KSRTC: ಪೀಣ್ಯ ನಿಲ್ದಾಣದಿಂದ ಪುನಃ ಬಸ್ಗಳ ಸೇವೆ ಆರಂಭ!
ಬೆಂಗಳೂರು, ಏಪ್ರಿಲ್ 13: ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜ್ಯದ ನಾನಾ ಭಾಗಗಳಿಗೆ ತೆರಳುವ ಬಸ್ ಗಳ ಪೈಕಿ 60 ಬಸ್ ಗಳನ್ನು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ.
ಈ ಬಸ್ ಗಳು ಗುರುವಾರದಿಂದ ಈ ನಿಲ್ದಾಣದಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಈ ಮೂಲಕ ಕಳೆದ ನಾಲ್ಕು ವರ್ಷಗಳಿಂದ ನಿರ್ಜೀವವಾಗಿದ್ದ ಬಸ್ ನಿಲ್ದಾಣಕ್ಕೆ ಕಳೆ ಬಂದಂತಾಗಿದೆ.
ಈ ಬಸ್ ನಿಲ್ದಾಣದಿಂದ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಬಸ್ ಕಾರ್ಯಾಚರಣೆ ಮಾಡುವ ವ್ಯವಸ್ಥೆ ಒಳಗೊಂಡಿದೆ. ಇದೀಗ ಚಿಕ್ಕಮಗಳೂರು, ಹುಬ್ಬಳ್ಳಿ, ಶಿವಮೊಗ್ಗ, ತುಮಕೂರು, ರಾಯಚೂರು, ಹಾಸನ, ದಾವಣಗೆರೆ, ಬೆಳಗಾವಿ, ಮಂಗಳೂರು, ಧರ್ಮಸ್ಥಳ, ಪಾವಗಡ, ಕುಷ್ಟಗಿ, ಸಾಗರ, ಹೊಸದುರ್ಗ, ಅರಕಲಗೋಡು, ಕೊಣನೂರು, ತುರುವೇಕೆರೆ, ತಿಪಟೂರು, ಬಳ್ಳಾರಿ, ಸಕಲೇಶಪುರ, ಕೊಪ್ಪಳ, ಕುಂದಾಪುರ ಸೇರಿದಂತೆ ಇನ್ನಿತರೆ ಊರುಗಳಿಗೆ 60 ಬಸ್ಗಳ ಸಂಚಾರ ಆರಂಭವಾಗಿದೆ.

ಬಸವೇಶ್ವರ ಬಸ್ ನಿಲ್ದಾಣದ ಸುತ್ತಮುತ್ತಲ ಬಡಾವಣೆಗಳ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರಲು ಹಾಗೂ ಸಮೀಪದ ಮೆಟ್ರೋ ನಿಲ್ದಾಣಕ್ಕೆ ತೆರಳಲು ಅನುವಾಗುವಂತೆ 2 ಫೀಡರ್ ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ.
ಈ ಬಸ್ ಗಳು ನಿಲ್ದಾಣದಿಂದ ಅಯ್ಯಪ್ಪ ದೇವಸ್ಥಾನ, ಜಾಲಹಳ್ಳಿ ಮೆಟ್ರೋ ನಿಲ್ದಾಣ ಮತ್ತು ಅಲ್ಲಿಂದ ಬಸವೇಶ್ವರ ಬಸ್ ನಿಲ್ದಾಣ ಮಾರ್ಗದಲ್ಲಿ ಸಂಚರಿಸಲಿದೆ. ಸದ್ಯಕ್ಕೆ ಈ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮೆಜೆಸ್ಟಿಕ್ ನಿಂದಲೂ ಬಸ್ ಸಂಚಾರ: ಈಈ ಬಸ್ ನಿಲ್ದಾಣಕ್ಕೆ ಸದ್ಯ 60 ಬಸ್ಗಳನ್ನು ಮಾತ್ರ ವರ್ಗಾಯಿಸಿದ್ದು, ಈ ಮೇಲಿನ ಊರುಗಳಿಗೆ ಮೆಜೆಸ್ಟಿಕ್ ನಿಂದಲೂ ಬಸ್ ಗಳು ಸಂಚರಿಸಲಿದೆ. ಪ್ರಯಾಣಿಕರು ಈ ಎರಡೂ ನಿಲ್ದಾಣದಲ್ಲಿ ಯಾವುದು ಸಮೀಪವೋ ಅದರಿಂದ ಪ್ರಯಾಣಿಸಬಹುದು.ಆದರೆ, ಬಸವೇಶ್ವರ ನಿಲ್ದಾಣದಿಂದ ಸಂಚರಿಸುವವರ ಬಸ್ ಗಳ ಸಂಖ್ಯೆ ಕಡಿಮೆ ಇದೆ.












Click it and Unblock the Notifications