ಪೀಣ್ಯ ಬಸ್ ನಿಲ್ದಾಣಕ್ಕೆ ಹೋಗುವುದು ಅನಿವಾರ್ಯ
ಬೆಂಗಳೂರು, ಸೆ.15 : ಕೆಎಸ್ಆರ್ಟಿಸಿ ಪೀಣ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಬಸ್ ನಿಲ್ದಾಣ ಸೆ.10ರಿಂದ ಕಾರ್ಯಾರಂಭ ಮಾಡಿದ್ದು, 146 ಬಸ್ಸುಗಳು ಮಾತ್ರ ನಿಲ್ದಾಣದಿಂದ ಸಂಚರಿಸುತ್ತಿವೆ. ದೀಪಾವಳಿ ನಂತರ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ಸುಗಳಲ್ಲಿ ಪ್ರಯಾಣಿಸಲು ಜನರು ಪೀಣ್ಯಕ್ಕೆ ಹೋಗುವುದು ಅನಿವಾರ್ಯವಾಗಿದೆ.
ಬಸವೇಶ್ವರ ಬಸ್ ನಿಲ್ದಾಣದ ಸಹಾಯಕ ಸಂಚಾರ ನಿರೀಕ್ಷಕರಾದ ರವೀಂದ್ರ ನಾಥ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಎರಡನೇ ಹಂತದಲ್ಲಿ ನಿಲ್ದಾಣಕ್ಕೆ ಶಿವಮೊಗ್ಗ, ಬಳ್ಳಾರಿ, ಹಾಸನ ಭಾಗಗಳಿಗೆ ತೆರಳುವ ಸಾಮಾನ್ಯ ಬಸ್ಸುಗಳನ್ನು ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ ಅಂತ್ಯದಲ್ಲಿನ ಸಾಲು-ಸಾಲು ರಜೆ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ದೀಪಾವಳಿ ಇರುವುದರಿಂದ ಸ್ಥಳಾಂತರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. [ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಹೇಗಿದೆ ಗೊತ್ತೆ?]
ದಸರಾ ಮತ್ತು ದೀಪಾವಳಿ ಮುಗಿದ ನಂತರ ಕೆಎಸ್ಆರ್ಟಿಸಿ ಸ್ಥಳಾಂತರ ಪ್ರಕ್ರಿಯೆ ಆರಂಭಿಸಲಿದ್ದು ನಂತರ ಕುಣಿಗಲ್, ತುಮಕೂರು ಮತ್ತು ಹಾಸನ ವಿಭಾಗದ ಬಸ್ಸುಗಳು ಇಲ್ಲಿಗೆ ಆಗಮಿಸಲಿವೆ ಎಂದು ಹೇಳಿದ್ದಾರೆ. ಸಾಮಾನ್ಯ ಬಸ್ಸುಗಳನ್ನು ಮಾತ್ರ ಇಲ್ಲಿಗೆ ಸ್ಥಳಾಂತರಿಸುತ್ತಿದ್ದು, ರಾಜಹಂಸ, ಐರಾವತ ಬಸ್ಸುಗಳು ಎಂದಿನಂತೆ ಮೆಜೆಸ್ಟಿಕ್ನಿಂದ ಹೊರಡಲಿವೆ. ಭವಿಷ್ಯದಲ್ಲಿ ಅವುಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ರವೀಂದ್ರ ನಾಥ್ ಹೇಳಿದ್ದಾರೆ. ರವೀಂದ್ರ ನಾಥ್ ಸಂದರ್ಶನದ ವಿವರ ಇಲ್ಲಿದೆ. [ಬಸವೇಶ್ವರ ನಿಲ್ದಾಣದಿಂದ ಬಿಎಂಟಿಸಿ ಸಂಪರ್ಕ ಸೇವೆ]

ದೀಪಾವಳಿ ನಂತರ ಎಲ್ಲಾ ಬಸ್ ಪೀಣ್ಯಕ್ಕೆ ಸ್ಥಳಾಂತರ
ಅಕ್ಟೋಬರ್ ತಿಂಗಳಿನಲ್ಲಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಎಲ್ಲಾ ಸಾಮಾನ್ಯ ಬಸ್ಸುಗಳನ್ನು ಸ್ಥಳಾಂತರಿಸಲಾಗುತ್ತದೆ ಎಂದು ಬಸವೇಶ್ವರ ಬಸ್ ನಿಲ್ದಾಣದ ಸಹಾಯಕ ಸಂಚಾರ ನಿರೀಕ್ಷಕರಾದ ರವೀಂದ್ರ ನಾಥ್ ಹೇಳಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಡೆ ಸಾಗುವ ಸಾಮಾನ್ಯ ಬಸ್ಸುಗಳು ಮಾತ್ರ ಸಂಚರಿಸಲಿವೆ.

ಮೂರು ವಿಭಾಗಗಳ ಬಸ್ಸುಗಳ ಸ್ಥಳಾಂತರ
ಸದ್ಯ ಉತ್ತರ ಕರ್ನಾಟಕ ಭಾಗಕ್ಕೆ ಸಾಗುವ 146 ಬಸ್ಸುಗಳನ್ನು ಮಾತ್ರ ಪೀಣ್ಯಕ್ಕೆ ಸ್ಥಳಾಂತರ ಮಾಡಲಾಗಿದೆ. ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಸಾಲು-ಸಾಲು ರಜೆ ಇರುವುದರಿಂದ ಪೀಣ್ಯಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಹಬ್ಬದ ಬಳಿಕ 1,100 ಬಸ್ಸುಗಳು ಪೀಣ್ಯದಿಂದಲೇ ಸಂಚರಿಸಲಿದ್ದು, ಸಾಮಾನ್ಯ ಬಸ್ಸುಗಳಲ್ಲಿ ಪ್ರಯಾಣಿಸಲು ಪೀಣ್ಯಕ್ಕೆ ಹೋಗುವುದು ಅನಿವಾರ್ಯವಾಗಲಿದೆ.

