22ನೇ ದಿನಕ್ಕೆ ಕಾಲಿಟ್ಟ ಕಿಮ್ಸ್ ದಾದಿಯರ ಮುಷ್ಕರ
ಬೆಂಗಳೂರು, ಅಕ್ಟೋಬರ್, 12: ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆ(ಕಿಮ್ಸ್)ಯ ದಾದಿಯರು ರಾಜ್ಯ ಒಕ್ಕಲಿಗರ ಸಂಘದ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 22ನೆ ದಿನಕ್ಕೆ ಕಾಲಿಟ್ಟಿದೆ. ಸೇವೆ ಕಾಯಂಗೊಳಿಸಲು ದಾದಿಯರು ಪಟ್ಟು ಹಿಡಿದಿದ್ದರೆ, ಸಂಘ ವಜಾ ಆದೇಶ ನೀಡಿದೆ.
ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 180 ಮಂದಿ ಶುಶ್ರೂಷಕಿಯರನ್ನು ಕಾಯಂಗೊಳಿಸಲು ಸಾಧ್ಯವಿಲ್ಲ. ವೇತನ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಪ್ರತಿಭಟನೆಯಲ್ಲಿ ನಿರತರಾಗಿರುವವರನ್ನು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದು ಕರ್ತವ್ಯಕ್ಕೆ ಹಾಜರಾದರೆ ವಜಾ ಆದೇಶ ಹಿಂಪಡೆಯುತ್ತೇನೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ತಿಳಿಸಿದ್ದಾರೆ.[ಒಕ್ಕಲಿಗರ ಸಂಘದ ಅಧ್ಯಕ್ಷರಿಗೆ ನರ್ಸ್ಗಳಿಂದ ಬಾಗಿನ]

ಮುಷ್ಕರ ನಿರತ ಅಶ್ವಿನಿ, ಸುಷ್ಮಾ, ಕೌಶಲ್ಯ ಹಾಗೂ ಕಂಪ್ಯೂಟರ್ ಆಪರೇಟರ್ ಪ್ರವೀಣ್ ಕುಮಾರ್ ಮಾತನಾಡಿ, ತಮ್ಮ ಸೇವೆ ಕಾಯಂಗೊಳಿಸುವ ಆದೇಶ ನೀಡಿದರೆ, ತಕ್ಷಣವೇ ಮುಷ್ಕರ ಕೈ ಬಿಡುತ್ತೇವೆ. ವೈದ್ಯಕೀಯ ಶಿಕ್ಷಣ ಸಚಿವ ಡಾ, ಶರಣ ಪ್ರಕಾಶ್ ಪಾಟೀಲರು ಸಿಬ್ಬಂದಿಯನ್ನು ಕಾಯಂ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಕಿಮ್ಸ್ ಆಡಳಿತ ದ್ವಂದ್ವ ನಿಲುವು ತೋರಿಸುತ್ತ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ಆಡಳಿತ ಮಂಡಳಿ ಮತ್ತು ಪ್ರತಿಭಟನಾ ನಿರತರು ಇಬ್ಬರೂ ತಮ್ಮ ಪಟ್ಟು ಸಡಿಲಿಕೆ ಮಾಡುತ್ತಿಲ್ಲ. ಪರಿಣಾಮ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಲೇ ಹೋಗುತ್ತಿದೆ.
ಸಿಬ್ಬಂದಿ ಆರೋಪ ಮತ್ತು ಬೇಡಿಕೆಯೇನು?
* ಬದಲಾದ ಆಡಳಿತ ಮಂಡಳಿ ನಮ್ಮ ಹಕ್ಕುಗಳನ್ನು ಕಸಿದುಕೊಂಡಿದೆ
* ನಾಲ್ಕೈದು ವರ್ಷಗಳಿಂದ ಸ್ಟಾಫ್ ನರ್ಸ್ ಹಾಗೂ ಕಂಪ್ಯೂಟರ್ ಆಪರೇಟರ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 130 ಮಂದಿಯನ್ನುಕಾಯಂಗೊಳಿಸಬೇಕು.
* 2011ರಲ್ಲಿ ಒಂದು ವರ್ಷ ತರಬೇತಿ ಸೇರಿದಂತೆ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಲ್ಲಾ 28 ಶುಶ್ರೂಷಕಿಯರನ್ನು ಅಂದಿನ ಆಡಳಿತ ಮಂಡಳಿ ಕಾಯಂಗೊಳಿಸಿದೆ. ಆದರೆ ಈ ಆಡಳಿತ ಮಂಡಳಿ ನಮ್ಮನ್ನು ಕಾಯಂ ಮಾಡುತ್ತಿಲ್ಲ.
* ಆಡಳಿತ ಮಂಡಳಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದೆ.
* ಇಲ್ಲಿಯವರೆಗೂ ನಮ್ಮ ಸಮಸ್ಯೆ ಆಲಿಸಲು ಇಲ್ಲಿವರೆಗೆ ಯಾರೂ ಭೇಟಿ ನೀಡಿಲ್ಲ
* ಬೇರೆಡೆಗೆ ತೆರಳಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
* ವಯೋಮಿತಿಯ ಸಮಸ್ಯೆಯೂ ಅಡ್ಡಿ ಬರುತ್ತಿದೆ.
* ಆಸ್ಪತ್ರೆಯ ವೆಚ್ಚಚನ್ನು ಏರಿಕೆ ಮಾಡಿದ್ದರೂ ನಮ್ಮ ಸ್ಥಿತಿ ಹಾಗೇ ಇದೆ.
ಆಡಳಿತ ಮಂಡಳಿ ಹೇಳುವುದೇನು?
* ಕಿಮ್ಸ್ 720 ಹಾಸಿಗೆಯುಳ್ಳ ಆಸ್ಪತ್ರೆ, ಆಸ್ಪತ್ರೆಗೆ 350 ದಾದಿಯರು ಸಾಕಾಗಿತ್ತು, ಆದರೂ ಆಸ್ಪತ್ರೆಯಲ್ಲಿ 670 ದಾದಿಯರಿದ್ದಾರೆ. ಅವರೆಲ್ಲರಿಗೂ ವೇತನ ನೀಡಲಾಗುತ್ತಿದೆ.
* ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡವರು ಕಾಯಂ ಮಾಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.
* ಸಂಸ್ಥೆಗೆ ಪ್ರತಿ ವರ್ಷ 110 ಕೋಟಿ ಹಣ ಖರ್ಚಿಗೆ ಬೇಕಿದ್ದು ಆದಾಯ 95 ಕೋಟಿ ಇದೆ.
* ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದಾದಿಯರು, ವೈದ್ಯರು ಇದ್ದಾರೆ. ಆದರೆ ಅವರನ್ನು ಮಾನವೀಯತೆ ದೃಷ್ಟಿಯಿಂದ ಉಳಿಸಿಕೊಂಡಿದ್ದೇವೆ.
* ಸಂಸ್ಥೆ ನಷ್ಟದಲ್ಲಿರುವುದರಿಂದ ಈ ರೀತಿಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ











Click it and Unblock the Notifications