ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ
ಬೆಂಗಳೂರು, ಆಗಸ್ಟ್ 02: ಅಧಿಕಾರ ವಹಿಸಿಕೊಂಡ 45 ದಿನಗಳಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನವರೇ ಆದ ಭಾಸ್ಕರ್ ರಾವ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಿಸಲಾಗಿದೆ. ಭಾಸ್ಕರ್ ರಾವ್ ಅವರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದರು.
ಅಲೋಕ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.
35 ವರ್ಷಗಳ ನಂತರ ಇದೀಗ ಬೆಂಗಳೂರಿನವರೇ ಆದ ಭಾಸ್ಕರ್ ರಾವ್ ಅವರನ್ನು ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಅಲೋಕ್ ಕುಮಾರ್ ಅವರು ಈ ಹಿಂದೆ ಭ್ರಷ್ಟಾಚಾರ ನಿಗ್ರಹದಳದ ಎಡಿಜಿಪಿ, ಸಿಸಿಬಿ ಕ್ರೈಂ ಬ್ರ್ಯಾಂಚ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ತರಬೇತಿ ವಿಭಾಗದ ಐಜಿಪಿಯಾಗಿದ್ದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರಿ ಸದ್ದು ಮಾಡಿದ ಒಂದಂಕಿ ಲಾಟರಿ ಪ್ರಕರಣದಲ್ಲಿ ಅಲೋಕ್ ಕುಮಾರ್ ಅವರ ಹೆಸರು ಕೇಳಿ ಬಂದಿದ್ದರಿಂದ ಅಮಾನತುಗೊಂಡಿದ್ದರು.
ಇವರೊಟ್ಟಿಗೆ ಹಲವು ಐಪಿಎಸ್ ಅಧಿಕಾರಗಳನ್ನು ಇಂದು ವರ್ಗಾವಣೆ ಮಾಡಲಾಗಿದ್ದು, ಬೆಂಗಳೂರು ಗುಪ್ತಚರ ವಿಭಾಗದ ಡಿಐಜಿಯಾಗಿದ್ದ ಸುಬ್ರಮಣೇಶ್ವರ ರಾವ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಇದುವರೆಗೆ ಸಂದೀಪ್ ಪಾಟೀಲ್ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು.