ಬಿಎಸ್ವೈ ವಿರುದ್ಧ ದಾಖಲೆ ಬಿಡುಗಡೆ, ಕೆಜೆ ಜಾರ್ಜ್ ಬಾಂಬ್!
ಬೆಂಗಳೂರು, ಅಕ್ಟೋಬರ್ 10 : 'ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಡಿನೋಟಿಫಿಕೇಷನ್ ಬಗ್ಗೆ 10 ದಿನದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ' ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಬಾಂಬ್ ಸಿಡಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, 'ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೂವರೆ ವರ್ಷಗಳಲ್ಲಿ ಯಾವುದೇ ಡಿನೋಟಿಫಿಕೇಷನ್ ಮಾಡಿಲ್ಲ. ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ' ಎಂದು ಹೇಳಿದರು.

'ಯಡಿಯೂರಪ್ಪ ಅವರು ನನ್ನ ಕ್ಷೇತ್ರದಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಅದರ ಮಾಹಿತಿಯನ್ನು 10 ದಿನದಲ್ಲಿ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇನೆ' ಎಂದು ಕೆ.ಜೆ.ಜಾರ್ಜ್ ತಿಳಿಸಿದರು.
'ಡಿನೋಟಿಫಿಕೇಷನ್ ಮಾಡುವುದಕ್ಕೆ ಸುಪ್ರೀಂಕೋರ್ಟ್ನಿಂದ ಸೂಕ್ತ ಮಾರ್ಗಸೂಚಿ ಇದೆ. ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದು, ಅಂತಿಮ ತೀರ್ಮಾನವಾಗಬೇಕು. ಜಿಒ ಆದರೆ ಮಾತ್ರ ಡಿನೋಟಿಫಿಕೇಷನ್ ಆಗಲಿದೆ. ನಮ್ಮ ಸರ್ಕಾರದ ಮೇಲೆ ಬಿಜೆಪಿ ವಿನಾಕಾರಣ ಆರೋಪ ಮಾಡುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ' ಎಂದರು.
'ಕಡತದ ಮೇಲೆ ಚರ್ಚಿಸಿ, ಪರಿಶೀಲಿಸಿ ಎಂದು ಬರೆದರೆ ಅದು ಆದೇಶವಾಗುವುದಿಲ್ಲ. ಆದೇಶ ನೀಡುವ ಬರಹಗಳೇ ಬೇರೆ. ನಮ್ಮ ಬಳಿ ಯಾವುದೇ ಕಡತ ಬಂದರೂ ಚರ್ಚಿಸಿ ಅಥವ ಪರಿಶೀಲಿಸಿ ಎಂದು ಬರೆಯುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಅಗತ್ಯವಿದ್ದರೆ ಬಂದು ಚರ್ಚಿಸುತ್ತಾರೆ' ಎಂದು ಹೇಳಿದರು.











Click it and Unblock the Notifications