ಬಸ್ ಪ್ರಯಾಣ ದರː ಲೋಕಸತ್ತಾ ಪಕ್ಷದಿಂದ ಪ್ರತಿಭಟನೆ
ಬೆಂಗಳೂರು, ನ.10: ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಹೊರೆಯಾಗಿರುವ ಬಸ್ ದರ ಕಡಿಮೆಮಾಡಬೇಕು ಎಂದು ಲೋಕಸತ್ತಾ ಪಕ್ಷದ ಕಾರ್ಯಕರ್ತರು ಬೆಂಗಳೂರು ಶಾಂತಿನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಡಿಯ ವಾಯುವ್ಯ, ಈಶಾನ್ಯ ಮತ್ತು ನಗರ ಸಾರಿಗೆ ಸಂಸ್ಥೆಗಳ ದರವನ್ನು ಸಾಮಾನ್ಯ ಮನುಷ್ಯ ನೀಡಲಾಗದಂಥ ಸ್ಥಿತಿಯಿದೆ. ಇತ್ತೀಚೆಗೆ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಸಹ ಬಸ್ ದರ ಕಡಿಮೆ ಮಾಡಲಾಗಿಲ್ಲ. ಡೀಸೆಲ್ ಏರಿಕೆಯಾದಾಗ ದರ ಏರಿಸುವಲ್ಲಿ ತೋರುವ ಉತ್ಸಾಹ, ಡೀಸೆಲ್ ಬೆಲೆ ಇಳಿದಾಗ ದರ ಇಳಿಸಲು ಯಾಕೆ ಕಂಡುಬರುತ್ತಿಲ್ಲ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. [ಬಸ್ ದರː ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪತ್ರ]
ಲೋಕಸತ್ತಾ ಪಕ್ಷದ ರಾಜ್ಯ ಕಾರ್ಯದರ್ಶಿ ದೀಪಕ್ ಸಿ. ಎನ್. ಮಾತನಾಡಿ, ರಾಜ್ಯ ಸಾರಿಗೆ ನಿಗಮವು ಜನ ವಿರೋಧಿ ನೀತಿ ಅನುಸರಿಸುತ್ತಿದ್ದು ಮೊದಲು ಲಾಭ ನಂತರ ಸೇವೆ ಎನ್ನುವ ಧ್ಯೇಯ ಹೊಂದಿದೆ. ಕೇವಲ ಲಾಭ ಮಾಡುವ ದೃಷ್ಟಿ ಇದ್ದರೆ ಸರ್ಕಾರ ಏಕೆ ಸಾರಿಗೆ ಸಂಸ್ಥೆಯನ್ನು ನಡೆಸಬೇಕು. ಸಾರ್ವಜನಿಕ ಸಾರಿಗೆಯ ಮೊದಲ ಆದ್ಯತೆ ಜನರ ಸೇವೆ ಆಗಬೇಕೆ ಹೊರತು ಲಾಭವಲ್ಲ ಎಂದು ಹೇಳಿದರು.
ಕರ್ನಾಟಕದ ಸಾರಿಗೆ ಸಂಸ್ಥೆಯಲ್ಲಿ ಉತ್ತಮ ಸೇವೆ ಮಾಯವಾಗಿದೆ. ತನ್ನನ್ನೇ ಉತ್ತಮ ಎಂದು ಹೇಳಿಕೊಳ್ಳುವ ಸಂಸ್ಥೆಯಲ್ಲಿ ಅನಗತ್ಯ ಖರ್ಚು, ಭ್ರಷ್ಟಾಚಾರ, ಆದಾಯ ಸೋರಿಕೆ, ಕಾರ್ಮಿಕರ ಮೇಲಿನ ದಬ್ಬಾಳಿಕೆ ಮನೆಮಾಡಿದೆ ಎಂದು ಆರೋಪಿಸಿದರು.[ಬಸ್ ದರ ಇಳಿಕೆ ಅಸಾಧ್ಯ, ಸಚಿವರು ನೀಡಿದ ಕಾರಣಗಳು]
ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೋಹಿಣಿ ಚಂದ್ರಕಾಂತ್ ಮಾತನಾಡಿ, ಈ ಬಗ್ಗೆ ಈಗಾಗಲೇ ಸಾರಿಗೆ ಸಚಿವರನ್ನು ಭೇಟಿಯಾಗಿ ನಮ್ಮ ಬೇಡಿಕೆ ಇಟ್ಟಿದ್ದೇವೆ. ಅವರು ಸ್ಪಂದಿಸದಿದ್ದರಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿದೆ. ಇದು ಸರ್ಕಾರ ಜನರ ಬಗ್ಗೆ ಇಟ್ಟುಕೊಂಡಿರುವ ಭಾವನೆ ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರು ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್. ರವಿ ಕುಮಾರ್, ಡಾ. ಮೀನಾಕ್ಷಿ ಭರತ್, ಎನ್. ಎಸ್. ರಮಾಕಾಂತ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.