ಬೆಂಗಳೂರು ನೋಡಲು ಕೆಎಸ್ಟಿಡಿಸಿ ಒಂದು ದಿನದ ಪ್ಯಾಕೇಜ್ ಟೂರ್
ಬೆಂಗಳೂರು ಜು.7: ಉದ್ಯಾನ ನಗರಿಯಲ್ಲೇ ಇದ್ದು ಬೆಂಗಳೂರು ನೋಡಿರದ ಮತ್ತು ಹೊರ ರಾಜ್ಯ, ಹೊರ ಜಿಲ್ಲೆಗಳ ಜನರು ಸಹ ಒಂದು ದಿನದಲ್ಲಿ ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಬಂದಿದೆ.
ಒಂದು ದಿನದಲ್ಲಿ ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ಕೈಗೆಟುಕುವ ಬೆಲೆಯಲ್ಲಿ ನೋಡಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಅವಕಾಶ ಕಲ್ಪಿಸಿದೆ.
ನಿಗಮವು 50ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರವಾಸಿಗರಿಗಾಗಿ ಇಂಥದ್ದೊಂದು 'ಬೆಂಗಳೂರು ನಗರ ಪ್ರವಾಸ'ವನ್ನು ಪರಿಚಯಿಸಿದೆ. ಇದಕ್ಕಾಗಿ ನಿಗಮವು ಉತ್ತಮ ಬಸ್ ವ್ಯವಸ್ಥೆ ಮಾಡಿದ್ದು, ಒಬ್ಬರಿಗೆ 340ರೂ. ನಿಗದಿಪಡಿಸಿದೆ.
ಪ್ರತಿ ನಿತ್ಯ ಬೆಳಗ್ಗೆ 10.30ರಿಂದ ಸಂಜೆ 6.30.ರವರೆಗೆ ನಗರದ ಐತಿಹಾಸಿಕ ಹಿನ್ನೆಲೆಯ ಸ್ಥಳ, ಉದ್ಯಾನಗಳನ್ನು ಸೇರಿದಂತೆ ಸುಮಾರು 8 ಸ್ಥಳಗಳನ್ನು ಈ ಪ್ಯಾಕೇಜ್ ಮೂಲಕ ನೋಡಬಹುದಾಗಿದೆ. ಪ್ಯಾಕೇಜ್ ವಿವರಗಳನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನೀಡಿದೆ.
ಯಾವ ಸ್ಥಳಗಳು; ಒಂದು ದಿನದ ಈ 'ಬೆಂಗಳೂರು ನಗರ ಪ್ರವಾಸ' ಉಪಕ್ರಮದಲ್ಲಿ ಪ್ರವಾಸಿಗರು ಬೆಂಗಳೂರಿನಲ್ಲಿ ಪ್ರಸಿದ್ಧವಾದ ಹಾಗೂ ಕಡಲೆ ಕಾಯಿ ಪರಿಷೆ ನಡೆಯುವ ಬಸವನಗುಡಿಯ ಬುಲ್ ಟೆಂಪಲ್ (ದೊಡ್ಡ ಬಸವಣ್ಣ ದೇವಸ್ಥಾನ) ಮತ್ತು ಗವಿಗಂಗಾಧರೇಶ್ವರ ದೇವಸ್ಥಾನಗಳು, ಟಿಪ್ಪು ಅರಮನೆ, ಲಾಲ್ಬಾಗ್ ಉದ್ಯಾನವನ, ವಿಧಾನಸೌಧ ಮತ್ತು ಹೈಕೋರ್ಟ್ (ಹೊರಗಿನಿಂದ ಮಾತ್ರ) ನೋಡಬಹುದು.
ಈ ಪ್ರವಾಸಿ ಬಸ್ ಮೂಲಕ ಸರ್. ಎಂ. ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಸರ್ಕಾರಿ ವಸ್ತು ಸಂಗ್ರಹಾಲಯ ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿ ಗಳನ್ನು ವೀಕ್ಷಿಸಬಹುದಾಗಿದೆ.
ಒಟ್ಟು 340 ರೂ. ನಲ್ಲಿ ಒಬ್ಬರು ಸುಮಾರು ಎಂಟು ಸ್ಥಳಗಳನ್ನು ನೋಡಬಹುದು. ಪ್ರವಾಸೋದ್ಯಮ ಇಲಾಖೆಯ ಈ ಉಪಕ್ರದಿಂದಾಗಿ ನಗರ ಸಂಚಾರ ದಟ್ಟಣೆಯಲ್ಲಿ ಕಾಯುವುದು, ಪ್ರವಾಸಿ ತಾಣದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಕಷ್ಟಪಡುವುದು ತಪ್ಪಲಿದೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಕೆಎಸ್ ಟಿಡಿಸಿ ವೆಬ್ ಸೈಟ್ಗೆ ಭೇಟಿ ನೀಡಬೇಕು. ಇಲ್ಲವೇ ದೂ. 080 43344334 ಇಲ್ಲವೇ ಮೊ.89706 50070ಗೆ ಸಂಪರ್ಕಿಸುವಂತೆ ನಿಗಮ ಮನವಿ ಮಾಡಿದೆ.
ನಿಗಮವು ತನ್ನ ಫೇಸ್ಬುಕ್ ಪೇಜ್ ನಲ್ಲಿ 'ಬೆಂಗಳೂರು ನಗರ ಪ್ರವಾಸ' ಕುರಿತು ಮಾಹಿತಿ ಹಂಚಿಕೊಂಡಿದೆ.
ಕೆಲವರು ಪ್ರವಾಸದ ವೇಳೆ ಊಟದ ವ್ಯವಸ್ಥೆ ಕುರಿತು ಪ್ರಶ್ನಿಸಿದರೆ, ಇನ್ನೂ ಕೆಲವರು ಪ್ರವಾಸದ ಪಟ್ಟಿಯಲ್ಲಿ ರಾಧಾಕೃಷ್ಣ ಮಂದಿರ (ಇಸ್ಕಾನ್) ಸೇರಿಸಲು, ಪ್ರವಾಸಿಗರನ್ನು ಕರೆದೊಯ್ಯುವ ಮತ್ತು ಸಂಜೆ ಬಿಡುವ ಸ್ಥಳ ಕುರಿತು ಮಾಹಿತಿ ಕೇಳುತ್ತಿದ್ದಾರೆ.
Recommended Video