ಎಲ್ಲಿಯ ಬಸ್ಸುಗಳ ಸ್ಥಳಾಂತರ
ಕುಣಿಗಲ್, ತುಮಕೂರು, ಹಾಸನ ವಿಭಾಗಗಳ ಬಸ್ಸುಗಳು ಪೀಣ್ಯಕ್ಕೆ ಸ್ಥಳಾಂತರಗೊಳ್ಳಲಿವೆ ಎಂದು ರವೀಂದ್ರ ನಾಥ್ ಹೇಳಿದ್ದಾರೆ. ಸುಲಭವಾಗಿ ಹೇಳುವುದಾದದರೆ ನೆಲಮಂಗಲದಿಂದ ಮುಂದೆ ಸಾಗುವ ಎಲ್ಲಾ ಸಾಮಾನ್ಯ ಬಸ್ಸುಗಳು ಇನ್ನು ಮುಂದೆ ಪೀಣ್ಯದಿಂದಲೇ ಕಾರ್ಯನಿರ್ವಹಿಸಲಿವೆ. ಅದಕ್ಕಾಗಿ ನಿಲ್ದಾಣದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ರವೀಂದ್ರ ನಾಥ್ ತಿಳಿಸಿದರು.

ಸಾಮಾನ್ಯ ಬಸ್ಸುಗಳು ಮಾತ್ರ ಸ್ಥಳಾಂತರ
ಕೆಎಸ್ಆರ್ಟಿಸಿ ಸದ್ಯ ಸಾಮಾನ್ಯ ಬಸ್ಸುಗಳನ್ನು ಮಾತ್ರ ಪೀಣ್ಯಕ್ಕೆ ಸ್ಥಳಾಂತರ ಮಾಡುತ್ತಿದೆ. ರಾಜಹಂಸ, ಐರಾವತ ಸೇರಿದಂತೆ ಐಷಾರಾಮಿ ಬಸ್ಸುಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದಲೇ ಸಂಚರಿಸಲಿವೆ. ಭವಿಷ್ಯದಲ್ಲಿ ಈ ಬಸ್ಸುಗಳನ್ನು ಸ್ಥಳಾಂತರಿಸುವ ಯೋಚನೆಯೂ ಕೆಎಸ್ಆರ್ಟಿಸಿ ಮುಂದಿದೆ.

ಮೆಜೆಸ್ಟಿಕ್ನಲ್ಲಿ ಯಾವ ಬಸ್ ಇರುತ್ತದೆ
ಎಲ್ಲಾ ಬಸ್ಸುಗಳು ಪೀಣ್ಯಕ್ಕೆ ಸ್ಥಳಾಂತರವಾದ ಬಳಿಕ ಮೆಜೆಸ್ಟಿಕ್ನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಡೆ ಸಾಗುವ ಬಸ್ಸುಗಳು ಮಾತ್ರ ಉಳಿಯಲಿವೆ. ಕೆಎಸ್ಆರ್ಟಿಸಿ ಯೋಜನೆಯಂತೆ ಮೈಸೂರು ಭಾಗದ ಬಸ್ಸುಗಳು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ, ತುಮಕೂರು ಕಡೆ ಸಾಗುವ ಬಸ್ಸುಗಳು ಪೀಣ್ಯ ಕಡೆ ಸ್ಥಳಾಂತರಗೊಳ್ಳುತ್ತವೆ. ಐಷಾರಾಮಿ ಬಸ್ಸುಗಳಿಗೆ ಮಾತ್ರ ಮೆಜೆಸ್ಟಿಕ್ ನಿಲ್ದಾಣ ಬಳಕೆಯಾಗಲಿವೆ.

ಸಂಪರ್ಕ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ
ಪೀಣ್ಯ ಬಸ್ ನಿಲ್ದಾಣಕ್ಕೆ ಕೆಎಸ್ಆರ್ಟಿಸಿ ಸಂಪರ್ಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 15 ನಿಮಿಷಕ್ಕೊಮ್ಮೆ ರಾತ್ರಿ ವೇಳೆ 30 ನಿಮಿಷಕೊಮ್ಮೆ ಸಂಪರ್ಕ ಸಾರಿಗೆ ಬಸ್ಗಳು ಮೆಜೆಸ್ಟಿಕ್ನಿಂದ ಪೀಣ್ಯ, ಪೀಣ್ಯದಿಂದ ಮೆಜೆಸ್ಟಿಕ್ಗೆ ಪ್ರಯಾಣಿಕರನ್ನು ತಲುಪಿಸಲಿವೆ. ಹಾಗಯೇ ಬಿಎಂಟಿಸಿ ಸಹ ನಗರದ ಪ್ರಮುಖ ಬಡಾವಣೆಗಳಿಗೆ ಇಲ್ಲಿಂದ ಬಸ್ ವ್ಯವಸ್ಥೆ ಮಾಡಿದೆ ಎಂದು ರವೀಂದ್ರ ನಾಥ್ ಹೇಳಿದರು.












Click it and Unblock the Notifications