KMFನ200 ಕೋಟಿ ಮೌಲ್ಯದ ಜಮೀನು ಖಾಸಗಿಯವರಿಗೆ ಪರಭಾರೆ, ಪ್ರಕರಣ ದಾಖಲು
ಬೆಂಗಳೂರು, ಆಗಸ್ಟ್ 21: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ (ಕೆಎಂಎಫ್)ಗೆ ನೀಡಲಾಗಿದ್ದ ಸರಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿದ ಸಂಬಂಧ ಕೆಎಂಎಫ್ ಅಧಿಕಾರಿಗಳ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿಕೊಂಡಿದೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಸುಮಾರು ರೂಪಾಯಿ 200 ಕೋಟಿ ಬೆಲೆ ಬಾಳುವ ಜಮೀನನ್ನು ಖಾಸಗಿ ಬಿಲ್ಡರ್ ಗಳಿಗೆ ಅಕ್ರಮವಾಗಿ ಕೆಎಂಎಫ್ ಹಸ್ತಾಂತರ ಮಾಡಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರು ನೀಡಿದ್ದರು. ಈ ದೂರನ್ನಾಧರಿಸಿ ಕೆಎಂಎಫ್ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ನಡೆದಿದ್ದೇನು?
ಈ ಘಟನೆ ನಡೆದಿದ್ದೆಲ್ಲಾ 1984 ರಲ್ಲಿ. ಅಂದಿನ ಕೆಎಂಎಫ್ ಅಧ್ಯಕ್ಷರ ಮನವಿ ಮೇರೆಗೆ ಸರಕಾರ ಕೋರಮಂಗಲದ ಸರ್ವೇ ನಂಬರ್ 2, 3, 4 ಮತ್ತು 71 ರಲ್ಲಿ ಕೆಎಂಎಫ್ ಗೆ 4 ಎಕರೆ 14 ಗುಂಟೆ ಜಮೀನು ಮಂಜೂರು ಮಾಡಿತ್ತು.
2008 ರ ಮೇ 19 ರಂದು ಈ ಜಾಗ ಕೆಎಂಎಫ್ ಹೆಸರಿಗೆ ನೋಂದಣಿಯಾಗಿತ್ತು. ಆದರೆ ಸಮಸ್ಯೆ ಇಲ್ಲಿ ಆರಂಭವಾಯ್ತು.
"ನೋಂದಣಿಯಾಗಿ 10 ದಿನ ಕಳೆಯುವ ಮೊದಲೇ ಈ ಜಮೀನನ್ನು ಜಂಟಿ ಸಹಭಾಗಿತ್ವದ ಹೆಸರಿನಲ್ಲಿ ಖಾಸಗಿಯವರಿಗೆ ಕೆಎಂಎಫ್ ನೀಡಿತು. ಸದರಿ ಅವಧಿಯಲ್ಲಿ ಕರ್ನಾಟಕದಲ್ಲಿ ರಾಜ್ಯಪಾಲರ ಆಳ್ವಿಕೆ ಇತ್ತು. ಇದಕ್ಕೆ ಕೆಎಂಎಫ್ ರಾಜ್ಯಪಾಲರ ಅನುಮತಿಯನ್ನೂ ಪಡೆದಿರಲಿಲ್ಲ," ಎಂದು ಸಾಯಿದತ್ತ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಪಿವಿಕೆ ಇನ್ಫ್ರಾಸ್ಟ್ರಕ್ಚರ್, ಹ್ಯಾಸ್ಕೊ, ಪಿವಿಕೆ ಕೋರಮಂಗಲ, ಹಿಂದೂಸ್ತಾನ್ ಇನ್ಫ್ರಾಸ್ಟ್ರಕ್ಚರ್ ಮತ್ತು ಮಂತ್ರಿ ಹ್ಯಾಬಿಟೇಟ್ ಕಂಪೆನಿಗಳಿಗೆ ಈ ಜಮೀನನ್ನು ಕೆಎಂಎಫ್ ಪರಭಾರೆ ಮಾಡಿದೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಾಯಿದತ್ತ ಕಳೆದ ಮೇನಲ್ಲಿ ಎಸಿಬಿಗೆ ದೂರು ನೀಡಿದ್ದರು.
ಇದೀಗ ಪ್ರಕರಣದ ದಾಖಲಾಗಿದ್ದು ಮುಂದೇನಾಗುತ್ತದೆ ಕಾದು ನೋಡಬೇಕು.












Click it and Unblock the Notifications