ಗುತ್ತಿಗೆದಾರರ ಸಂಘದ ಬೇಡಿಕೆಗಳ ಈಡೇರಿಕೆಗೆ ಚಿಂತನೆ: ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 10: ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಇಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಗುತ್ತಿಗೆದಾರರ ಸಂಘದ ಎರಡು ದಿನಗಳ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು. ಪ್ಯಾಕೇಜ್ ಟೆಂಡರ್ ವ್ಯವಸ್ಥೆ ರದ್ದು, ಹಣಪಾವತಿಯಲ್ಲಿ ವಿಳಂಬ ಸೇರಿದಂತೆ ರಾಜ್ಯ ಗುತ್ತಿಗೆದಾರರ ಸಂಘ ಮಾಡಿರುವ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೇವಲ 100 ಜನ ಸದಸ್ಯರಿಂದ ಪ್ರಾರಂಭವಾದ ಈ ಸಂಘ ಇಂದು 70 ಸಾವಿರಕ್ಕೂ ಹೆಚ್ಚು ನೊಂದಾಯಿತ ಗುತ್ತಿಗೆದಾರ ಸದಸ್ಯರನ್ನು ಹೊಂದಿರುವುದು ಬಹಳ ಶ್ಲಾಘನೀಯ. ಗುತ್ತಿಗೆದಾರರು ನಾಡನ್ನು ಕಟ್ಟುವಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತಿದ್ದಾರೆ. ಗುತ್ತಿಗೆದಾರರು ನ್ಯಾಯಯುತವಾಗಿ ಕೆಲಸ ಮಾಡಿ, ನಾವೂ ನ್ಯಾಯಯುತವಾಗಿ ಕೆಲಸ ಮಾಡುತ್ತೇವೆ. ಈ ಮೂಲಕ ರಾಜ್ಯವನ್ನು ಕಟ್ಟುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಸಾರಿಗೆ ಸಚಿವ ಹೆಚ್ ಎಂ ರೇವಣ್ಣ ಮಾತನಾಡಿ, ರಾಜ್ಯಕಟ್ಟುವಲ್ಲಿ ಗುತ್ತಿಗೆದಾರರ ಪಾತ್ರ ಬಹಳ ದೊಡ್ಡದಿದೆ. ಬೇಡಿಕೆಗಳಲ್ಲಿ ಕೆಲವು ನ್ಯಾಯಯುತವಾಗಿದ್ದು, ಇನ್ನು ಕೆಲವು ಈಡೇರಿಸಲು ಕಷ್ಟ ಸಾಧ್ಯ. ಈ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಜಿ.ಎಂ ರವೀಂದ್ರ, ಶಾಸಕ ಅಶ್ವಥ್ನಾರಾಯಣ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ಯಾಕೇಜ್ ಟೆಂಡರನ್ನು ರದ್ದುಗೊಳಿಸಬೇಕು
ಇತ್ತೀಚಿನ ದಿನಗಳಲ್ಲಿ ಕೆಲವೊಂದು ಇಲಾಖೆಗಳಲ್ಲಿ ಅನೇಕ ಕಾಮಗಾರಿಗಳ ಒಂದು ಗುಂಪು ಮಾಡು ಆ ಗುಂಪುಗಳನ್ನು ಪ್ಯಾಕೇಜ್ ಟೆಂಡರ್ ಎಂಬ ಹೆಸರಿನಲ್ಲಿ ಟೆಂಡರ್ ಆಹ್ವಾನಿಸುತ್ತಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ಕಾಮಗಾರಿಯು ಸರಿಯಾದ ಸಮಯಕ್ಕೆ ಮುಗಿಸುವುದು ಅಸಾಧ್ಯವಾಗುತ್ತದೆ. ಬಿಡಿ ಬಿಡಿಯಾಗಿ ಟೆಂಡರ್ ಕರೆಯುವುದರಿಂದ ಅರ್ಹ ಗುತ್ತಿಗೆದಾರರು ಭಾಗವಹಿಸಲು ಸಾಧ್ಯವಾಗುತ್ತದೆ, ಹಾಗೆಯೇ ಸರಕಾರಿ ಬೊಕ್ಕಸಕ್ಕೆ ಲಾಭವಾಗುತ್ತದೆ

