ಸೊಪ್ಪು ತರಕಾರಿ ಮಾದರಿ ಮನೆ ಬಾಗಿಲಿಗೆ ಮಾನನಿಯರ ಡೋರ್ ಡೆಲಿವರಿ !
ಬೆಂಗಳೂರು, ಡಿ. 15: ರಾಜಧಾನಿ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ನಾನಾ ಸ್ವರೂಪ ಪಡೆದುಕೊಂಡಿದೆ. ಸೊಪ್ಪು - ತರಕಾರಿಯನ್ನು ಮನೆಗೆ ಡೆಲಿವರಿ ಮಾಡುವ ಮಾದರಿಯಲ್ಲಿ ಯುವತಿಯರನ್ನು ಮನೆಗೆ ಡೆಲಿವರಿ ಮಾಡುವ ಜಾಲ ಹಬ್ಬಿದೆ.
ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿರುವ ವೇಶ್ಯಾವಾಟಿಕೆ ಕಿಂಗ್ಪಿನ್ಗಳು ಗ್ರಾಹಕರಿಗೆ ಆರೋಗ್ಯ ಸೇವೆ ಹೆಸರಿನಲ್ಲಿ ಯುವತಿಯರನ್ನು ಪೂರೈಕೆ ಮಾಡುವ ದಂಧೆ ದೊಡ್ಡ ಮಟ್ಟದಲ್ಲಿ ಹಬ್ಬಿದೆ. ಪಶ್ಚಿಮ ಬಂಗಾಳ, ನೇಪಾಳ ಹಾಗೂ ಬಾಂಗ್ಲಾದೇಶೀ ಯುವತಿಯರನ್ನು ಈ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ.
ಕೊರೊನಾ ಲಾಕ್ಡೌನ್ ಬಳಿಕ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ಹೊಸ ಸ್ವರೂಪ ಪಡೆದುಕೊಂಡಿದೆ. ವೇಶ್ಯಾವಾಟಿಕೆ ದಂಧೆ ಮಾಡುವರಿಗಾಗಿಯೇ ಲೊಕಾಂಟೋ ಸೇರಿದಂತೆ ನಾನಾ ಸಾಮಾಜಿಕ ಜಾಲ ತಾಣಗಳು ಅಪ್ಗಳು ಹುಟ್ಟಿಕೊಂಡಿವೆ. ಕೇವಲ ಲಾಡ್ಜ್ಗಳಿಗೆ ಸೀಮಿತವಾಗಿದ್ದ ವೇಶ್ಯಾವಾಟಿಕೆ ದಂಧೆ ಸೊಪ್ಪು- ತರಕಾರಿ ಡೆಲಿವರಿ ಮಾದರಿಯಲ್ಲಿ ಮನೆ ಬಾಗಿಲಿಗೆ ಪೂರೈಕೆ ಮಾಡಲಾಗುತ್ತಿದೆ.

ಈ ಹಿಂದೆ ಮೆಜೆಸ್ಟಿಕ್, ಗಾಂಧಿನಗರ, ಎಂ.ಜಿ ರೋಡ್ಗೆ ಸೀಮಿತವಾಗಿದ್ದ ವೇಶ್ಯಾವಾಟಿಕೆ ದಂಧೆ ತಂತ್ರಜ್ಞಾನಕ್ಕೆ ಬದಲಿಸಿಕೊಂಡಿದೆ. ನಾನಾ ಆಪ್ಗಳು ವಾಟ್ಸಪ್ ಗ್ರೂಪ್ , ಟೆಲಿಗ್ರಾಮ್ ಚಾನೆಲ್ ಗಳು, ಟ್ವಿಟರ್ ಖಾತೆಗಳಲ್ಲಿ ಬಹಿರಂಗವಾಗಿ ಮೊಬೈಲ್ ನಂಬರ್ ಹಾಕುತ್ತಿದ್ದಾರೆ. ಕಾಮತೃಷೆ ತೀರಿಸಿಕೊಳ್ಳುವ ಗ್ರಾಹಕರು ಮೊಬೈಲ್ ಇದ್ದರೆ ಸಾಕು ಇದೀಗ ಮನೆ ಬಾಗಿಲಿಗೆ ಯುವತಿಯರನ್ನು ಕರೆಸಿಕೊಳ್ಳುವ ಮಟ್ಟಿಗೆ ಬೆಳೆದು ನಿಂತಿದೆ. ತಂತ್ರಜ್ಞಾನ ಬಳಸಿಕೊಂಡು ನಡೆಸಲಾಗುತ್ತಿರುವ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆ ಮಾಡಲು