ಗಾಂಜಾ ಎಲೆ ಆಕಾರದಲ್ಲಿ ಬೈಕ್ಗಳನ್ನು ನಿಲ್ಲಿಸಿದ ಬೆಂಗಳೂರು ಪೊಲೀಸರು!
ಬೆಂಗಳೂರು, ಜುಲೈ 24: ಹದಿಹರೆಯದವರು ಮತ್ತು ಯುವಕರು ದ್ವಿಚಕ್ರ ವಾಹನಗಳಲ್ಲಿ ಅಜಾಗರೂಕತೆಯಿಂದ ಸವಾರಿ ಮಾಡುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ತೀರಾ ಸಾಮಾನ್ಯ ಎನಿಸಿದೆ.
ಕಡಿಮೆ ಸಮಯದಲ್ಲಿ ಜನಪ್ರಿಯತೆ ಗಳಿಸಲು ವ್ಹೀಲಿಂಗ್ ಮಾಡುವುದು, ಸಾಹಸ ಮಾಡುವ ದೃಶ್ಯಗಳನ್ನು ಚಿತ್ರೀಕರಿಸಿ, ಹಲವು ಇನ್ಸ್ಟಾಗ್ರಾಂ, ಫೇಸ್ಬುಕ್ಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ದೃಶ್ಯಗಳನ್ನು ಆಧರಿಸಿ ಪೊಲೀಸರು ದಂಡ ವಿಧಿಸಿದ ಉದಾಹರಣೆಗಳು ಇದೆ. ಜಾಗೃತಿ ಮೂಡಿಸಲು ಸಾಕಷ್ಟು ಶ್ರಮ ವಹಿಸುತ್ತಲೇ ಇದ್ದಾರೆ.
ಗಾಂಜಾ ಬೇಟೆಗೆ ತೆರಳಿದ್ದ ಶಿವಾಜಿನಗರ ಪೊಲೀಸರು ಅಪಘಾತದಲ್ಲಿ ಸಾವು
ಆದರೆ, ಈ ದೃಶ್ಯಗಳ ಹಿಂದಿನ ಇನ್ನೊಂದು ಮುಖವನ್ನು ಬೆಂಗಳೂರು ಪೊಲೀಸರು ಅನಾವರಣಗೊಳಿಸಿದ್ದಾರೆ. ಮಾದಕ ವಸ್ತುಗಳ ಚಟಕ್ಕೆ ಬಿದ್ದಿರುವ ಯುವಕರು, ಡ್ರಗ್ಸ್ ಕೊಳ್ಳಲು ಹಣ ಮಾಡುವ ಉದ್ದೇಶಕ್ಕಾಗಿ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದು, ಹೀಗೆ ಕದ್ದ ವಾಹನಗಳಲ್ಲಿ ವ್ಹೀಲಿಂಗ್, ಸಾಹಸ ಮಾಡುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಾರೆ.
ಚಿತ್ರೀಕರಿಸಿಕೊಂಡ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ, ಫೇಸ್ಬುಕ್, ಮೋಜೋದಂತ ಸಾಮಾಜಿಕ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಾರೆ. ನಂತರ ಕದ್ದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಖರೀದಿ ಮಾಡುತ್ತಾರೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ಪೊಲೀಸರ ಮೇಲೆ ಒತ್ತಡ ಹೇರಿ ಈಶ್ವರಪ್ಪಗೆ ಕ್ಲೀನ್ಚಿಟ್: ಆಪ್ ಆರೋಪ
ಗಾಂಜಾ ಎಲೆಯ ಆಕಾರದಲ್ಲಿ ಬೈಕ್ ಪಾರ್ಕಿಂಗ್
ಬೈಕ್ ಕಳ್ಳತನ ಮತ್ತು ಡ್ರಗ್ಸ್ ಮಾಫಿಯಾದ ವಿರುದ್ಧ ಜಾಗೃತಿ ಮೂಡಿಸಲು ಬೆಂಗಳೂರು ಪೊಲೀಸರು ಇತ್ತೀಚೆಗೆ ಒಂದು ವಿನೂತನ ಉಪಾಯವನ್ನು ಮಾಡಿದ್ದಾರೆ ಮತ್ತು ಅದೇ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 76 ದ್ವಿಚಕ್ರ ವಾಹನಗಳು ಪತ್ತೆಯಾಗಿದ್ದು, ಗಾಂಜಾ ಎಲೆಯ ಆಕಾರದಲ್ಲಿ ನಿಲ್ಲಿಸಲಾದ ದ್ವಿಚಕ್ರ ವಾಹನಗಳ ವಿಡಿಯೋ ಮತ್ತು ಫೋಟೋ ಇದೀಗ ವೈರಲ್ ಆಗಿದೆ.
ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಜನರಿಗೆ ಈ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
|
ವಾಹನ ಕಳ್ಳರ ಜಾಲದ ಬಗ್ಗೆ ಉಪ ಆಯುಕ್ತರ ಮಾಹಿತಿ
ಆಗ್ನೇಯ ಬೆಂಗಳೂರಿನ ಉಪ ಪೊಲೀಸ್ ಆಯುಕ್ತ ಸಿ. ಕೆ. ಬಾಬಾ ನಗರದಲ್ಲಿ ನಡೆದ ಇಂತಹ ಅಪರಾಧಗಳ ಬಗ್ಗೆ ವಿವರವನ್ನು ನೀಡಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಅವರು, "ಕಳ್ಳತನಕ್ಕಾಗಿ ಕದಿಯುವುದು, ಕದ್ದ ಬೈಕ್ಗಳಲ್ಲಿ ವೀಲಿಂಗ್ ಮಾಡುವುದು. ತದನಂತರ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಖ್ಯಾತಿ ಮತ್ತು ಫಾಲೋವರ್ಸ್ಗಳನ್ನು ಗಳಿಸುವುದು ಮಾಡಲಾಗುತ್ತದೆ. ಈಗ ಅವರು ಲಾಕಪ್ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. 2 ಪೊಲೀಸ್ ಠಾಣೆಗಳಲ್ಲಿ 76 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ!" ಎಂದು ಹೇಳಿದ್ದಾರೆ.
ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಉಪ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಂದ ಪೊಲೀಸರಿಗೆ ಪ್ರಶಂಸೆ
ನೆಟ್ಟಿಗರು ಕೂಡ ಹಾವಳಿ ನಿಯಂತ್ರಿಸಲು ಪೊಲೀಸ್ ಇಲಾಖೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗಳಿಗೆ ಸಮರ್ಪಕವಾಗಿ ಸಂಬಳ ಮತ್ತು ಸೌಲಭ್ಯವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಪೊಲೀಸರು ತಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬಹುದು. ಧನ್ಯವಾದಗಳು" ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.
ಮತ್ತೊಬ್ಬ ಟ್ವಿಟರ್ ಬಳಕೆದಾರರು 76 ಬೈಕ್ಗಳನ್ನು ಕದಿಯುವವರೆಗೆ ಪೊಲೀಸರಿಗೆ ಎಚ್ಚರ ಆಗಿರಲಿಲ್ಲವೇ ಎನ್ನುವ ಧಾಟಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ನಾಲ್ವರು ಕಳ್ಳರನ್ನು ಬಂಧಿಸಿ 76 ಬೈಕ್ ವಶಪಡಿಸಿಕೊಂಡ ಪೊಲೀಸರು
ಬೆಂಗಳೂರು ಪೊಲೀಸರು ಹಲವು ಬಾರಿ ಕಾರ್ಯಾಚರಣೆ ನಡೆಸಿ ಅಪಾರ ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ವಾರ, ಮಹಾಲಕ್ಷ್ಮಿ ಲೇಔಟ್ನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ಆತನಿಂದ 25 ಕದ್ದ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ದ್ವಿಚಕ್ರ ವಾಹನಗಳು ವಿವಿಧ ರಾಜ್ಯಗಳ ನಂಬರ್ ಪ್ಲೇಟ್ ಹೊಂದಿದ್ದವು.
ಬೊಮ್ಮನಹಳ್ಳಿ ಮತ್ತು ಮೈಕೋಲೇಔಟ್ ಪೊಲೀಸ್ ಠಾಣೆಯ ಕಾರ್ಯಾಚರಣೆಯಲ್ಲಿ 4 ಜನ ಬೈಕ್ ಕಳ್ಳರನ್ನು ಬಂಧಿಸಿ ಆರೋಪಿಗಳಿಂದ 76 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಗ್ನೇಯ ಬೆಂಗಳೂರಿನ ಉಪ ಪೊಲೀಸ್ ಆಯುಕ್ತ ಸಿ. ಕೆ. ಬಾಬಾ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.