ನನ್ನ ಬಾಯಲ್ಲೂ ಕೆಟ್ಟ ಪದಗಳು ಬರ್ತವೆ ಸಿದ್ದರಾಮಯ್ಯನವರೆ: ಈಶ್ವರಪ್ಪ
ಬೆಂಗಳೂರು, ಸೆಪ್ಟೆಂಬರ್ 1: ನನ್ನ ಬಾಯಲ್ಲೂ ಕೆಟ್ಟ ಪದಗಳು ಬರ್ತವೆ, ಆದರೆ ಮಾಜಿ ಸಿಎಂ ಅಂತ ಸುಮ್ಮನಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕೆಟ್ಟ ಭಾಷೆ ಬಳಸಿ ಮಾತನಾಡಿದ್ದಾರೆ ಆದರೆ ಅದು ಸರಿಯಲ್ಲ, ನಮಗೂ ಕೆಟ್ಟ ಮಾತು ಆಡೋಕೆ ಬರುತ್ತೆ ಆದರೆ ಆಗ ನನಗೂ ಅವರಿಗೂ ಯಾವ ವ್ಯತ್ಯಾಸವೂ ಇಲ್ಲದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಸೂ... ನೆಲ ಡೊಂಕು' ಹೇಳಿಕೆಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಪ್ರಧಾನಿಗಳ ಬಗ್ಗೆ, ಈ ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಇನ್ನು ಮುಂದಾದರೂ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಮನವಿ ಮಾಡಿದ್ದಾರೆ.
ರಾಜಕೀಯವಾಗಿ ಬೇಕಾದಷ್ಟು ಟೀಕಿಸಿ ತೊಂದರೆ ಇಲ್ಲ. ಆದರೆ ವೈಯಕ್ತಿಕವಾಗಿ ಯಾರನ್ನೂ ಟೀಕೆ ಮಾಡಬೇಡಿ ಎಂದು ಸಿದ್ದರಾಮಯ್ಯನವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇಡೀ ಪ್ರಪಂಚ ಮೆಚ್ಚಿದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾದ ಮಾತುಗಳನ್ನಾಡುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯದಲ್ಲಿ ನೆರೆ ಬಂದಿದ್ದು, ಹಿಂದೆ ಯಾವುದೇ ಸರ್ಕಾರ ನೀಡದ ರೀತಿಯಲ್ಲಿ ನಮ್ಮ ಸರ್ಕಾರ ಪರಿಹಾರ ನೀಡುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಮಂತ್ರಿ ಮೋದಿ ವಿರುದ್ಧ ಸಿದ್ದರಾಮಯ್ಯ ಬಳಸುತ್ತಿರುವ ಭಾಷೆ ಸರಿಯಿಲ್ಲ. ವಿರೋಧ ಪಕ್ಷವಾಗಿ ಬೇಕಾದಷ್ಟು ಟೀಕೆ ಮಾಡಿ ತೊಂದರೆ ಇಲ್ಲ. ಆದರೆ, ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಿಲ್ಲ.
ನರೇಂದ್ರ ಮೋದಿಯವರು ಕೋಮುವಾದಿ, ಫೋಟೋ ತೆಗೆಸಿಕೊಳ್ಳಲು ವಿದೇಶ ಪ್ರವಾಸಕ್ಕೆ ಹೋಗುತ್ತಾರೆ ಎಂದೆಲ್ಲ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಳ್ಳುತ್ತಾರೆ, ನಾಚಿಕೆ ಆಗಲ್ವ ಎಂದು ಹಗುರವಾಗಿ ಟೀಕೆ ಮಾಡುತ್ತಾರೆ ಈ ರೀತಿ ಅವರು ಬಳಸಿರುವ ಭಾಷೆ ಸರಿ ಇಲ್ಲ.