ವೀರಶೈವ-ಲಿಂಗಾಯತ ಬಣಗಳು ಕೊನೆಗೂ ಇಬ್ಭಾಗ!
ಬೆಂಗಳೂರು, ಜನವರಿ 13: ಪ್ರತ್ಯೇಕ ಧರ್ಮದ ರಚನೆಗಾಗಿ ತೀವ್ರ ಸಂಘರ್ಷಕ್ಕಿಳಿದಿದ್ದ ವೀರಶೈವ ಹಾಗೂ ಲಿಂಗಾಯತ ಬಣಗಳು, ಇಬ್ಭಾಗವಾಗುವುದು ಈಗ ಖಚಿತವಾಗಿದ್ದು ಜನವರಿ 23 ರಂದು ವಿಶ್ವಲಿಂಗಾಯತ ಪರಿಷತ್ ಅಸ್ತಿತ್ವಕ್ಕೆ ಬರಲಿದೆ.
ಸ್ವತಂತ್ರ ಲಿಂಗಾಯತ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ. ಶಿವಾನಂದ ಜಾಮದಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಅಖಿಲ ಭಾರತ ವೀರಶೈವ ಮಹಾಸಭಾದಿಂದ ಹೊರಬಂದು ವಿಶ್ವ ಲಿಂಗಾಯತ ಪರಿಷತ್ ಅಸ್ತಿತ್ವಕ್ಕೆ ಬರಲಿದೆ.
ಕಳೆದ ಎಂಟು ತಿಂಗಳಿನಿಂದ ಸ್ವತಂತ್ರ ಧರ್ಮ ಹೋರಾಟಕ್ಕಾಗಿ ಮಹಾಸಭಾದ ಜತೆ ಸೇರಿ ಹೋರಾಟ ನಡೆಸುವ ತಮ್ಮ ಪ್ರಯತ್ನ ವಿಫಲವಾಗಿದ್ದು ಮಹಾಸಭಾ ತನ್ನ ಗಟ್ಟಿ ನಿಲುವಿನಿಂದ ಹೊರ ಬಂದಿಲ್ಲ. ಹೀಗಾಗಿ ವೀರಶೈವರನ್ನು ಹೊರತುಪಡಿಸಿ ಲಿಂಗಾಯತರಿಗಾಗಿ ಪ್ರತ್ಯೇಕ ಮಾತೃ ಸಂಸ್ಥೆಯನ್ನು ಹುಟ್ಟುಹಾಕಲು ತೀರ್ಮಾನಿಸಲಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಜನವರಿ 23 ರಿಂದ ಅಸ್ತಿತ್ವಕ್ಕೆ ಬರಲಿರುವ ವಿಶ್ವ ಲಿಂಗಾಯತ ಪರಿಷತ್ ನಲ್ಲಿ ಹಲವಾರು ಘಟಕಗಳನ್ನು ರಚಿಸಲಾಗುತ್ತಿದ್ದು, ಮಹಿಳೆಯರು, ಯುವಕರು, ಅನಿವಾಸಿ ಭಾರತೀಯರು ಹಾಗೂ ವೃತ್ತಿಪರ ಲಿಂಗಾಯತರಿಗಾಗಿ ನಾಲ್ಕು ಪ್ರತ್ಯೇಕ ಶಾಖೆಗಳನ್ನು ರಚಿಸಲಾಗುವುದು ಎಂದರು.
ವಿಶ್ವ ಲಿಂಗಾಯತ ಪರಿಷತ್ ಸ್ಥಾಪನೆಯಿಂದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಮತ್ತಷ್ಟು ಬೆಂಬಲ ಸಿಗಲಿದ್ದು ಲಿಂಗಾಯತ ಸ್ವತಂತ್ರ ಧರ್ಮ ಅಸ್ತಿತ್ವಕ್ಕೆ ಬರುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಈಗಾಗಲೇ ವಿಶ್ವಲಿಂಗಾಯತ ಪರಿಷತ್ ನ ಕರಡು ಪ್ರತಿಯೊಂದನ್ನು ಸಿದ್ಧಪಡಿಸಿದ್ದು ಜನವರಿ 23 ರ ಸಮಾವೇಶದಲ್ಲಿ ವಿಶ್ವ ಲಿಂಗಾಯತ ಪರಿಷತ್ ನ ಬೈಲಾವನ್ನು ಅಂತಿಮ ಪಡಿಸಲಾಗುತ್ತದೆ. ಅದದೇ ದಿನ ವಿಶ್ವದಾದ್ಯಂತ ಇರುವ ಲಿಂಗಾಯತರ ವಿಶ್ವ ಲಿಂಗಾಯತ ಪರಿಷತ್ ಗೆ ಸದಸ್ಯರನ್ನಾಗಿ ಮಾಡಲು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಆವರು ತಿಳಿಸದರು.
ರಾಜ್ಯ ಸರ್ಕಾರ ಈಗಾಗಲೇ ಪ್ರತ್ಯೇಕ ಧರ್ಮ ಕುರಿತು ಅಲ್ಪಸಂಖ್ಯಾತರ ಆಯೋಗಕ್ಕೆ ಶಿಫಾರಸ್ಸು ಮಾಡಿದ್ದು, ಆಯೋಗ ರಚಿಸಿರುವ ಸಮಿತಿಗೆ ತಮ್ಮ ಬೆಂಬಲವಿದೆ. ತಜ್ಞರ ಸಮಿತಿಗೆ ಬೇಕಾಗುವ ಎಲ್ಲ ಮಾಹಿತಿಯನ್ನು ಒದಗಿಸಲು ಸ್ವತಂತ್ರ ಧರ್ಮ ಹೋರಾಟ ಸಮಿತಿಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಸ್ವತಂತ್ರ ಹೋರಾಟ ಸಮಿತಿ ಬದ್ಧವಾಗಿರಲಿದೆ. ಆಯೋಗ ರಚಿಸಿರುವ ತಜ್ಞರ ಸಮಿತಿ ರಚಿಸು ಆಕ್ಷೇಪ ಇಲ್ಲ ಎಂದು ಸ್ಪಷ್ಟ ಪಡಿಸಿದ ಅವರು,ಕರ್ನಾಟಕ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯದಲ್ಲಿರುವ ಲಿಂಗಾಯತರನ್ನು ಒಟ್ಟುಗೂಡಿಸಿ, ಅಮೇರಿಕಾ ಸೇರಿದಂತೆ ಹೊರರಾಷ್ಟ್ರಗಳಲ್ಲಿರುವ ಲಿಂಗಾಯತರನ್ನು ಸೇರಸಿಕೊಂಡು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ಯಾವ ರೀತಿಯಲ್ಲಿ ಬೆಂಬಲ ನೀಡದಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ. ರಾಜ್ಯದ 150 ಕ್ಕೂ ಹೆಚ್ಚು ಮಠಾಧೀಶರು ವಿಶ್ವ ಲಿಂಗಾಯತ ಪರಿಷತ್ ಗೆ ಬೆಂಬಲ ನೀಡಿದ್ದಾರೆ. ಇನ್ನೂ ಅನೇಕರು ಬೆಂಬಲ ನೀಡಲಿದ್ದಾರೆ ಹೀಗಾಗಿ ಕೆಲವೇ ಕೆಲವು ವೀರಶೈವರನ್ನು ಹೊರತುಪಡಿಸಿ ಉಳಿದವರೆಲ್ಲರೂ ನಮ್ಮ ಬೆಂಬಲಕ್ಕಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿರು.











Click it and Unblock the Notifications