ಹೈಕೋರ್ಟ್ ಚಾಟಿಗೆ ಎಚ್ಚೆತ್ತ ಸರಕಾರ: ಸಂತ್ರಸ್ತರಿಗೆ ಪರಿಹಾರ ಯೋಜನೆಗೆ 13 ಕೋಟಿ ಬಿಡುಗಡೆ
ಬೆಂಗಳೂರು, ಜನವರಿ 25: ಅತ್ಯಾಚಾರ, ಕೊಲೆ ಮತ್ತಿತರ ಅಪರಾಧ ಪ್ರಕರಣಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡಲು ಹಣ ಬಿಡುಗಡೆಗೆ ಹಿಂದೇಟು ಹಾಕಿದ್ದ ಸರ್ಕಾರ ಹೈಕೋರ್ಟ್ ಬೀಸಿದ ಚಾಟಿ ಎಟಿಗೆ ಎಚ್ಚೆತ್ತುಕೊಂಡಿದೆ.
ಹೈಕೋರ್ಟ್ ಜನವರಿ 3ರಂದು ಕೂಡಲೇ ಹಣ ಬಿಡುಗಡೆ ಮಾಡದಿದ್ದರೆ ಮಂದಿನ ಕಲಾಪದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಚಾರಣೆಗೆ ಹಾಜರಾಗಬೇಕೆಂದು ಖಡಕ್ ಆದೇಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಸರ್ಕಾರ 13 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಲೈಂಗಿಕ ದೌರ್ಜನ್ಯಕ್ಕೆ ಸಿಲುಕಿದ ಮಹಿಳೆಯರ ಸುರಕ್ಷತೆ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಲೈಂಗಿಕ ದೌರ್ಜನ್ಯದ ವಿರುದ್ಧ ಜನರ ಚಳುವಳಿ (ಪೀಪಲ್ಸ್ ಮೂವ್ಮೆಂಟ್ ಅಗೈನೆಸ್ಟ್ ಸೆಕ್ಷಿಯಲ್ ಅಸಾಲ್ಟ್) ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿದ್ಧ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುಳಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು.
ಆಗ ಸರಕಾರಿ ವಕೀಲರು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವದಂತೆ ಈಗಾಗಲೇ 13 ಕೋಟಿ ಬಿಡುಗಡೆ ಮಾಡಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲಿದೆ ಎಂದರು.
ಆಗ ಸೇವಾ ಪ್ರಾಧಿಕಾರದ ಪರ ವಕೀಲರು, 13 ಕೋಟಿ ಬಿಡುಗಡೆ ಮಾಡಲಾಗಿದೆ. ಮತ್ತೆ 7 ಕೋಟಿಗೆ ಮನವಿ ಸಲ್ಲಿಸಲಾಗಿದೆ. ಆ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದರು.
ಸರ್ಕಾರಿ ವಕೀಲರು, ಆ ಪ್ರಸ್ತಾವ ಇನ್ನೂ ಸರ್ಕಾರಕ್ಕೆ ಸ್ವೀಕೃತಿಯಾಗಿಲ್ಲ. ಪ್ರಸ್ತಾವ ಬಂದರೆ ಕೂಡಲೇ ಹಣ ಬಿಡುಗಡೆಗೆ ಸಿದ್ಧ ಎಂದರು.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಕಾನೂನು ಸೇವಾ ಪ್ರಾಧಿಕಾರ ತಕ್ಷಣ ಹೊಸ ಪ್ರಸ್ತಾವ ಸಲ್ಲಿಸಬೇಕು, ಅದರಂತೆ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ನಿರ್ದೇಶನ ನೀಡಿತು.
ಅಲ್ಲದೆ, ಮುಂದಿನ ವಿಚಾರಣೆ ವೇಳೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿ ಅಗತ್ಯವಿಲ್ಲವೆಂದು ನ್ಯಾಯಪೀಠ ಹೇಳಿತು.
ಆರ್ಥಿಕ ಸಂಕಷ್ಟದ ಕಾರಣ ನೀಡಿದ್ದ ಸರ್ಕಾರ
2020ರ ಮಾರ್ಚ್ 19ರಂದು ಹೈಕೋರ್ಟ್ ಅಪರಾಧ ಪ್ರಕರಣಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡಲು ಕೆಎಸ್ಎಲ್ಎಸ್ಎ ಗೆ ಹಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿತ್ತು. ಕೆಎಸ್ಎಲ್ಎಸ್ಎ 2020-21ನೇ ಸಾಲಿನಲ್ಲಿ ಸಂತ್ರಸ್ತರ ಪರಿಹಾರ ಯೋಜನೆ ಅಡಿ ಪರಿಹಾರ ನೀಡಲು ಸುಮಾರು 20 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಹೇಳಿತ್ತು.
ಇದೇ ವೇಳೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದ ಕಾರಣ ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪರಿಹಾರ ಮೊತ್ತದ ಕನಿಷ್ಟ ನಾಲ್ಕನೇ ಒಂದು ಭಾಗವನ್ನಾದರೂ 2020ರ ಮೇ 30ರೊಳಗೆ ಬಿಡುಗಡೆ ಮಾಡುವಂತೆ ನಿರ್ದೇಶಿಸಿತ್ತು. ಆದರೆ, ಸರ್ಕಾರ ಈವರೆಗೆ ಹಣ ಬಿಡುಗಡೆ ಮಾಡಿರಲಿಲ್ಲ. ಅದಕ್ಕೆ ಕೋರ್ಟ್ ಕಳೆದ ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡಿತ್ತು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸುರಕ್ಷತೆ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯೂ ಟಿಂಬರ್ ಯಾರ್ಡ್ ಲೇಔಟ್ನ ಪೀಪಲ್ಸ್ ಮೂವ್ಮೆಂಟ್ ಅಗೈನೆಸ್ಟ್ ಸೆಕ್ಷುಯಲ್ ಅಸಾಲ್ಟ್ ಸಂಸ್ಥೆ ಪಿಐಎಲ್ ದಾಖಲಿಸಿದೆ. ಅರ್ಜಿಯಲ್ಲಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯಗೆ ಅಗತ್ಯ ರಕ್ಷಣೆ ಹಾಗೂ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ, ಸಂತ್ರಸ್ತ ಮಹಿಳೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿ ಪರಿಹಾರ ಒದಗಿಸಬೇಕು. ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೋರಿದೆ.












Click it and Unblock the Notifications