ಯಂತ್ರೋಪಕರಣಗಳ ಹೊಂದುವಿಕೆ
ಕೆಲವೇ ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದೇಶದಿಂದ ಸ್ವಂತ ಯಂತ್ರೋಪಕರಣ ಹೊಂದಿದ ಗುತ್ತಿಗೆದಾರರು ಮಾತ್ರ ಟೆಂಡರಿನಲ್ಲಿ ಭಾಗವಹಿಸುವಂತೆ ಟೆಂಡರ್ ಕರೆಯಲಾಗುತ್ತಿದೆ. ಬಾಡಿಗೆ ಆಧಾರದಲ್ಲಿ ಯಂತ್ರೋಪಕರಣಗಳನ್ನು ಪಡೆಯಲು ಸಾಧ್ಯವಿರುವ ಗುತ್ತಿಗೆದಾರರಿಗೆ ಟೆಂಡರಿನಲ್ಲಿ ಭಾಗವಹಿಸುವ ಅವಕಾಶ ನೀಡಬೇಕು. ಇದರಿಂದ ಹೆಚ್ಚಿನ ಗುತ್ತಿಗೆದಾರರು ಟೆಂಡರಿನಲ್ಲಿ ಭಾಗವಹಿಸುವುದರಿಂದ ಸರಕಾರಕ್ಕೆ ಆರ್ಥಿಕ ಲಾಭವಾಗುತ್ತದೆ. ಅಲ್ಲದೆ, ಕಾಲಮಿತಿಯೊಳಕೆ ಕಾಮಗಾರಿ ಪೂರ್ನಗೊಳ್ಳಲು ಸಹಕಾರಿಯಾಗುತ್ತದೆ. ಗುತ್ತಿಗೆದಾರರು ಸ್ವತಃ ಯಂತ್ರೋಪಕರಣಗಳನ್ನು ಹೊಂದಿರಬೇಕೆಂಬ ನಿಯಮ ಸಡಿಲಿಸಿ, ಬಾಡಿಗೆ ಕರಾರಿನ ಅನ್ವಯ ಹೊಂದುವ ಉಪಕರಣಗಳನ್ನು ಕೂಡಾ ಮಾನ್ಯ ಮಾಡಬೇಕು. ಎರಡು ಲಕೋಟೆ ಪದ್ದತಿಯ ನಿಯಮಾವಳಿಗಳನ್ನು ರೂಪಿಸುವಾಗ ಗುತ್ತಿಗೆದಾರರ ಪ್ರತಿನಿಧಿಗಳನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಬೇಕೆಂದು ಗುತ್ತಿಗೆದಾರರ ಹಂಬಲವಾಗಿದೆ.

ಹಣಪಾವತಿ, ನೋಂದಾವಣೆ
ಹಣಪಾವತಿ: ಕಾಮಗಾರಿ ಮುಗಿಸಿ ಅಳತೆ ಪುಸ್ತಕಗಳಲ್ಲಿ ಕಾಮಗಾರಿಯ ಬಿಲ್ಲು ಬರೆದ 30 ದಿನಗಳ ಓಳಗಾಗಿ ಗುತ್ತಿಗೆದಾರರಿಗೆ ಹಣ ಪಾವತಿಸುವಂತೆ ನಿಯಮಾವಳಿ ಸೂಚಿಸುತ್ತದೆ. ಗುತ್ತಿಗೆದಾರರಿಗೆ ಹಣ ಪಾವತಿಸುವಲ್ಲಿ ವಿಳಂಬವಾದರೆ ವಿಳಂಬದ ಅವಧಿಗೆ ಬಡ್ಡಿ ನೀಡಬೇಕೆಂಬ ನಿಯಮವೂ ಇದೆ. ಹಾಗೂ ಈ ನಿಯಮವನ್ನು ದೇಶದ ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಹೀಗಿರುವಾಗ ಅಳತೆ ಪುಸ್ತಕದಲ್ಲಿ ಕಾಮಗಾರಿಯ ಬಿಲ್ಲು ನಮೂದಿಸಿದ 30 ದಿನಗಳ ಓಳಗಾಗಿ ಗುತ್ತಿಗೆದಾರರಿಗೆ ಹಣ ಪಾವತಿಸಬೇಕು. ಹಣ ಪಾವತಿಸಲು ವಿಳಂಬವಾದಲ್ಲಿ ವಾರ್ಷಿಕ 12% ಬಡ್ಡಿ ಗುತ್ತಿಗೆದಾರರಿಗೆ ನೀಡುವ ವ್ಯವಸ್ಥೆ ಮಾಡಬೇಕು.
ನೋಂದಾವಣೆ: ಕರ್ನಾಟಕ ರಾಜ್ಯ ಗುತ್ತಿಗೆದಾರರ ನೋಂದಾವಣಿಯನ್ನು ಎಲ್ಲಾ ಸರಕಾರಿ ಇಲಾಖೆಗಳಲ್ಲಿ ಪ್ರತ್ಯೇಕವಾಗಿ ಮಾಡದೆ ಏಕಗವಾಕ್ಷಿ ಪದ್ದತಿ ಮುಖಾಂತರ ಒಂದೇ ಇಲಾಖೆಯಲ್ಲಿ ಮಾಡಬೇಕು.

