ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ವಿಚಾರಣೆಗೆ ಕಾನೂನು ಅಧಿಕಾರಿಗಳು ಸಹಮತ
ಬೆಂಗಳೂರು, ಸೆಪ್ಟೆಂಬರ್ 28: ಐದು ವರ್ಷಗಳ ಹಿಂದೆ ಪುತ್ತೂರಿನ ಕಸ್ಬಾ ಗ್ರಾಮದ ಕಿಲ್ಲೆ ಮೈದಾನದಲ್ಲಿ ನಡೆದಿದ್ದ ಪ್ರತಿಭಟನೆಯೊಂದರಲ್ಲಿ ಹಿಂದೂ ಜಾಗರಣ ವೇದಿಕೆ ನಾಯಕ ಜಗದೀಶ್ ಕಾರಂತ ವಿವಾದಾತ್ಮಕ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲು ಪೂರ್ವಾನುಮತಿ ನೀಡಬಹುದು ಎಂದು ಕಾನೂನು ಅಧಿಕಾರಿಗಳು ಸರಕಾರಕ್ಕೆ ಅಭಿಪ್ರಾಯ ಮಂಡಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ದಿ ಫೈಲ್ ವೆಬ್ ಸೈಟ್ ಈ ಕುರಿತು ವರದಿ ಮಾಡಿದೆ. ಜಗದೀಶ್ ಕಾರಂತ್ ಅವರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ವಿಧಾನಪರಿಷತ್ ನ ಸದಸ್ಯ ಎನ್ ರವಿಕುಮಾರ್ ಮತ್ತಿತರರು ಸರಕಾರದ ಮೇಲೆ ಒತ್ತಡ ಹೇರಿರುವ ಬೆನ್ನಲ್ಲೇ ಪುತ್ತೂರಿನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಪೂರ್ವಾನುಮತಿ ನೀಡಲು ಕಾನೂನು ಅಧಿಕಾರಿಗಳು ಸಮ್ಮತಿ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ.
ದೇಶದ ಸುರಕ್ಷತೆ ದೃಷ್ಟಿಯಿಂದ ಪಿಎಫ್ಐ ನಿಷೇಧ ಅವಶ್ಯಕತೆಯಿತ್ತು: ಪ್ರಮೋದ್ ಮುತಾಲಿಕ್
ಸೆಪ್ಟೆಂಬರ್ 15, 2017ರಲ್ಲಿ ಪುತ್ತೂರಿನಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಜಗದೀಶ್ ಕಾರಂತ್ "ಸಂಪ್ಯ ಪೊಲೀಸ್ ಠಾಣೆಯ ಎಎಸ್ಐ ಅಬ್ದುಲ್ ಖಾದರ್ ಸೇರಿ ಮೂವರ ವಿರುದ್ಧ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಎಸ್ಡಿಪಿಐ, ಪಿಎಫ್ಐ ಏಜೆಂಟ್ ರೀತಿ ವರ್ತಿಸುವುದಾದರೆ, ಗೋರಕ್ಷಕರನ್ನು ಶಿಕ್ಷಿಸುವ ಮುಸಲ್ಮಾನನಾದರೆ ನಾನು ಒಬ್ಬ ಹಿಂದೂ ವಾಗಿ ನಿನಗೆ ರಸ್ತೆಯಲ್ಲಿ ಕಲ್ಲು ಹೊಡೆದು ಹುಚ್ಚು ನಾಯಿಯಂತೆ ಏಕೆ ಅಟ್ಟಾಡಿಸಬಾರದು ಎಂದು ಏಕವಚನದಲ್ಲಿ ವಾಗ್ದಾಳಿ," ನಡೆಸಿದ್ದರು.
ನೂರಾರು ಜನರ ಸಮ್ಮುಖದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಎಎಸ್ಐ ಅಬ್ದುಲ್ ಖಾದರ್, ಪೊಲೀಸರಾದ ಚಂದ್ರ ಮತ್ತು ರುಕ್ಮಯ್ಯ ಇವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಅವರ ಮೇಲೆ ಹಲ್ಲೆ ಎಸಗಲು ಪ್ರೇರಣೆ ನೀಡುವ ರೀತಿ ಮಾತನಾಡಿದ್ದರು. ಅಲ್ಲದೆ ಇಸ್ಲಾಮ್ ಧರ್ಮವನ್ನು ಗುರಿಯಾಗಿಸಿ ಮಾತನಾಡಿ ಕೋಮುದ್ವೇಷ ಉಂಟು ಮಾಡುವ ರೀತಿಯಲ್ಲಿ ಭಾಷಣ ಮಾಡಿರುವುದನ್ನು ಕಾನೂನು ಅಧಿಕಾರಿಗಳು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿತನು ಪ್ರತಿಭಟನಾ ಸಭೆಯಲ್ಲಿ ವಿವಾದಾತ್ಮಕ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿರುವುದು ರುಜುವಾತಾಗಿರುವುದರಿಂದ ಐಪಿಸಿ ಕಲಂ 153(ಎ) 505(1)(ಬಿ) 505(2), 189, 504 ಅಡಿಯಲ್ಲಿ ಆರೋಪಿತ ವಿರುದ್ಧದ ಆರೋಪಗಳು ದೃಢಪಟ್ಟಿದೆ.
ಆರೋಪಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸಿಆರ್ಪಿಸಿ ಕಲಂ 196(1) ಮತ್ತು 196(1ಎ) ಅಡಿ ಸರ್ಕಾರವು ಪೂರ್ವಾನುಮತಿ ನೀಡಬಹುದು ಎಂದು ಹಿರಿಯ ಕಾನೂನು ಅಧಿಕಾರಿಗಳು 2022ರ ಸೆ.15ರಂದು ವರದಿ ನೀಡಿರುವುನ್ನು ದಿ ಫೈಲ್ ವರದಿ ಮಾಡಿದೆ.