ಪೊಲೀಸರು ಹರ ಸಾಹಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಮಸಾಜ್ ಪಾರ್ಲರ್ಗಳ ಹೆಸರಿನಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ದಂಧೆ ಬಗ್ಗೆ ಪೊಲೀಸರಿಗೂ ಗೊತ್ತಿದ್ದರೂ ಮೌನ ವಹಿಸಿದ್ದಾರೆ. ಯಾಕೆಂದರೆ ಮಸಾಜ್ ಪಾರ್ಲರ್ ಗಳಿಂದಲೇ ಬೆಂಗಳೂರಿನಲ್ಲಿ ಪ್ರತಿ ನಿತ್ಯ ಕೋಟ್ಯಂತರ ವಹಿವಾಟು ನಡೆಯುತ್ತಿದೆ. ಹೀಗಾಗಿ ನಾನಾ ಮಜಲು ಪಡೆದಿರುವ ವೇಶ್ಯಾವಾಟಿಕೆ ದಂಧೆಗೆ ಬಲಿಪಶು ಆಗುತ್ತಿರುವುದು ಮಾತ್ರ ಬಡ ಹೆಣ್ಣು ಮಕ್ಕಳು.
ಮಾನವ ಕಳ್ಳ ಸಾಗಣೆ ಜಾಲದ ನಂಟು:
ಇನ್ನು ಕೆಲವು ಯುವತಿಯರು ನಾನಾ ಕಾರಣದಿಂದ ಸ್ವಯಂ ಪ್ರೇರಿತವಾಗಿ ಈ ದಂಧೆಗೆ ಇಳಿದರೆ ಬಹುತೇಕರು ಕೆಲಸದ ಆಸೆಗೆ ಬಂದು ಈ ಜಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದಾರೆ. ಕಾಲಾಂತರದಲ್ಲಿ ಅವರು ಈ ದಂಧೆಗೆ ಒಗ್ಗಿಕೊಂಡು ಬಿಡುತ್ತಾರೆ. ಬಾಂಗ್ಲಾದೇಶ, ನೇಪಾಳದಿಂದ ಕೆಲಸದ ಅಮಿಷೆ ಒಡ್ಡಿ ಕರೆ ತರುವ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಪೂರೈಸುವ ಕಿಂಗ್ ಪಿನ್ ಗಳು ಒಂದು ವರ್ಗವಾದರೆ, ಅವರನ್ನು ಮಸಾಜ್ ಪಾರ್ಲರ್ಗಳಿಗೆ ಕಳುಹಿಸಿ ವೇಶ್ಯಾವಾಟಿಕೆ ದಂಧೆಗೆ ಬಲವಂತವಾಗಿ ತಳ್ಳುವುದು ಇನ್ನೊಂದು ವರ್ಗ. ಇನ್ನು ವೇಶ್ಯಾವಾಟಿಕೆ ದಂಧೆಗೆ ಒಗ್ಗಿಕೊಂಡ ಯುವತಿಯರನ್ನು ಖರೀದಿ ಮಾಡಿ ಕೆಲಸಕ್ಕೆ ನೇಮಿಸಿಕೊಳ್ಳುವ ವರ್ಗ ಬೇರೆಯದ್ದೇ ಇದೆ. ಹೀಗೆ ಕರೆತರುವ ಹೆಣ್ಣು ಮಕ್ಕಳನ್ನು ಗ್ರಾಹಕರನ್ನು ಹುಡುಕಿ ಅವರ ಮನೆ ಬಾಗಿಲಿಗೆ ಕಳುಹಿಸುವ ಹೊಸ ಜಾಲ ಕರೊನಾ ಬಳಿಕ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಮಾಣವ ಕಳ್ಳ ಸಾಗಣೆ ಮೂಲಕ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುವ ಈ ಜಾಲವನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಸಣ್ಣ ಪ್ರಯತ್ನ ಕೂಡ ಮಾಡಿದಂತೆ ಕಾಣುತ್ತಿಲ್ಲ.
