ಶೌಚಾಲಯದಲ್ಲಿ ಮಹೀಳಾ ಪೇದೆ ಮೊಬೈಲ್ ನಂಬರ್ ! ಅಮೇಲೆ ಏನಾಯ್ತು ?
ಬೆಂಗಳೂರು, ಡಿಸೆಂಬರ್ 23 : ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ಮಹಿಳಾ ಪೊಲೀಸ್ ಪೇದೆಯ ಮೊಬೈಲ್ ನಂಬರ್ ನ್ನು ಬರೆದು ಕಿಡಿಗೇಡಿ ವಿಕೃತಿ ಮೆರೆದಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುವ ಮಹಿಳಾ ಪೇದೆಗೆ ದಿನ ನಿತ್ಯ ನೂರಾರು ಕರೆ ಮಾಡಿ ಜನ ಅಶ್ಲೀಲವಾಗಿ ಮಾತನಾಡುತ್ತಿದ್ದರು ! ರೋಸಿ ಹೋದ ಮಹಿಳಾ ಪೇದೆ ಇದೀಗ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ !
ಇಂತಹ ವಿಚಿತ್ರ ಅಪರಾಧ ಪ್ರಕರಣವೊಂದು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಯಲಹಂಕ ಎಸಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೇದೆ ಶಭಾನಾ ಅವರು ಹನ್ನೆರಡು ವರ್ಷದಿಂದ ಬಳಸುತ್ತಿದ್ದ ಏರ್ ಟೆಲ್ ಮೊಬೈಲ್ ನಂಬರ್ ಗೆ ಅಪರಿಚಿತರಿಂದ ಕರೆಗಳು ಬರುತ್ತಿದ್ದವು. ತೀರಾ ಅಶ್ಲೀಲವಾಗಿ ಮಾತನಾಡುತ್ತಿದ್ದರು. ಇನ್ನೂ ಕೆಲವರು ಕರೆ ಮಾಡಿ, ನಾನು ಕಡೂರಿನಿಂದ ಮಾತನಾಡುತ್ತಿದ್ದೀನಿ..ಎಲ್ಲಿದ್ದೀಯಾ, ಬರುತ್ತೀಯಾ ಎಂದು ಕೆಟ್ಟದಾಗಿ ಮಾತನಾಡಿದ್ದಾರೆ. ಇದರಿಂದ ಬೇಸತ್ತ ಮಹಿಳಾ ಪೇದೆ ಶಭಾನಾ ಅವರು, ಕರೆ ಮಾಡಿದವರನ್ನು ವಿಚಾರಿಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಕಿರಣ್ ಮತ್ತು ಚೇತನ್ ಎಂಬುವರನ್ನು ಪ್ರಶ್ನಿಸಿದಾಗ, ನಿಮ್ಮ ನಂಬರ್ ಕಡೂರಿನ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ಸಿಕ್ಕಿತು. ನಿಮಗೆ ಬೇಕಾ ಎಂದು ನಿಮ್ಮ ಹೆಸರು ಬರೆದು ಸಂಪರ್ಕಿಸಿ ಎಂದು ಮೊಬೈಲ್ ನಂಬರ್ ಬರೆದಿದ್ದಾರೆ ಎಂದು ಅಶ್ಲೀಲವಾಗಿ ಬರೆದು ಮೊಬೈಲ್ ನಂಬರ್ ಶೌಚಾಲಯದಲ್ಲಿ ಬರೆದಿರುವ ವಿಷಯವನ್ನು ಪೊಲೀಸ್ ಪೇದೆಗೆ ತಿಳಿಸಿದ್ದಾರೆ.
ಸಾರ್ವಜನಿಕರಿಂದ ಬರುತ್ತಿರುವ ಕರೆಗಳನ್ನು ಸ್ವೀಕರಿಸಲಾಗದೇ ಮಹಿಳಾ ಪೇದೆ ಸದ್ಯ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಅಲ್ಲದೇ ಈ ಕೃತ್ಯವನ್ನು ಎಸಗಿರುವ ಕಿಡಿಗೇಡಿ ಸಹಪಾಠಿ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ಶಭಾನಾ ದೂರು ನೀಡಿದ್ದಾರೆ.
