ಹೆಬ್ಬಾಳ ಉದ್ಯಾನ: ಅಶ್ವಾರೂಢ ಕೆಂಪೇಗೌಡ ಪ್ರತಿಮೆಯ ಅನಾವರಣ
ಬೆಂಗಳೂರು, ಮಾರ್ಚ್ 27: ಸ್ಥಳೀಯರ ಆಕ್ಷೇಪದ ನಡುವೆಯೇ ಹೆಬ್ಬಾಳ ಮೇಲ್ಸೇತುವೆ ಬಳಿಯ ಉದ್ಯಾನದಲ್ಲಿನ ಅಶ್ವಾರೂಢ ಕೆಂಪೇಗೌಡರ ಪ್ರತಿಮೆಯನ್ನು ಬಿಡಿಎ ಅನಾವರಣಗೊಳಿಸಿದೆ.
11.5ಮೀಟರ್ ಉದ್ದ ಹಾಗೂ 8 ಮೀಟರ್ ಎತ್ತರದ ಕಾಂಕ್ರೀಟ್ ಗೋಡೆ ನಿರ್ಮಿಸಿರುವ ಬಿಡಿಎ, ಇದರಲ್ಲಿ 4.8 ಮೀಟರ್ ಎತ್ತರದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪಿಸಿದೆ. ಒಟ್ಟಾರೆ 1 ಕೋಟಿ ರೂ. ವೆಚ್ಚದಲ್ಲಿ ಖಡ್ಗ ಹಿಡಿದು ಕುದುರೆ ಮೇಲೆ ಕುಳಿತ ಹಿತ್ತಾಳೆ ಮಿಶ್ರಿತ ಪ್ರತಿಮೆ ಇದಾಗಿದೆ.
ಸಚಿವರಾದ ಕೆ.ಜೆ. ಜಾರ್ಜ್ ಹಾಗೂ ಕೃಷ್ಣ ಭೈರೇಗೌಡ ಪ್ರತಿಮೆ ಅನಾವರಣ ಮಾಡಿದರು. ಕಾರ್ಯಕ್ರಮ ಸಂದರ್ಭದಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿದ್ದಿದ್ದ ತ್ಯಾಜ್ಯ ಹಾಗೂ ಉದ್ಯಾನದ ಅಸಮರ್ಪಕ ನಿರ್ವಹಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು, ಕೆಂಪೇಗೌಡರನ್ನು ಅವಮಾನಿಸಲಾಗುತ್ತಿದೆ ಎಂದರು.

ಉದ್ಯಾನ ಹಾಗೂ ಪ್ರತಿಮೆ ಬಳಿ ತೆರಳಲು ಸಮರ್ಪಕ ಮಾರ್ಗ ಇಲ್ಲ. ತರಾತುರಿಯಲ್ಲಿ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾರ್ಜ್ ಹಾಗೂ ಕೃಷ್ಣಭೈರೇಗೌಡ ಮನವೊಲಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ತೀವ್ರ ಅಸಮಾಧಾನಗೊಂಡು ಸ್ಥಳೀಯರು ಕಾರ್ಯಕ್ರಮ ಬಹಿಷ್ಕರಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಾರದೊಳಗೆ ಪಾರ್ಕ್ ಸ್ವಚ್ಛತೆ, ಸಂಪರ್ಕ ಸೇರಿ ಮೂಲಭೂತ ಸೌಕರ್ಯ ಇತ್ಯಾದಿ ಕಾಮಗಾರಿಗಳನ್ನು ಪುರ್ಣಗೊಳಿಸುವಂತೆ ಇದೇ ವೇಳೆ ಅಧಿಕಾರಿಗಳಿಗೆ ಜಾರ್ಜ್ ನಿರ್ದೇಶಿಸಿದರು.












Click it and Unblock the Notifications