ಸುಳ್ಳು ಜಾತಿ ನಿಂದನೆ ಕೇಸ್ ಮಾಡಿ 25 ಸಾವಿರ ದಂಡ ಹಾಕಿಸಿಕೊಂಡ ಅಸಾಮಿ
ಬೆಂಗಳೂರು, ಸೆ.22: ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಿದೆ. ಆ ಕಾಯ್ದೆಯನ್ನು ಬಳಸಿ ಸಣ್ಣ ಪುಟ್ಟ ಕಾರಣಗಳಿಗೆ ಕೇಸ್ ಹಾಕಿ ಇತರೆ ಜನಾಂಗದ ವ್ಯಕ್ತಿಗಳನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ. ಅಂತಹ ಸಂದರ್ಭಗಳು ನ್ಯಾಯಾಲಯಗಳು ಅಂತಹ ಪ್ರಯತ್ನಗಳನ್ನು ಹತ್ತಿಕ್ಕುವ ಆದೇಶವನ್ನು ಹೊರಡಿಸುತ್ತಿದೆ.
ಅಂತಹುದೇ ಒಂದು ಪ್ರಕರಣದಲ್ಲಿ ಹೈಕೋರ್ಟ್ ವ್ಯಕ್ತಿಗೆ 25 ಸಾವಿರ ರೂ. ದಂಡ ವಿಧಿಸಿದೆ. ನಿರ್ವಹಣಾ ಶುಲ್ಕ ಪಾವತಿಸದ್ದಕ್ಕೆ ಫ್ಲಾಟ್ಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ಸೇರಿ ಇತರೆ ಸಾಮಾನ್ಯ ಸೇವೆಗಳನ್ನು ಸ್ಥಗಿತಗೊಳಿಸಿದ ಕಾರಣಕ್ಕೆ ಅಪಾರ್ಟ್ವೊಂದರ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಜಾತಿ ನಿಂದನೆ ಆರೋಪ ಸಂಬಂಧ ಸುಳ್ಳು ದೂರು ದಾಖಲಿಸಿದ ವ್ಯಕ್ತಿಗೆ 25 ಸಾವಿರ ರು. ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ನಗರದ ಮೈಸೂರು ರಸ್ತೆಯ ಕೈಲಾಶ್ ಅಪಾರ್ಟ್ಮೆಂಟ್ ನಿವಾಸಿ ಕೆ.ಎಸ್. ರವಿಕುಮಾರ್ ದಂಡನೆಗೆ ಗುರಿಯಾಗಿರುವ ವ್ಯಕ್ತಿ.
ಅಪಾರ್ಟ್ಮೆಂಟ್ನ ಪದಾಧಿಕಾರಿಗಳ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿತು.
ಅಲ್ಲದೆ, ನಿರ್ವಹಣಾ ಶುಲ್ಕ ಪಾತಿಸಿಲ್ಲ ಎಂಬ ಸಂಗತಿಯನ್ನು ಸ್ವತಃ ದೂರುದಾರ ರವಿಕುಮಾರ್ ಒಪ್ಪಿಕೊಂಡ ಮತ್ತು ಅನೇಕ ಬಾರಿ ನೋಟಿಸ್ ಜಾರಿಗೊಳಿಸಿದ ಹೊರತಾಗಿಯೂ ನಿರ್ವಹಣಾ ಶುಲ್ಕ ಪಾವತಿಸದ ಹಿನ್ನೆಲೆಯಲ್ಲಿ ಸಂಘವು ದೂರುದಾರರ ಫ್ಲಾಟ್ಗೆ ವಿದ್ಯುತ್ ಸಂಪರ್ಕ ಹಾಗೂ ಇತರೆ ಸಾಮಾನ್ಯ ಸೇವೆಗಳನ್ನು ಸ್ಥಗಿತಗೊಳಿಸಿರುವ ಸಂಗತಿಯನ್ನು ಪರಿಗಣಿಸಿದ ಹೈಕೋರ್ಟ್, ಸುಳ್ಳು ದೂರು ದಾಖಲಿಸಿದ ರವಿಕುಮಾರ್ಗೆ 25 ಸಾವಿರ ರೂ. ದಂಡ ವಿಧಿಸಿದೆ ಹಾಗೂ ರವಿಕುಮಾರ್ ನಡೆ ಕಾನೂನಿನ ದುರ್ಬಳಕೆ ಪ್ರಯತ್ನವಾಗಿದೆ ಎಂದು ಕಿಡಿ ಕಾರಿದೆ.
ನ್ಯಾಯಪೀಠ ಅಸಮಾಧಾನ: ಸುಳ್ಳು ದೂರು ದಾಖಲಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನಿಜವಾಗಿ ದೌರ್ಜನ್ಯಕ್ಕೆ ತುತ್ತಾದವರಿಗೆ ಕಾಯ್ದೆ ಪ್ರಯೋಜನ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಜಾತಿ ನಿಂದನೆ ಆರೋಪ ಸಂಬಂಧ ರವಿ ಕುಮಾರ್ ತಮ್ಮ ವಿರುದ್ಧ ನಗರದ 31ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಖಾಸಗಿ ದೂರು ಮತ್ತು ಅದನ್ನು ಆಧರಿಸಿ ಕೆಂಗೇರಿ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಕೈಲಾಶ್ ಅಪಾರ್ಟ್ಮೆಂಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಅರುಣಾ ಕಣ್ಣೂರು, ಸಂಘದ ಕಾರ್ಯದರ್ಶಿ ರಾಮಲಿಂಗಯ್ಯ ಮತ್ತು ಅಪಾರ್ಟ್ಮೆಂಟ್ ನಿವಾಸಿ ಬಿ.ಎನ್. ಅಭಿಷೇಕ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಹಿನ್ನೆಲೆ?: ನಗರದ ಮೈಸೂರು ರಸ್ತೆಯ ಕೈಲಾಶ್ ಅಪಾರ್ಟ್ಮೆಂಟ್ ನಿವಾಸಿ ರವಿಕುಮಾರ್ 2018ರಿಂದ ನಿರ್ವಹಣಾ ಶುಲ್ಕ ಪಾವತಿಸಿರಲಿಲ್ಲ. ಇದರಿಂದ ಶುಲ್ಕ ಪಾವತಿಸುವಂತೆ ಅಪಾರ್ಟ್ಮೆಂಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘವು ಸೂಚಿಸಿ ಹಲವು ಬಾರಿ ನೋಟಿಸ್ ಜಾರಿ ಮಾಡಿತ್ತು. ಆದರೂ ನಿರ್ವಹಣಾ ಶುಲ್ಕ ಪಾವತಿಸದಕ್ಕೆ ಸಂಘದ ನಿಯಮ ಪ್ರಕಾರ ರವಿಕುಮಾರ್ ಫ್ಲಾಟ್ಗೆ ವಿದ್ಯುತ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು.
ಈ ಕಾರಣಕ್ಕೆ ನನ್ನ ಜಾತಿ ಕಾರಣದಿಂದ ಫ್ಲಾಟ್ಗೆ ಸೌಲಭ್ಯ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಸಹಕಾರ ಸಂಘಗಳ ರಿಜಿಸ್ಟ್ರಾರ್, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ರವಿ ಕುಮಾರ್ ದೂರು ಸಲ್ಲಿಸಿದ್ದರು. ಜತೆಗೆ ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಕೆಂಗೇರಿ ಠಾಣಾ ಪೊಲೀಸರು ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಹಾಗಾಗಿ, ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಅರುಣಾ ಕಣ್ಣೂರು ಮತ್ತಿತರರು ಹೈಕೋರ್ಟ್ ಮೊರೆ ಹೋಗಿದ್ದರು.