ಸಹಪಾರಿ ಕೃತ್ಯ: ಮಹಿಳಾ ಪೇದೆ ಶಭಾನಾ ಕಡೂರಿನ ದೊಡ್ಡಪೇಟೆಯ ಕನಕದಾಸ ಶಿಕ್ಷಕರ ತರಬೇತಿ ಕೇಂದ್ರದಲ್ಲಿ 2007-08 ರಲ್ಲಿ ತರಬೇತಿ ಪಡೆಯುತ್ತಿದ್ದರು. ಸಹಪಾಠಿಯಾಗಿದ್ದ ಸತೀಶ್ ಎಂಬಾತನೇ ಈ ಕೃತ್ಯ ಎಸಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಇತ್ತೀಚೆಗೆ ಕಡೂರಿನ ಕನಕದಾಸ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದವರ ಬಗ್ಗೆ ಕಿರಣ್ ಎಂಬಾತ ಕನಕದಾಸ ಶಿಕ್ಷಕರ ಬಳಗ ಎಂಬ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿದ್ದರು. ಇದರಿಂದ ಶಭಾನಾ ಅವರ ಮೊಬೈಲ್ ನಂಬರ್ ಪಡೆದಿದ್ದ ಸತೀಶ ಎಂಬಾತ ಸಂದೇಶ ರವಾನಿಸುತ್ತಿದ್ದ. ಊಟಾ ಆಯಿತಾ, ತಿಂಡಿ ಆಯಿತಾ ಎಂದೆಲ್ಲಾ ಕೇಳುತ್ತಿದ್ದ. ಇದಕ್ಕೆ ಶಭಾನಾ ಉತ್ತರ ನೀಡಿರಲಿಲ್ಲ. ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಇದರಿಂದ ಸಿಟ್ಟಿಗೆದ್ದಿದ್ದ ಸತೀಶ ಶಭಾನಾ ಮತ್ತು ವೀಣಾ ಎಂಬುವರ ಮೊಬೈಲ್ ನಂಬರ್ ನ್ನು ವಾಟ್ಸಪ್ ಗ್ರೂಪ್ ನಿಂದ ತೆಗೆದು ಹಾಕಿದ್ದ. ಹಳೇ ಸಹಪಾಠಿಗಳಿದ್ದ ಗ್ರೂಪ್ ನಿಂದ ನಂಬರ್ ತೆಗೆದು ಹಾಕಿದ ಬಗ್ಗೆ ಸತೀಶನಿಗೆ ಕರೆ ಮಾಡಿ ಶಭಾನಾ ಜಗಳ ತೆಗೆದಿದ್ದರು.
ಇದೇ ದ್ವೇಷದಿಂದ ಸತೀಶ್ ಕಡೂರಿನ ಸಾರ್ವಜನಿಕ ಶೌಚಾಲಯದಲ್ಲಿ ಅಶ್ಲೀಲ ಪದಗಳನ್ನು ಬರೆದು ಅದರ ಬಳಿ ಪೊಲೀಸ್ ಪೇದೆಯ ನಂಬರ್ ಬರೆದಿದ್ದಾನೆ. ಶೌಚಾಲಯಕ್ಕೆ ಹೋದವರೆಲ್ಲರೂ ಕರೆ ಮಾಡಿ ಶಭಾನಾಗೆ ಟಾರ್ಚರ್ ನೀಡಿದ್ದಾರೆ.
Recommended Video
ದುರುದ್ದೇಶ ಪೂರ್ವಕವಾಗಿ ಈ ಕೃತ್ಯ ವನ್ನು ಸತೀಶ್ ಎಸಗಿದ್ದಾನೆ ಎಂದು ಆರೋಪಿಸಿ ಶಭಾನಾ ಅವರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಶಭಾನಾ ಮೇಲಿನ ದ್ವೇಷದಿಂದ ಸತೀಶನೇ ಈ ಕೃತ್ಯ ಎಸಗಿರುವ ಸಂಶಯ ವ್ಯಕ್ತವಾಗಿದ್ದು, ಕಿಡಿಗೇಡಿ ಕೃತ್ಯ ಎಸಗಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.