ಕರ್ನಾಟಕ ಹೈಕೋರ್ಟಿನಿಂದ ವಿಜಯ್ ಮಲ್ಯಗೆ ವಾರಂಟ್
ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಮದ್ಯದ ದೊರೆ ವಿಜಯ್ ಮಲ್ಯಗೆ ಬೆಂಗಳೂರು ಹೈಕೋರ್ಟ್ ವಾರಂಟ್ ಜಾರಿ ಮಾಡಿದೆ. ಆದರೆ ಇದು ಜಾಮೀನು ಪಡೆದುಕೊಳ್ಳಬಹುದಾದ ವಾರಂಟ್ ಆಗಿದ್ದು ಅವರ ಬೆಂಗಳೂರು ವಿಳಾಸಕ್ಕೆ ಕಳುಹಿಸಲಾಗಿದೆ.
ಬೆಂಗಳೂರು, ಜನವರಿ 27: ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ಲಿಕ್ಕರ್ ದೊರೆ ವಿಜಯ್ ಮಲ್ಯಗೆ ವಾರಂಟ್ ಜಾರಿ ಮಾಡಿದೆ. ಆದರೆ ಇದೊಂದು ಜಾಮೀನು ಪಡೆಯಬಹುದಾದ ವಾರಂಟ್ ಆಗಿದೆ.
ಬ್ಯಾಂಕುಗಳ ಒಕ್ಕೂಟ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನಲೆಯಲ್ಲಿ ಕೋರ್ಟ್ ಮೊರೆ ಹೋಗಿತ್ತು. ಈ ಸಂಬಂಧ ಆದೇಶ ನೀಡಿದ ನ್ಯಾಯಮೂರ್ತಿ ಜಯಂತ್ ಯಾದವ್ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗಿಯ ಪೀಠ ವಾರಂಟ್ ಜಾರಿಗೊಳಿಸಿದೆ. ಬೆಂಗಳೂರು ವಿಳಾಸಕ್ಕೆ ವಾರಂಟ್ ಜಾರಿ ಮಾಡಲಾಗಿದ್ದು ಫೆಬ್ರವರಿ 17ರ ಮೊದಲು ಹಿಂದುರಿಗಿಸಬೇಕಾಗಿದೆ. [ಮಲ್ಯರಿಂದ ಅಕ್ರಮವಾಗಿ ಸಾಗರೋತ್ತರ ಖಾತೆಗೆ ಹಣ ವರ್ಗಾವಣೆ?]

ಈ ಹಿಂದಿನ ಡಿಸೆಂಬರ್ 2, 2016ರ ಆದೇಶದ ಪ್ರಕಾರ ಜನವರಿ 19, 2017ರಂದು ವಿಜಯ್ ಮಲ್ಯ ಕೋರ್ಟಿಗೆ ಹಾಜರಾಗಬೇಕಾಗಿತ್ತು. ನಂತರ ದಿನಾಂಕ ಮುಂದೂಡಿ ಶುಕ್ರವಾರ (ಇಂದು) ಹಾಜರಾಗುವಂತೆ ತಿಳಿಸಲಾಗಿತ್ತು.
ಆದರೆ ಕೋರ್ಟಿಗೆ ಹಾಜರಾಗದ ಹಿನ್ನಲೆಯಲ್ಲಿ ಈಗ ಅವರಿಗೆ ವಾರಂಟ್ ಜಾರಿ ಮಾಡಲಾಗಿದೆ. [ಸಿಬಿಐನಿಂದ ಮಲ್ಯ ಸಂಸ್ಥೆಯ ನಾಲ್ವರು ಅಧಿಕಾರಿಗಳ ಬಂಧನ ]
ಮಲ್ಯ ವಿರುದ್ಧದ ಪ್ರಕರಣ ಹೈಕೋರ್ಟ್ ಮತ್ತು ನ್ಯಾಯಾಧಿಕರಣದಲ್ಲಿರುವಾಗ, ಮಲ್ಯ ಯುಬಿ ಲಿಮಿಟೆಡ್ ನಲ್ಲಿರುವ ತಮ್ಮ 1,04,86,666 ಶೇರುಗಳು ಮತ್ತು ತಮ್ಮ ಮಗ ಸಿದ್ಧಾರ್ಥ್ ಮಲ್ಯನ 1,04,64,288 ಶೇರುಗಳನ್ನು ಸ್ಟಾಂಡರ್ಡ್ ಚಾರ್ಟೆಂಡ್ ಬ್ಯಾಂಕಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಇದು ನ್ಯಾಯಾಧಿಕರಣದ ಮುಂದೆ ಮಲ್ಯ ನೀಡಿರುವ ಹೇಳಿಕೆಯ ಉಲ್ಲಂಘಟನೆಯಾಗಿದೆ ಎಂದು ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಬ್ಯಾಂಕುಗಳು ಉಲ್ಲೇಖಿಸಿವೆ.












Click it and Unblock the Notifications