Gold Smuggling: ರನ್ಯಾ ರಾವ್ ಕಂಪನಿಗೆ ಭೂಮಿ ಹಂಚಿಕೆ! ಬಸವರಾಜ ಬೊಮ್ಮಾಯಿ ಮಹತ್ವದ ಮಾಹಿತಿ
ಬೆಂಗಳೂರು, ಮಾರ್ಚ್ 10: ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ರನ್ಯಾ ರಾವ್ ಅವರು 138 ಕೋಟಿ ಹೂಡಿಕೆಯ ಕಂಪನಿಗೆ ಬಿಜೆಪಿ ಅವಧಿಯಲ್ಲಿ 12 ಎಕರೆ ಭೂಮಿ ನೀಡಲಾಗಿದೆ. ಅದಾಗಿ ಎರಡು ವರ್ಷಗಳ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಜಾಲದಲ್ಲಿ ಇರುವವರನ್ನು ಪತ್ತೆ ಹಚ್ಚಲು ಸಮಗ್ರ ಮತ್ತು ಆಳವಾದ ತನಿಖೆ ನಡೆಸಬೇಕು. ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ ಜಮೀನು ನೀಡಿರುವುದು ಮುಖ್ಯಮಂತ್ರಿಯ ಹಂತದವರೆಗೂ ಬಂದಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ತುಮಕೂರಿನ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಕಂಪನಿಗೆ ನಮ್ಮ ಅವಧಿಯಲ್ಲಿ ಜಮೀನು ನೀಡಿದ್ದೇವೆ. ಆ ಕಂಪನಿಯಲ್ಲಿ ಈಗ ಆರೋಪಿತೆಯಾಗಿರುವ ರನ್ಯಾರಾವ್ ಅವರು ನಿರ್ದೇಶಕಿಯಾದ್ದಾರೆ. ಯಾರೇ ಉದ್ದಿಮೆ ಮಾಡುತ್ತೇವೆ ಎಂದು ಬಂದರೂ ಅವರಿಗೆ ಷರತ್ತು ಬದ್ಧವಾಗಿ, ನಿಯಮಗಳಡಿ ಜಾಗ ನೀಡಬೇಕಾಗುತ್ತದೆ. ನಿಯಮಗಳಡಿ ಈಗಿನ ಕಾಂಗ್ರೆಸ್ ಸರ್ಕಾರವು ಕೈಗಾರಿಕೆ ಉದ್ದೇಶದಿಂದ ಜಾಗ ನೀಡುತ್ತದೆ.

ನಿಯಮಗಳ ಅಡಿಯಲ್ಲಿ ಜಮೀನು ನೀಡಲಾಗಿತ್ತು
ಬಿಜೆಪಿ 2023ರಲ್ಲಿ ಲ್ಯಾಂಡ್ ಆಡಿಟ್ ಕಮಿಟಿ ನಿರ್ಧಾರದ ಮೇಲೆ ನೀಡಲಾಗುತ್ತದೆ. ಈ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು ಇರುತ್ತಾರೆ. ಅವರು ಸಂಬಂಧಪಟ್ಟ ಕಂಪನಿಗೆ ಎಷ್ಟು ಜಮೀನು ಬೇಕು, ಯಾವ ಭಾಗದಲ್ಲಿ ಜಮೀನು ಬೇಕಿದೆ ಎನ್ನುವುದನ್ನು ಪರಿಶೀಲಿಸಿ ಶಿಫಾರಸ್ಸು ಮಾಡುತ್ತಾರೆ.
ರೂ.500 ಕೋಟಿಗೂ ಕಡಿಮೆ ಹೂಡಿಕೆ ಸಿಎಂ ವ್ಯಾಪ್ತಿಗೆ ಬಾರದು!
ಇಲ್ಲಿ ಮುಖ್ಯವಾಗಿ 500 ಕೋಟಿ ರೂ.ಗಿಂತ ಕಡಿಮೆ ಕೈಗಾರಿಕೆ ಯೋಜನೆಗಳಿಗೆ ಕೈಗಾರಿಕೆ ಸಚಿವರ ಹಂತದಲ್ಲಿ ಹಂತದಲ್ಲಿ ಸಿಂಗಲ್ ವಿಂಡೊ ಪ್ರೊಸಿಡಿಂಗ್ ಮೂಲಕ ಭೂಮಿ ಹಂಚಿಕೆ ಮಾಡುತ್ತಾರೆ. ಹೀಗಾಗಿ ಇದು ಮುಖ್ಯಮಂತ್ರಿಯವರೆಗೂ ಬರುವುದಿಲ್ಲ ಎಂದು ಅವರು ರನ್ಯಾ ರಾವ್ ಕಂಪನಿಗೆ ಭೂಮಿ ಹಂಚಿಕೆ ಬಗ್ಗೆ ವಿವರಿಸಿದರು.
ಅದೇ ರೀತಿ ರನ್ಯಾ ರಾವ್ ಅವರಿಗೆ ಜಮೀನು ನೀಡಲಾಗಿದೆ. ಅವರಿಗೆ ಜಮೀನು ಹಂಚಿಕೆ ಮಾಡಿದ ಮೇಲೆ ಅವರಿಗೆ ಹಣ ಕಟ್ಟುವಂತೆ ನೊಟೀಸ್ ನೀಡಲಾಗಿದೆ. ಅವರು ಹಣ ಕಟ್ಟದಿರುವುದರಿಂದ ಅವರಿಗೆ ಭೂಮಿ ಹಂಚಿಕೆ ಮಾಡಿಲ್ಲ. ಅದು ಕೆಐಎಡಿಬಿ ವಶದಲ್ಲೇ ಇದೆ ಎಂದು ಸ್ಪಷ್ಟಪಡಿಸಿದರು.

ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಭೂಮಿ ಮಂಜೂರು
ಉದ್ದಿಮೆ ಸ್ಥಾಪಿಸಲು ಹಲವಾರು ಅರ್ಜಿಗಳು ಬಂದಾಗ ರಾಜ್ಯದ 'ಅಭಿವೃದ್ಧಿ ದೃಷ್ಟಿಯಿಂದ ಉದ್ಯಮಗಳಿಗೆ ಜಮೀನು ನೀಡುತ್ತೇವೆ. ಈಗಿನ ಸರ್ಕಾರವೂ ಕೂಡ ಲಕ್ಷಾಂತರ ಕೋಟಿ ರೂ. ಜಮೀನು ಹಂಚಿಕೆ ಮಾಡಿರುತ್ತದೆ. ಭೂಮಿ ಪಡೆದು ವರ್ಷಗಳ ಬಳಿಕ ಯಾರೋ ಅಪರಾಧ ಕೃತ್ಯದಲ್ಲಿ ತೊಡಗುತ್ತಾರೆ. ಏನು ಮಾಡುತ್ತಾರೆ ಎಂದು ಗೊತ್ತಿರುವುದಿಲ್ಲ. ಅದನ್ನು ಊಹೆ ಮಾಡಲು ಆಗುವುದಿಲ್ಲ. ನಟಿ ದುಬೈನಿಂದ ಅಕ್ರಮವಾಗಿ ಚಿನ್ನ ತಂದಿರುವ ಬಗ್ಗೆ ತನಿಖೆ ನಡೆಯುತ್ತಿದೆ. 'ಎಲ್ಲ ಆಯಾಮದಿಂದಲೂ ತನಿಖೆ ನಡೆಯಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಅವರು ಆಗ್ರಹಿಸಿದರು.
ಪ್ರಕರಣದಲ್ಲಿ ಇಬ್ಬರು ಸಚಿವರ ಕೈವಾಡ: ಬೊಮ್ಮಾಯಿ ಏನಂದ್ರು?
ಈ ಚಿನ್ನ ಕಳ್ಳ ಸಾಗಾಣೆಯಲ್ಲಿ ಇಬ್ಬರು ಸಚಿವರು ಹೆಸರು ವರದಿಯಾಗಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆ ಬಗ್ಗೆಯೂ ಸಂಪೂರ್ಣವಾಗಿ ತನಿಖೆ ನಡೆಯಬೇಕು. ಈ ಅಕ್ರಮ ಒಂದು ಬಾರಿ ನಡೆದಿರುವಂತೆ ಕಾಣಿಸುತ್ತಿಲ್ಲ. ಇದಕ್ಕೆ ಬೆಂಬಲವಾಗಿ ಇರುವುವವರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಸತ್ಯ ಹೊರ ತರಬೇಕು.
ಇದರಲ್ಲಿ ಅಧಿಕಾರಿಗಳ ಪಾತ್ರ ಇಲ್ಲದೆ ಇಷ್ಟುದೊಡ್ಡ ಅಕ್ರಮ ನಡೆಯಲು ಸಾಧ್ಯವಿಲ್ಲ. ಇದರ ಹಿಂದಿರುವ ಜಾಲವನ್ನು ಸಂಪೂರ್ಣವಾಗಿ ಭೇಧಿಸಬೇಕು. ಸಿಬಿಐ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಯಾರ ಪಾತ್ರ ಇದೆ ಎನ್ನುವುದು ಹೊರಕ್ಕೆ ಬರುತ್ತದೆ. ಹೀಗಾಗಿ ಇದರ ಬಗ್ಗೆ ಆಳವಾಗಿ ತನಿಖೆಯಾದರೆ ಎಲ್ಲ ಸತ್ಯವೂ ಹೊರ ಬರಲಿದೆ ಎಂದು ಹೇಳಿದರು.
