿಗೆ ಪತ್ರ ಬರೆದಿದ್ದಾರೆ.
ರಸ್ತೆ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಿ ಎನ್ಜಿಓ ಒಂದು ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಈ ಕ್ರಮ ಕೈಗೊಂಡಿದ್ದಾರೆ.
ಹೆಚ್ಚಿನ ರಸ್ತೆ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಇಂಜಿನಿಯರಿಂಗ್ ವಿಭಾಗವು ಪತ್ತೆ ಹಚ್ಚಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದ್ದರಿಂದ ಈ ಕುರಿತು ಖುದ್ದು ಹಾಜರಾಗಿ ವಿವರಣೆ ನೀಡಬೇಕೆಂದು ಉಪ ಲೋಕಾಯುಕ್ತರು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ. [ಡಿಸೆಂಬರ್ 15ರಿಂದ ಶಿರಾಡಿ ಘಾಟ್ ಬಂದ್]

ಇದೇ ವರ್ಷ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ಬಿಬಿಎಂಪಿ ಬೆಂಗಳೂರು ನಗರದಲ್ಲಿ 189 ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಂಡಿತ್ತು. ಇವುಗಳಲ್ಲಿ 171 ರಸ್ತೆಗಳ ಕೆಲಸ ಕಳಪೆ ದರ್ಜೆಯದ್ದು. ಈ ಕಾಮಗಾರಿಗಳಲ್ಲಿ ಭಾರೀ ಅಕ್ರಮ ನಡೆದಿದ್ದು, ತನಿಖೆ ನಡೆಸಬೇಕೆಂದು ಕೋರಿ ಕರ್ನಾಟಕ ಜನಹಿತ ವೇದಿಕೆಯ ಅಧ್ಯಕ್ಷ ಸಾಯಿದತ್ತಾ ಅವರು ಲೋಕಾಯುಕ್ತಕ್ಕೆ ಡಿಸೆಂಬರ್ 2ರಂದು ದೂರು ನೀಡಿದ್ದರು.
ಬೆಂಗಳೂರಿನಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳಿಗೆ ಒಂದು ಸಾವಿರ ಕೋಟಿ ರೂ. ವ್ಯಯಿಸಿರುವುದಾಗಿ ಬಿಬಿಎಂಪಿ ತಿಳಿಸಿದೆ. ಆದರೆ, ರಸ್ತೆಗಳೆಲ್ಲಿ ಗುಂಡಿಗಳು ಹಾಗೆಯೇ ಉಳಿದಿವೆ ಹಾಗೂ ಹಾಕಿರುವ ತೇಪೆಗಳು ಕಳಪೆಯಾಗಿವೆ ಎಂದು ಸಾಯಿದತ್ತಾ ಆರೋಪಿಸಿದ್ದಾರೆ.












Click it and Unblock the Notifications