ಫನಿ ಚಂಡಮಾರುತ ಹಾನಿ: ಒಡಿಶಾಕ್ಕೆ ರಾಜ್ಯದಿಂದ 10 ಕೋಟಿ ರೂ. ನೆರವು
ಬೆಂಗಳೂರು, ಮೇ 09: ಫನಿ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಒಡಿಶಾದಲ್ಲಿ ಪುನರ್ವಸತಿ ಮತ್ತು ಪರಿಹಾರ ಕ್ರಮಗಳಿಗಾಗಿ ರಾಜ್ಯ ಸರ್ಕಾರವು 10 ಕೋಟಿ ರೂ. ನೆರವು ನೀಡಿದೆ.
ಅಪಾರ ಜನ, ಜಾನುವಾರು, ಆಸ್ತಿಪಾಸ್ತಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರ ಈ ಅನುದಾನ ಬಿಡುಗಡೆ ಮಾಡಿದೆ.
ಈ ಮೊತ್ತವನ್ನು ಸಾದಿಲ್ವಾರು ನಿಧಿ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆ ಮಾಡಿ, ಬಳಿಕ 2019-20ನೇ ಸಾಲಿನಲ್ಲಿ ಪೂರಕ ಅಂದಾಜುಗಳು ಲೆಕ್ಕ ಶೀರ್ಷಿಕೆಅಡಿ ನಿಧಿಗೆ ಮರುಭರ್ತಿ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಕೆಎಸ್ಆರ್ಟಿಸಿ ನೆರವು
ಮಡಿಕೇರಿ ಪ್ರವಾಹ ಸಂತ್ರಸ್ತರಿಗಾಗಿ ಕೆಎಸ್ಆರ್ಟಿಸಿ ಸಂಸ್ಥೆ 9.17 ಕೋಟಿ ರೂಗಳ ಚೆಕ್ಕನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಗುರುವಾರ ನೀಡಿತು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಕಚೇರಿಯಲ್ಲಿ ಈ ಚೆಕ್ಕನ್ನು ಸ್ವೀಕರಿಸಿದರು. ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಅಧಿಕಾರಿ ಹಾಗೂ ಸಿಬ್ಬಂದಿಗಳ ಒಂದು ದಿನದ ಸಂಬಳದಿಂದ ಸಂಗ್ರಹವಾದ ಹಣವನ್ನು ಮಡಿಕೇರಿ ಮಳೆ ಸಂತ್ರಸ್ತರ ನೆರವಿಗಾಗಿ ಸಲ್ಲಿಸಲಾಗಿದೆ.
ಇದೇ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಿಂದ 17.81 ಲಕ್ಷ ರೂ.ಗಳ ಪರಿಹಾರ ನಿಧಿ ಚೆಕ್ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಶಿವಲಿಂಗೇಗೌಡ, ಸತ್ಯನಾರಾಯಣ, ಕೆ.ಎಸ್.ಆರ್.ಟಿ.ಸಿ. ಹಿರಿಯ ಅಧಿಕಾರಿಗಳಾದ ಬಸವರಾಜು, ಶಿವಯೋಗಿ ಕಳಸದ, ಎನ್.ವಿ.ಪ್ರಸಾದ ಉಪಸ್ಥಿತರಿದ್ದರು.












Click it and Unblock the Notifications