ರೇಷ್ಮೆ ಬೆಳೆಗಾರರಿಗೆ ಸಂತಸದ ಸುದ್ದಿ ನೀಡಿದ ಕರ್ನಾಟಕ ಸರ್ಕಾರ
ಬೆಂಗಳೂರು, ಮೇ 15: ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಹಾಗೂ ರೀಲರ್ಸ್ ಗೆ ರಾಜ್ಯ ಸರ್ಕಾರ ಕೊಡುಗೆ ನೀಡಿದೆ. ಅಡಮಾನ ಸಾಲ ಏರಿಕೆ ಜೊತೆಗೆ, ನೂಲು ಖರೀದಿಗೂ ಅವಕಾಶ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವಾರದ ಹಿಂದಷ್ಟೆ ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್ ಜೊತೆ ರೇಷ್ಮೆ ಇಲಾಖೆ ಸಚಿವ ಡಾ ನಾರಾಯಣಗೌಡ ಸಭೆ ನಡೆಸಿದ್ದರು. ಸಭೆಯಲ್ಲಿ ರೀಲರ್ಸ್, ಅಡಮಾನ ಸಾಲ ಏರಿಕೆ ಹಾಗೂ ರೇಷ್ಮೆ ನೂಲು ಖರೀದಿ ಮಾಡುವ ಬಗ್ಗೆ ಬೆಳೆಗಾರರು, ರೀಲರ್ಸ್ ಬೇಡಿಕೆ ಇಟ್ಟಿದ್ದರು.
ಸಿಎಂ 3ನೇ ಪ್ಯಾಕೇಜ್: ಮೆಕ್ಕೆಜೋಳ ಬೆಳೆಗಾರರಿಗೆ, ಆಶಾ ಕಾರ್ಯಕರ್ತೆರಿಗೆ ಬಂಪರ್
ಈ ಸಂಬಂಧ ಸಚಿವ ನಾರಾಯಣಗೌಡ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ್ದರು. ಪರಿಣಾಮವಾಗಿ ರೇಷ್ಮೆ ಅಡಮಾನ ಸಾಲವನ್ನ ಒಂದು ಲಕ್ಷ ರೂ. ನಿಂದ ಎರಡು ಲಕ್ಷ ರೂಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ನೂಲು ಖರೀದಿಯ ಬೇಡಿಕೆಯನ್ನು ಈಡೇರಿಸಲಾಗಿದೆ. ರೇಷ್ಮೆ ನೂಲು ಖರೀದಿಗಾಗಿ ರಾಜ್ಯ ಸರ್ಕಾರ 10 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಪ್ರತಿ ರೀಲರ್ ನಿಂದ 20 ಕೆ.ಜಿ. ನೂಲು ಖರೀದಿಗೆ ತೀರ್ಮಾನಿಸಲಾಗಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.
2019 ರ ಏಪ್ರಿಲ್ 1 ರಿಂದ ಈ ವರೆಗೆ ಯಾರು ರೀಲರ್ಸ್, ರೇಷ್ಮೆಗೂಡು ಖರೀದಿ ಮತ್ತು ರೇಷ್ಮೆ ಮಾರಾಟದ ವಹಿವಾಟನ್ನು KSMB ಸಂಸ್ಥೆ ಹಾಗೂ ಓಪನ್ ಮಾರ್ಕೆಟ್ ನಲ್ಲಿ ಮಾಡಿರುತ್ತಾರೊ ಅಂತ ರೀಲರ್ಸ್ ಗಳಿಂದ ರೇಷ್ಮೆ ಖರೀದಿಗೆ ತೀರ್ಮಾನಿಸಲಾಗಿದೆ. ರೇಷ್ಮೆ ನೂಲು ಖರೀದಿ ತೀರ್ಮಾನ ಹಾಗೂ ಅಡಮಾನ ಸಾಲ ಏರಿಕೆ ಮಾಡಿರುವ ಕಾರಣ ರೇಷ್ಮೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.