ತಪ್ಪು ಮುಚ್ಚಿಕೊಳ್ಳಲು ಗ್ರೇಟರ್ ಬೆಂಗಳೂರು
ಬೆಂಗಳೂರು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಸ್ತೆಗಳ ರಿಪೇರಿಯಿಂದ ಹಿಡಿದು ಹೊಸ ರಸ್ತೆ ನಿರ್ಮಾಣ ಮಾಡುವುದರಿಂದ ಹಿಡಿದು, ಚರಂಡಿ ನಿರ್ವಹಣೆ ಮಾಡುವುದನ್ನು ಸರಿಯಾಗಿ ಮಾಡಿಲ್ಲ ಸುಮ್ಮನೆ ಎರಡು ವರ್ಷ ಬ್ರಾಂಡ್ ಬೆಂಗಳೂರು ಅಂತ ಅರ್ಜಿ ತೆಗೆದುಕೊಂಡು ಎಲ್ಲಿ ಹಾಕಿದ್ದಾರೊ ಗೊತ್ತಿಲ್ಲ. ಬಜೆಟ್ನಲ್ಲಿಯೂ ಕೂಡ ಕಾರ್ಯಸಾಧುವಾಗುವಂತೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ನಮ್ಮ ಕಾಲದಲ್ಲಿ ತೀರ್ಮಾನ ಮಾಡಿರುವ ವಿಶ್ವ ಬ್ಯಾಂಕಿನಿಂದ 1700 ಕೋಟಿ ರೂ ಸಾಲ ನೀಡುವ ಯೋಜನೆ ಈಗ ಅಂತಿಮವಾಗಿದೆ.
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು, ದೇವರು ಬಂದರೂ ಇದನ್ನು ಸರಿ ಮಾಡಲು ಸಾಧ್ಯವಿಲ್ಲ ಎಂಬ ಸರ್ಕಾರದ ಧೋರಣೆಯಿದೆ. ಬೆಂಗಳೂರಿನ ವಿಸ್ತರಣೆ ಎಷ್ಟಿದೆ ಅಷ್ಟೇ ಇದೆ. ಈಗಾಗಲೇ ವಲಯಗಳಿಗೊಬ್ಬರು ಮುಖ್ಯ ಎಂಜನೀಯರ್ ಇದ್ದಾರೆ. ಈಗ ಎಲ್ಲ ವಲಯಗಳಿಗೆ ಆಯುಕ್ತರನ್ನು ಮಾಡಲು ಹೊರಟಿದ್ದಾರೆ. ಅದು ಪರಿಹಾರವಲ್ಲ. ಅದರ ಬದಲು ಯೋಜನಾ ಬದ್ಧವಾಗಿ ಹಣಕಾಸು ಒದಗಿಸಬೇಕು. ನಮ್ಮ ಕಾಲದಲ್ಲಿ ಎರಡು ಉಪ ನಗರಗಳನ್ನು ಮಾಡಲು ಯೋಚಿಸಿದ್ದೇವು. ಅವುಗಳನ್ನು ಮಾಡಿ ಸಂಪರ್ಕ ಕಲ್ಪಿಸಿ, ಅದರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಪರಿಷ್ಕರಣೆಗೆ ಅವಸರ ಬೇಡ
ಇದೇ ವೇಳೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಪರಿಷ್ಕರಣೆ ಮಾಡಲು ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೇಷನ್ ಕಾರ್ಡ್ ಪರಿಷ್ಕರಣೆ ಮಾಡುವ ಮೊದಲು ರಾಜ್ಯ ಸರ್ಕಾರ ಅವಸರದ ತೀರ್ಮಾನ ಮಾಡಬಾರದು. ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮೊದಲು ಎರಡು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ, ಅಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ನಂತರ ರಾಜ್ಯಾದ್ಯಂತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರನ್ಯಾ ರಾವ್ಗೆ ಬಿಜೆಪಿ ಮಂಜೂರು: ಎಂಬಿ ಪಾಟೀಲ್
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಅವರ ಟಿಎಂಟಿ ಸರಳು ತಯಾರಿಸುವ ಯೋಜನೆಗೆ ಹಿಂದಿನ ಬಿಜೆಪಿ ಸರಕಾರ ಅನುಮೋದನೆ ನೀಡಿತ್ತು. ಇದಕ್ಕೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಜಮೀನು ಮಂಜೂರು ಮಾಡಲು 2023ರ ಜನವರಿ 2ರಂದು ನಡೆದಿದ್ದ ಉನ್ನತ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ತೀರ್ಮಾನಿಸಿತ್ತು. ಆದರೆ ರನ್ಯಾ ಅವರು ನಿಗದಿತ ಅವಧಿಯಲ್ಲಿ ಹಣ ಪಾವತಿಸದ ಕಾರಣ ಅವರಿಗೆ ಜಮೀನಿನ ಹಂಚಿಕೆ ಮಾಡಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಸೋಮವಾರ ವಿಧಾನಸೌಧದಲ್ಲಿ ಸ್ಪಷ್ಟಪಡಿಸಿದರು.












Click it and Unblock the Notifications