ದಿಢೀರ್ ಭೇಟಿ ನೀಡಿ ಪರಿಶೀಲಿಸಿ: ಬಿಬಿಎಂಪಿ, ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಏಪ್ರಿಲ್ 9: ಕೋವಿಡ್-19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ನಿವಾಸಿ ಸಂಕೀರ್ಣಗಳು, ಹೋಟೆಲ್ಗಳು ಮತ್ತು ಇತರೆ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ದಿಢೀರ್ ಭೇಟಿ ನೀಡಿ ಪರಿಶೀಲಿಸುವ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿವಿಧ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಲ್ಲಿ ಸಮಾರಂಭಗಳನ್ನು ಆಯೋಜಿಸಿದ ಬಳಿಕ ಅನೇಕರು ಕೋವಿಡ್-19 ಸೋಂಕಿಗೆ ಒಳಗಾಗಿರುವ ಹಲವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ.
'ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಚ್ಚರಿಯ ಭೇಟಿಗಳನ್ನು ನೀಡುವುದು ಹೆಚ್ಚು ಅಗತ್ಯವಾಗಿದೆ' ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಹೇಳಿತು.

ಏಪ್ರಿಲ್ 4ರಂದು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಪಾಡು ಮಾಡಲಾದ ಕೋವಿಡ್-19 ಮಾರ್ಗಸೂಚಿಯ ಪ್ರಕಾರ ಹೊರ ಪ್ರದೇಶಗಳಲ್ಲಿ 500 ಜನರು ಸೇರಲು ಮತ್ತು ಒಳಾಂಗಣಗಳಲ್ಲಿ 200 ಜನರು ಸೇರಲು ಅವಕಾಶವಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.
ಆದರೆ ಸರ್ಕಾರವು ಹೊರಾಂಗಣ ಮತ್ತು ಮುಚ್ಚಿದ ಪ್ರದೇಶಗಳಲ್ಲಿನ ಸಭಾಂಗಣಗಳು ಎಂದರೆ ಯಾವುದು ಎಂದು ವ್ಯಾಖ್ಯಾನಿಸಿಲ್ಲ. ಇದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಲು ಮತ್ತು ವೈರಸ್ ಹರಡಲು ಅವಕಾಶ ಮಾಡಿಕೊಡಲಿದೆ ಎಂದು ವಕೀಲ ದಳವಾಯಿ ವೆಂಕಟೇಶ್ ಆಕ್ಷೇಪ ಸಲ್ಲಿಸಿದರು.
ಇದನ್ನು ಪರಿಗಣಿಸಿದ ಕೋರ್ಟ್, ರಾಜ್ಯ ಸರ್ಕಾರವು ಕೂಡಲೇ ಕ್ರಮ ಕೈಗೊಂಡು ಆದೇಶವನ್ನು ಬದಲಿಸಬೇಕು ಎಂದು ಸೂಚನೆ ನೀಡಿತು.












Click it and Unblock the Notifications