RSS ಕಡೆ ಮಕ್ಕಳ ಮನಸ್ಸು ಸೆಳೆಯುವ ಹುನ್ನಾರ: ಪ್ರೊ. ಮರುಳಸಿದ್ದಪ್ಪ
ಬೆಂಗಳೂರು, ಮೇ.25: ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಮುನ್ಸೂಚನೆಗಳನ್ನ ನೀಡದೆ, ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ಮಾಡದೆ ಏಕಪಕ್ಷೀಯವಾಗಿ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನೇಮಿಸಿದೆ. ಆದರೆ ಈ ಸಮಿತಿಯನ್ನು ನೇಮಿಸುವಾಗ ಅನೇಕ ನಿಯಮಗಳನ್ನು, ಸಂವಿಧಾನದ ನೀತಿಸಂಹಿತೆಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಗಾಂಧಿ ಭವನದಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರ ಸಮಾಲೋಚನಾ ಸಭೆಯಲ್ಲಿ ಆರೋಪಿಸಿದರು.
ಸಮಾಲೋಚನೆ ಸಭೆ ಅಧ್ಯಕ್ಷತೆ ವಹಿಸಿದ್ದ ಪ್ರೊ. ಮರುಳಸಿದ್ದಪ್ಪ ಮಾತನಾಡಿ, 'ನಾನು ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ಸಮಿತಿಯಲ್ಲಿ ಕೆಲಸ ಮಾಡಿದ ಸಮಯದಲ್ಲಿ ಮುದ್ರಣಗೊಂಡ ಪಠ್ಯಪುಸ್ತಕ ಹತ್ತು ವರ್ಷ ಇತ್ತು. ಯಾವುದೇ ಪಠ್ಯ ಇರಲಿ ಅದು ಸಂವಿಧಾನದ ತತ್ವವನ್ನು ಸಾರುವಂತಿರಬೇಕು. ಮಕ್ಕಳ ಶಿಕ್ಷಣದ ಸಮಯದಲ್ಲಿ ಮನೆ ವಾತಾವರಣದೊಂದಿಗೆ ಶಿಕ್ಷಣ ಬಿಟ್ರೆ ಯಾವ ವಿಚಾರಗಳು ಮನಸ್ಸಿಗೆ ಹೋಗಬಾರದು. ಆದರೆ ಬಿಜೆಪಿ ನೇತೃತ್ವದ ಸರ್ಕಾರಗಳು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಆರ್ಎಸ್ಎಸ್ ಕಡೆ ಗಮನ ಸೆಳೆಯಲು ಈ ರೀತಿಯ ಪಠ್ಯಪರಿಷ್ಕರಣೆ ಮಾಡಿ ಮಕ್ಕಳ ಮೈಂಡ್ ವಾಶ್ ಮಾಡಲು ಹೊರಟಿದೆ. ಓದುವ ಮಕ್ಕಳ ಬಗ್ಗೆ ಪ್ರೀತಿ ಇಲ್ಲವರು ಈ ರೀತಿ ಮಾಡಲು ಸಾಧ್ಯ, ಮಕ್ಕಳ ಮನಸ್ಸಿನಲ್ಲಿ ತಮ್ಮ (ಆರ್ಎಸ್ಎಸ್) ಸಿದ್ದಾಂತವನ್ನು ಬೇರೂರಬೇಕು ಎಂಬುದಷ್ಟೆ ಇವರ ಉದ್ದೇಶ. ಇದೆಲ್ಲಾ ರೋಹಿತ್ ಚಕ್ರತೀರ್ಥ ಒಬ್ಬನೇ ಮಾಡುತ್ತಿರುವುದಲ್ಲ ಇದರ ಹಿಂದೆ ಬೇರೆಯವರಿದ್ದು ಮಾಡಿಸುತ್ತಿದ್ದಾರೆ," ಎಂದು ಹೇಳಿದರು.

ಕುವೆಂಪು ನಾಡಗೀತೆ ವಿಚಾರವಾಗಿ ಅವಹೇಳನ ಮಾಡಿದ್ದ ರೋಹಿತ್ ಚಕ್ರವರ್ತಿಯನ್ನು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಪಠ್ಯ ಪುಸ್ತಕ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ದ ದೊಡ್ಡ ಮಟ್ಟದಲ್ಲಿ ಜನಾಭಿಪ್ರಾಯವನ್ನು ರೂಪಿಸಬೇಕು. ಈ ಮೂಲಕ ಬಿಜೆಪಿ ಸರ್ಕಾರಕ್ಕೆ ಹಿನ್ನಡೆಯಾಗಬೇಕು, ಅಧಿಕಾರ ಕಳೆದುಕೊಳ್ಳುವಂತೆ ಮಾಡೋಣ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರೊ. ಮರುಳಸಿದ್ದಪ್ಪ ಹೇಳಿದರು.
ನಾಗೇಶ್- ಚಕ್ರತೀರ್ಥ: ಹಾಗಲಕಾಯಿ ಬೇವಿನಕಾಯಿ
ಇದೇ ವೇದಿಕೆಯಲ್ಲಿ ಮತ್ತೊಬ್ಬ ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಶಿಕ್ಷಣ ಸಚಿವ ಬಿ.ಸಿ ನಾಗೇಶ್, ರೋಹಿತ್ ಚಕ್ರತೀರ್ಥ ಇಬ್ಬರೂ ಹಾಗಲಕಾಯಿ ಬೇವಿನಕಾಯಿ ಇದ್ದಾಗೆ. 'ರೋಹಿತ್ ಚಕ್ರತೀರ್ಥ ಶಿಕ್ಷಣ ಇಲಾಖೆ ಕುಚೇಷ್ಟೇ ಮಾಡುವ ಇಲಾಖೆ ಅಲ್ಲ. ಶಿಕ್ಷಣವನ್ನು ಎಲ್ಲಾ ಜಾತಿ ಮಕ್ಕಳಿಗೂ ಮುಕ್ತಗೊಳಿಸಲಾಗಿದೆ. ನಿಮ್ಮಲ್ಲಿ ಕಟ್ಟುವ ನಿಪುಣರಿಲ್ಲ, ಬೀಳಿಸೋರು ಮಾತ್ರ ಇದ್ದಾರೆ. ಏಕಮುಖಿಯವಾಗಿರೋ ನಿಮ್ಮ ಸಂಸ್ಕೃತಿಯ ಚಿಂತನೆಯಲ್ಲಿ ಬೆಳೆದವರು ಶಿಕ್ಷಣದಲ್ಲಿ ವಿಚಾರದಲ್ಲಿ ಬಿಡಬೇಕು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಆಗ್ರಹಿಸಿದರು.

ಚಾತುರ್ವರ್ಣ ರೀತಿಯಲ್ಲಿ ಪಠ್ಯಪುಸ್ತಕ ಕೊಡುತ್ತಿದ್ದೀರಾ..?
ಸಭೆ ಉದ್ದೇಶಿಸಿ ಮಾತನಾಡಿದ ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಮಾತನಾಡಿ, "ಎಲ್ಲಿ ಶಿಕ್ಷಣ ವ್ಯವಸ್ಥೆ ಕುಸಿಯುತ್ತದೆಯೋ ಅಲ್ಲಿ ಸಾಮಾಜಿಕತೆ ಅನ್ನೋದು ದುರ್ಗತಿ ತಲುಪುತ್ತೆ. ಕಳೆದ 70 ವರ್ಷದಿಂದ ಪಡೆದುಕೊಂಡು ಬಂದಿರುವ ಸಾಮಾಜಿಕ ಶಿಕ್ಷಣಕ್ಕೆ ಬಿಜೆಪಿ ಹಾಗೂ ಆರ್ಎಸ್ಎಸ್ ನವರು ಕೊಡಲಿ ಹಾಕುತ್ತಿದ್ದಾರೆ. ಪಠ್ಯಪರಿಷ್ಕರಣೆ ಕೆಲಸ ಬಿಟ್ಟು ರಾಜ್ಯದಲ್ಲಿ ಎಷ್ಟು ಜನ ಮಕ್ಕಳು ಮೇಕೆ, ದನ ಕಾಯೋದಕ್ಕೆ ಹೋಗ್ತಾರೆ ಅನ್ನೋದರ ಬಗ್ಗೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲಿ. ನಿಸರ್ಗಕೇಂದ್ರಿತ ಅನುಗುಣವಾಗಿ ಸಾಕಷ್ಟು ಪಠ್ಯಪುಸ್ತಕ ಬಂದಿವೆ ಅಂತಹ ಪುಸ್ತಕಗಳನ್ನ ಇವರು ತಿರುಚಿ ಸಾಂಸ್ಕತಿಕ ನಲೆಗಟ್ಟಿನ ಆಧಾರದ ಮೇಲೆ ಮಕ್ಕಳ ಮೇಲೆ ಪಠ್ಯಪುಸ್ತಕ ಹೇರಲು ಮುಂದಾಗಿದ್ದಾಗಿರುವುದ ಆತಂಕಕಾರಿ ವಿಷಯ.
ಚರಿತ್ರೆಗೆ, ಸಮಾಜಶಾಸ್ತ್ರ, ಭಾಷಿಗೆ ಸೀಮಿತವಾದ ಪಠ್ಯ ಕೊಡುತ್ತಿಲ್ಲ. ಚಾತುರ್ ವರ್ಣ ರೀತಿಯಲ್ಲಿ ಪಠ್ಯ ಕೊಡುತ್ತಿದ್ದೀರಿ. ಯಜ್ಞರನ್ನ ಯಾವ ಆಧಾರದಲ್ಲಿ ವ್ಯಾಖ್ಯಾನಿಸುತ್ತೀರಾ..? ನಾನು ಅದನ್ನ ಮೌಡ್ಯ ಅಂತ ಪ್ರತಿಪಾದಿಸುತ್ತೇನೆ. ಈ ಸಮಿತಿಗೆ ಯಾವ ಯೋಗ್ಯತೆ ಇದೆ, ಅವರನ್ನ ಪ್ರಶ್ನೆ ಮಾಡೋದಲ್ಲ ಅವರನ್ನ ವಜಾಗೊಳಿಸಬೇಕು," ಎಂದರು.












Click it and Unblock the Notifications