ಗುತ್ತಿಗೆದಾರರ ಕ್ಷೇಮನಿಧಿ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಗುತ್ತಿಗೆದಾರರ ಬಿಲ್ನಿಂದ ಹಣದಲ್ಲಿ ಶೇಕಡಾ 0.01 ನಷ್ಟು ಹಣ ಖಟಾಯಿಸಲು ಶಾಸನಬದ್ದ ಆದೇಶ ಹೊರಡಿಸಲು ಕಾರಣಕರ್ತರಾಗಿದ್ದರು. ಗುತ್ತಿಗೆದಾರರು ಮೃತಪಟ್ಟಲ್ಲಿ ಆತನ ಪತ್ನಿ - ಮಕ್ಕಳಿಗೆ ಕನಿಷ್ಟ 10 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು. ಅನಾರೋಗ್ಯ ಪೀಡಿತ ಗುತ್ತಿಗೆದಾರರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಬೇಕು. ಗುತ್ತಿಗೆದಾರರ ಮಕ್ಕಳ ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ಈ ಕ್ಷೇಮ ನಿಧಿಯಿಂದ ನೀಡುವಂತಾಗಬೇಕು.

ನಿರ್ಮಿತಿ ಕೇಂದ್ರಗಳ ಕಾಮಗಾರಿಗಳ ರದ್ದತಿ
ಸರಕಾರವೇ ಸದುದ್ದೇಶದಿಂದ ಪ್ರಾರಂಭಿಸಿದ ಸಂಸ್ಥೆಯಾದ ಕೆ.ಆರ್.ಐ.ಡಿ.ಎಲ್ (ಭೂ ಸೇನಾ ನಿಗಮ) ಸಂಪೂರ್ಣ ವಿಫಲವಾಗಿದ್ದು, ಕರ್ನಾಟಕ ನಿರ್ಮಾಣ ನಿಗಮದಂತೆ ಒಂದು ಬಿಳಿ ಆನೆ ಎನಿಸಿದೆ. ಈ ನಿಗಮವು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡೇ ಕಾಮಗಾರಿಗಳನ್ನು ಪಡೆಯುವಂತೆ ನಿಯಮ ರೂಪಿಸಿದಲ್ಲಿ ಗುತ್ತಿಗೆ ರಂಗದಲ್ಲಿ ಸ್ಪರ್ಧಾತ್ಮಕತೆ ಜಾಸ್ತಿಯಾಗಲಿದೆ. ಇದೇ ರೀತಿ ನಿರ್ಮಿತಿ ಕೇಂದ್ರದ ಮೂಲಕ ನಿರ್ವಹಿಸುವ ಕಾಮಗಾರಿಗಳನ್ನು ಕೂಡಾ ಸ್ಥಗಿತಗೊಳಿಸಬೇಕು.
ಟೆಂಡರ್ ಆಧಾರದ ಮೇಲೆ ಕಾಮಗಾರಿ ವಹಿಸುವ ಕುರಿತು: ಪ್ರಾಕೃತಿಕ ವಿಕೋಪ ನಿರ್ವಹಣೆ ಕಾಮಗಾರಿಯೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾಮಗಾರಿಗಳನ್ನು ಟೆಂಡರ್ ಮೂಲಕವೇ ನಿರ್ವಹಿಸಬೇಕು. ಕಾರ್ಯಪಾಲಕ ಇಂಜಿನೀಯರ್ರವರ ಕಚೇರಿಯ ಮಟ್ಟದಲ್ಲಿಯೇ ಕರಾರು ಪತ್ರಗಳ ಸಹಿತ ಎಲ್ಲಾ ಕೆಲಸ ಆಗುವಂತಾಗಬೇಕು, ಬೇರೆ - ಬೇರೇ ಕಚೇರಿಗಳಿಗೆ ಗುತ್ತಿಗೆದಾರರು ಅಲೆಯುವುದನ್ನು ತಪ್ಪಿಸಬೇಕು.











Click it and Unblock the Notifications