'ದೀರ್ಘ ರಜಾ ಮುಗಿಸಿ ಬರುತ್ತಿರುವ ಬಿಜೆಪಿ ಶಾಸಕರೇ ಈಗಲಾದರೂ ಕೆಲಸ ಆರಂಭಿಸಿ'
ಬೆಂಗಳೂರು, ಜನವರಿ 17: "ದೆಹಲಿ ಸಮೀಪದ ವಿಲಾಸಿ ರೆಸಾರ್ಟ್ ನಲ್ಲಿ ದೀರ್ಘ ರಜಾ ಕಳೆದು ಮನೆಗೆ ಹಿಂತಿರುಗುತ್ತಿರುವ ಕರ್ನಾಟಕದ ಬಿಜೆಪಿಯ ಎಲ್ಲ ಶಾಸಕರಿಗೂ ಹೃದಯಪೂರ್ವಕ ಸ್ವಾಗತ ಕೋರುತ್ತೇವೆ. ಈಗ ಸಾಕಷ್ಟು ಚೈತನ್ಯ ಪಡೆದಿರಬಹುದು. ಬಹಳ ಕಾಲದಿಂದ ನಿರ್ಲಕ್ಷ್ಯ ಮಾಡಿರುವ ತಮ್ಮ ಕ್ಷೇತ್ರಗಳಲ್ಲಿನ ಕೆಲಸಗಳನ್ನು ಈಗಲಾದರೂ ಮಾಡಬಹುದು ಅಂದುಕೊಳ್ಳೋಣ".
-ಹೀಗೆ ಟ್ವೀಟ್ ಮಾಡುವ ಮೂಲಕ ಬಿಜೆಪಿ ಶಾಸಕರಿಗೆ ಕಾಲೆಳೆದಿದೆ ಕೆಪಿಸಿಸಿ. ಬಿಜೆಪಿಯ ನೂರಾನಾಲ್ಕು ಶಾಸಕರು ಗುರುಗಾಂವ್ ನ ಫೈವ್ ಸ್ಟಾರ್ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಅಲ್ಲಿನ ರೂಮ್ ಗೆ ದಿನಕ್ಕೆ ಮೂವತ್ತು ಸಾವಿರ ರುಪಾಯಿ.
We extend a hearty welcome to all Karnataka BJP MLAs who are returning home after an extended holiday at a luxury resort near Delhi. Now that they are sufficiently rejuvenated let us hope they will attend to the work of their constituencies which they have neglected for long.
— KPCC President (@KPCCPresident) 17 January 2019
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲ್ಲಿ ಯಡಿಯೂರಪ್ಪ ಹಿಂತಿರುಗಿದ್ದಾರೆ. "ಲೋಕಸಭೆ ಚುನಾವಣೆಗೆ ಪೂರ್ವಭಾವಿ ಚರ್ಚೆ" ನಡೆಸುತ್ತಿದ್ದೆವು ಎಂದು ಅವರು ಹೇಳಿದ್ದಾರೆ.
ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಬಿಜೆಪಿ ಸದಸ್ಯರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನ ಆಂತರಿಕ ಬಿಕ್ಕಟ್ಟಿನ ಕಾರಣಕ್ಕೆ ಸರಕಾರಕ್ಕೆ ಸಮಸ್ಯೆ ಎದುರಾಗಿದೆ ಎಂದಿದ್ದಾರೆ.
ಯಡಿಯೂರಪ್ಪ ಆಪರೇಷನ್ ಕಮಲ ಹಾಳುಗೆಡವಿದ್ದೇ ಈ ಪಂಚ ಪಾಂಡವರು!
ಅಂದಹಾಗೆ, ಇಬ್ಬರು ಪಕ್ಷೇತರರು ನೀಡಿದ್ದ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿ, ರಾಜ್ಯಪಾಲರಿಗೆ ಪತ್ರ ಕಳುಹಿಸಿದ್ದರು. ಕಾಂಗ್ರೆಸ್ ನ ಐವರು ಶಾಸಕರು ನಾಪತ್ತೆಯಾಗಿದ್ದರು. ಹೀಗೆ ಏನೆಲ್ಲ ಆತಂಕಕ್ಕೆ ಕಾರಣ ಆಗಿತ್ತೋ ಬುಧವಾರ ಸಂಜೆ ಹೊತ್ತಿಗೇ ಎಲ್ಲ ತಿಳಿಯಾಯಿತು.
ಆಪರೇಷನ್ ಕಮಲ ಕೊನೆಯಾಗಿದೆ. ನಮ್ಮ ಎಲ್ಲ ಶಾಸಕರ ಬೆಂಬಲ ಇರುವುದರಿಂದ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ-ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.