ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಮಹಿಳಾ ಆಯೋಗ ನೋಟಿಸ್
ಬೆಂಗಳೂರು, ಏಪ್ರಿಲ್ 1: ಮಹಿಳೆಯೊಬ್ಬರಿಂದ ಆರೋಪ ಎದುರಿಸುತ್ತಿರುವ ಬಿಜೆಪಿಯ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ರಾಜ್ಯ ಮಹಿಳಾ ಆಯೋಗ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕವು ತೇಜಸ್ವಿ ಸೂರ್ಯ ಅವರ ವಿರುದ್ಧ ಮಹಿಳಾ ಅಯೋಗಕ್ಕೆ ದೂರು ನೀಡಿತ್ತು. ಈ ಸಂಬಂಧ ದೂರು ಪರಿಶೀಲಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಬುಧವಾರ ವಿಚಾರಣೆಗೆ ಖುದ್ದು ಹಾಜರಾಗುವಂತೆ ತೇಜಸ್ವಿ ಅವರಿಗೆ ನೋಟಿಸ್ನಲ್ಲಿ ಸೂಚನೆ ನೀಡಿದ್ದಾರೆ. ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಬರಬೇಕು ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ತೇಜಸ್ವಿ ಸೂರ್ಯ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಘೋಷಣೆ ಮಾಡಿದ ಬೆನ್ನಲ್ಲೇ ಅವರ ಕುರಿತು ಮಹಿಳೆಯೊಬ್ಬರು ಟ್ವಿಟ್ಟರ್ನಲ್ಲಿ ಆರೋಪ ಮಾಡಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು. ಇದಕ್ಕೆ ತೇಜಸ್ವಿ ಅವರು ಸ್ಪಷ್ಟನೆ ನೀಡಿದ್ದರು. ಆರೋಪ ಮಾಡಿದ್ದ ಮಹಿಳೆ ಬಳಿಕ ಆ ಟ್ವೀಟ್ಅನ್ನು ಅಳಿಸಿ ಹಾಕಿದ್ದರು. ಆದರೂ ಅದರ ಸ್ಕ್ರೀನ್ ಶಾಟ್ ಚಿತ್ರಗಳು ಎಲ್ಲೆಡೆ ಹರಿದಾಡುತ್ತಿವೆ.

ಈ ಟ್ವೀಟ್ನ ಚಿತ್ರವನ್ನೇ ಬಳಸಿಕೊಂಡು ಕಾಂಗ್ರೆಸ್ನ ಮಹಿಳಾ ಘಟಕ ದೂರು ನೀಡಿತ್ತು. ದೂರು ಸ್ವೀಕರಿಸಿದ್ದ ಮಹಿಳಾ ಆಯೋಗ, ತೇಜಸ್ವಿ ಸೂರ್ಯ ಅವರನ್ನು ವಿಚಾರಣೆಗೆ ಕರೆಯಿಸಲಾಗುವುದು ಎಂದು ತಿಳಿಸಿದ್ದರು. ಅಲ್ಲದೆ, ನೊಂದ ಮಹಿಳೆಯೊಂದಿಗೂ ಮಾತನಾಡುವುದಾಗಿ ಹೇಳಿದ್ದರು.












Click it and Unblock the Notifications