ಸಿಸಿಬಿ ಅಧಿಕಾರಿಯ ತನಿಖೆ:
ಈ ಹಿಂದೆ ಸಿಸಿಬಿಯ ಮಾನವ ಕಳ್ಳ ಸಾಗಣೆ ನಿಷೇಧ ದಳದ ಅಧಿಕಾರಿ ಆನಂದ ಕಬೂರಿ ರಾಜಧಾನಿ ಬೆಂಗಳೂರಿನಲ್ಲಿ ವೇಶ್ಯವಾಟಿಕೆ ಜಾಲ, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಲಾಖೆ ಮಾಡಬೇಕಾದ ಕೆಲಸ, ಮಾನವ ಕಳ್ಳ ಸಾಗಣೆ ಜಾಲದ ಬಗ್ಗೆ ತನಿಖೆ ನಡೆಸಿ ಸಮಗ್ರ ವರದಿಯನ್ನು ತರಯಾರಿಸಿದ್ದರು. ಕೆಲ ವರ್ಷಗಳ ಹಿಂದೆ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದರು.ವರದಿ ಸಲ್ಲಿಸಿದ್ದು ಬಿಟ್ಟರೆ ಅದು ಕಾರ್ಯಗತಕ್ಕೆ ಬರಲೇ ಇಲ್ಲ. ಹೀಗಾಗಿ ಬೆಂಗಳೂರು ಕೂಡ ವೇಶ್ಯಾವಾಟಿಕೆ ದಂಧೆಯ ದೊಡ್ಡ ಕೇಂದ್ರವಾಗಿ ಬೆಳೆದು ನಿಂತಿದೆ. ಮಸಾಜ್ ಸೇವೆ ಹೆಸರಿನಲ್ಲಿ ಅನೇಕ ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ಇಳಿಸಲಾಗಿದೆ. ತಂತ್ರಜ್ಞಾನ ಮೈಗೂಡಿಸಿಕೊಂಡಿರುವ ಈ ದಂಧೆ ಇದೀಗ ಪೊಲೀಸರ ಕೈ ಮೀರಿ ಬೆಳೆದು ನಿಂತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ತಡೆಯುವ ನಿಟ್ಟಿನಲ್ಲಿ ಇಚ್ಛಾ ಶಕ್ತಿ ಪ್ರದರ್ಶಿಸಿ ಯೋಜನೆ ರೂಪಿಸಿ ಕಾರ್ಯಗತಗೊಳಿಸದ ಹೊರತು ಬೆಂಗಳೂರು ಭವಿಷ್ಯದಲ್ಲಿ ವೇಶ್ಯಾವಾಟಿಕೆ ಜಾಲದ ದೊಡ್ಡ ಕೇಂದ್ರವಾಗಿ ರೂಪಾಂತರಗೊಳ್ಳುವುದರಲ್ಲಿ ಅಚ್ಚರಿ ಪಡಬೇಕಿಲ್ಲ.
ಕೊಡಿಗೇಹಳ್ಳಿ ಪೊಲೀಸರ ಕಾರ್ಯಾಚರಣೆ:
ಬಾಂಗ್ಲಾ ಮೂಲದ ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡಿದ್ದ ಮಹಿಳೆಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೆಲಸದ ಅಮಿಷೆ ಒಡ್ಡಿ ಬೆಂಗಳೂರಿಗೆ ಕರೆತಂದು ಮನೆಯೊಂದರಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದರು. ಸ್ವಯಂ ಸೇವಾ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಕೊಡಿಗೇಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ್ದಾರೆ. ಅಲ್ಲದೇ, ಕಿಂಗ್ ಪಿನ್ ಮಹಿಳೆ ಜ್ಯೋತಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಜ್ಯೋತಿ ಕೊಡಿಗೇನಹಳ್ಳಿಯ ಭದ್ರಪ್ಪ ಬಡಾವಣೆಯ ಮನೆಯಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದರು. ಈ ಹಿಂದೆಯೂ ಜ್ಯೋತಿ ವೇಶ್ಯಾವಾಟಿಕೆ ದಂಧೆಯಲ್ಲಿ ಬಂಧನಕ್ಕೆ ಒಳಗಾಗಿದ್ದಳು. ಇದೀಗ ಇಬ್ಬರನ್ನು ರಕ್ಷಿಸಿರುವ ಪೊಲೀಸರು ಜ್ಯೋತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications