ಅಂಬೇಡ್ಕರ್ ಸಮ್ಮೇಳನ ದಲಿತರ ಜಾಗೃತಿಗೋ, ಚುನಾವಣೆ ತಂತ್ರವೋ?
ಕರ್ನಾಟಕ ಸರ್ಕಾರದಿಂದ ಅಂಬೇಡ್ಕರ್ ಕುರಿತಂತೆ ಅಂತಾರಾಷ್ಟ್ರೀಯ ಸಮ್ಮೇಳನ. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಸಮ್ಮೇಳನ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಮಾರು 20 ಕೋಟಿ ರು. ವೆಚ್ಛದಲ್ಲಿ ಆಯೋಜಿಸಿರುವ 'ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ 2017' ಇಂದು (ಜುಲೈ 21) ಆರಂಭವಾಗಿದೆ.
ಜಗತ್ತಿನ ನಾನಾ ದೇಶಗಳಿಂದ ಸುಮಾರು 200 ವಿದ್ವಾಂಸರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲಿ ಅಮೆರಿಕದ ನಾಯಕ ಮಾರ್ಟಿನ್ ಕಿಂಗ್ ಲೂಥರ್ 3 ಕೂಡಾ ಒಬ್ಬರು.
ಆದರೆ, ಮೇಲ್ನೋಟಕ್ಕೆ ಇದು ಅಂಬೇಡ್ಕರ್ ಅವರ ಕುರಿತಾದ ವಿಚಾರ ಮಂಥನ ಎಂದೆನಿಸಿದರೂ, ಮತ್ತೊಂದು ರೀತಿಯಲ್ಲಿ ಇದು ಮುಂಬರುವ ಚುನಾವಣೆಯಲ್ಲಿ ದಲಿತರ ಓಲೈಕೆಗಾಗಿ ಮಾಡುತ್ತಿರುವ ತಂತ್ರಗಾರಿಕೆಯೆಂದೇ ಅನುಮಾನಿಸಲಾಗಿದೆ.
ಪ್ರಪಂಚವೇ ಮೆಚ್ಚಿದ ಜನ ನಾಯಕನ ಹೆಸರಿನಲ್ಲಿ ವಿಶ್ವ ಸಮ್ಮೇಳನ ಮಾಡುತ್ತಿರುವುದು ಸ್ವಾಗತಾರ್ಹ ಎನಿಸಿದರೂ, ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಇದನ್ನು ಆಯೋಜಿಸಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಅನುಮಾನಕ್ಕೆ, ಈ ಪ್ರಶ್ನೆಗಳಿಗೆ ಕಾರಣಗಳು ಇಲ್ಲದಿಲ್ಲ. ಹಾಗಾದರೆ, ಆ ಕಾರಣಗಳು ಯಾವುವು? ಸಮ್ಮೇಳನದ ಆಯೋಜನೆಯ ಅದ್ಯಾವ ರೂಪುರೇಷೆಗಳು ಇದರ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ.

ಎರಡು ಶಕ್ತಿಗಳ ಬಗ್ಗೆ ಸಿಎಂ ಮಾತು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನದ ಬಗ್ಗೆ ಮಾಡಿರುವ ಒಂದು ಟ್ವೀಟ್ ಅನುಮಾನ ಹುಟ್ಟಿಸುವಂತೆ ಮಾಡಿದೆ. ತಮ್ಮದೊಂದು ಟ್ವೀಟ್ ನಲ್ಲಿ ಮುಖ್ಯಮಂತ್ರಿಗಳು, ''ಸಮಾಜವನ್ನು ಒಡೆಯುವ ಶಕ್ತಿಗಳು ಭಾರತ ಎಂಬ ಪರಿಕಲ್ಪನೆಗೇ ಧಕ್ಕೆ ತಂದಿರುವ ಈ ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ಈ ಸಮ್ಮೇಳನ 'ಸಾಮಾಜಿಕ ನ್ಯಾಯದ ಅನ್ವೇಷಣೆ'ಗಾಗಿ (ಕ್ವೆಸ್ಟ್ ಆಫ್ ಈಕ್ವಿಟಿ ಎಂಬುದು ಈ ಸಮ್ಮೇಳನದ ಧ್ಯೇಯವಾಕ್ಯ) ಎಲ್ಲಾ ಪ್ರಗತಿಪರ ಶಕ್ತಿಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದಿದ್ದಾರೆ. ಈ ಟ್ವೀಟ್ ನಲ್ಲಿನ 'ಸಮಾಜ ಒಡೆಯುವ ಶಕ್ತಿಗಳು', 'ಪ್ರಗತಿ ಪರ ಶಕ್ತಿಗಳು' ಎಂಬ ಪದಗಳು ಕ್ರಮವಾಗಿ 'ಬಿಜೆಪಿ, ಆರೆಸ್ಸೆಸ್' ಹಾಗೂ 'ಕಾಂಗ್ರೆಸ್ ಅಥವಾ ಕೋಮು ವಿರೋಧಿ ಸಂಘಟನೆಗಳು' ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿವೆ.

ಹಿಂದುಳಿದ ಜನರಿಗೆ ಇಲ್ಲಿಲ್ಲ ಪ್ರವೇಶ
ಇನ್ನು, ಕಾಂಗ್ರೆಸ್ ಪಕ್ಷದ ಈ ಮಹಾ ಸಮ್ಮೇಳನದಲ್ಲಿ ಜನ ಸಾಮಾನ್ಯರಿಗಲ್ಲ ಎಂಬುದು ಈಗಾಗಲೇ ಸ್ಪಷ್ಟ. ಹೇಳಿ ಕೇಳಿ ಇದು ಅಂತಾರಾಷ್ಟ್ರೀಯ ಸಮ್ಮೇಳನ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವುದರಿಂದ ಇದರಲ್ಲಿ ದೇಶ, ವಿದೇಶದ ನೂರಾರು ಗಣ್ಯರು, ವಿದ್ವಾಂಸರು ಭಾಗವಹಿಸುತ್ತಿದ್ದಾರೆ. ಹಾಗಾಗಿ, ಇದು ಸಿದ್ದರಾಮಯ್ಯ ಅವರ ಪುಕ್ಕಟೆ ಭಾಗ್ಯಗಳನ್ನು ಟೀಕಿಸುತ್ತಿರುವ ಬುದ್ಧಿಜೀವಿಗಳಿಗೆ ಉತ್ತರ ಕೊಡುವ ಅಥವಾ ಅವರನ್ನು ಸಮಾಧಾನಪಡಿಸುವ ಪ್ರಯತ್ನವಾಗಿ ತೋರುತ್ತಿದೆ.

ಹಲವಾರು ಸೌಲಭ್ಯಗಳು ಪ್ರಕಟ
ಬುದ್ಧಿಜೀವಿಗಳಿಗಾಗಿಯೇ ಒಂದೆಡೆ ಸಮ್ಮೇಳನ ಆಯೋಜಿಸುತ್ತಿದ್ದರೆ, ಮತ್ತೊಂದೆಡೆ ಕೆಳ ವರ್ಗದವರ ಕಲ್ಯಾಣ ಯೋಜನೆಗಳನ್ನು ಸರ್ಕಾರ ಸತತವಾಗಿ ಜಾರಿಗೊಳಿಸುತ್ತಲೇ ಇದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯ ಪ್ರವಾಸ ಕೈಗೊಂಡು ದಲಿತರ ಮನೆಯಲ್ಲಿ ಊಟ- ತಿಂಡಿ ಮಾಡುತ್ತಿದ್ದ ಹೊತ್ತಿನಲ್ಲೇ ಇತ್ತ ರಾಜ್ಯ ಸರ್ಕಾರವು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ವಿದ್ಯಾರ್ಥಿ ವೇತನ ಮುಂತಾದ ಸೌಲಭ್ಯಗಳನ್ನು ಪ್ರಕಟಿಸಿದೆ. ಇದೆಲ್ಲವೂ ಎಲ್ಲಾ ವರ್ಗಗಳ ದಲಿತರನ್ನು ಓಲೈಸುವ ತಂತ್ರಗಾರಿಕೆಯಾಗಿಯೇ ತೋರುತ್ತಿದೆ.

ಹಲವಾರು ಮಾದರಿಯ ತಂತ್ರಗಾರಿಕೆ
ಎಲ್ಲಕ್ಕಿಂತ ಮಿಗಿಲಾಗಿ, ರಾಜ್ಯ ಸರ್ಕಾರ ಕೈಗೊಂಡಿದ್ದ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ವರದಿಯನ್ನು ಪ್ರಕಟಿಸಿಯೇ ಇಲ್ಲ. ಆ ಸಮೀಕ್ಷೆಯಲ್ಲೇ ಮುಂಬರುವ ಚುನಾವಣೆಯಲ್ಲಿ ದಲಿತರ ಮತಗಳೇ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತರುತ್ತವೆ ಎಂಬುದು ಗೊತ್ತಾಗಿದ್ದು. ಇದು ಗೊತ್ತಾದ ಕೂಡಲೇ ಪರಮೇಶ್ವರ್ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸಲಾಯಿತು. ಸುಮಾರು 27, 703 ಕೋಟಿ ರು. ಮೌಲ್ಯದ ದಲಿತ ಪರ ಯೋಜನೆಗಳನ್ನು ಪ್ರಕಟಿಸಲಾಯಿತು. ಬಿಜೆಪಿ, ಜೆಡಿಎಸ್ ಪರವಾಗಿರುವ ಕೆಲವು ದಲಿತ ಮತಗಳನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನಿಸಲಾಯಿತು. ಈಗ ಆಯೋಜಿಸಿರುವ ಸಮ್ಮೇಳನವೂ ಈ ತಂತ್ರಗಾರಿಕೆಯ ಸರಣಿಯ ಒಂದು ಭಾಗವಷ್ಟೆ ಎಂದು ಹೇಳಲಾಗುತ್ತಿದೆ.












Click it and Unblock the Notifications