Water Crisis: ಸಂಸ್ಕರಿಸಿ ನೀರು ಮರುಬಳಕೆಗೆ ಸರ್ಕಾರದ ಕಟ್ಟುನಿಟ್ಟಿನ ಆದೇಶ
ಬೆಂಗಳೂರು, ಮಾರ್ಚ್ 23: ರಾಜಧಾನಿಯಲ್ಲಿ ಕುಡಿಯುವ ನೀರನ್ನು ಇತರ ಚಟುವಟಿಕೆಗಳಿಗೆ ಬಳಸುವುದಕ್ಕೆ ನಿರ್ಬಂಧವನ್ನು ವಿಧಿಸಿ ಆದೇಶವನ್ನು ಹೊರಡಿಸಲಾಗಿದೆ. ಇದರ ಬೆನ್ನಲ್ಲೇ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರು ಬಳಕೆ ಮಾಡುವ ಬಗ್ಗೆ ಹಲವು ಬಾರಿ ಆದೇಶಿಸಿದ್ದರು ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಪ್ರಸ್ತುತ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಅಂತರ್ಜಲ ಮಟ್ಟವು ಕುಸಿಯುತ್ತಿರುವ ಕಾರಣದಿಂದ ಬೆಂಗಳೂರು ನಗರದಲ್ಲಿ ಪ್ರಸ್ತುತ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಒಳಚರಂಡಿ ಸಂಸ್ಕರಣಾ ಘಟಕ (Sewage Treatment Plant)ಗಳಲ್ಲಿ ಸಂಸ್ಕರಿಸಿದ ನೀರನ್ನು ಮರುಬಳಕೆ ಮಾಡಲು ಅಗತ್ಯ ಕ್ರಮವನ್ನು ವಹಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಿರ್ದೇಶನ ನೀಡಿದೆ.

ಒಳಚರಂಡಿ ಸಂಸ್ಕರಣಾ ಘಟಕ (Sewage Treatment Plant)ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸುವ ಸಂಬಂಧ ಈ ಕೆಳಕಂಡ ಷರತ್ತುಗಳನ್ನು ಅಳವಡಿಸಿಕೊಂಡು ಖಾಸಗಿ ವಸತಿ ಸಮುಚ್ಚಯಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಮರುಬಳಕೆ ಮಾಡಲು ಅನುಮತಿಯನ್ನು ನೀಡಿದೆ.
1. ಸಂಸ್ಕರಿಸಿದ ತ್ಯಾಜ್ಯನೀರು ಕೇಂದ್ರ / ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಿಗೆ ಅನುಗುಣವಾಗಿ ಇರಬೇಕು.
2. ವಸತಿ ಸಮುಚ್ಚಯಗಳು ಕನಿಷ್ಠ 50% ರಷ್ಟು ಸಂಸ್ಕರಿಸಿದ ನೀರನ್ನು ತಮ್ಮಲ್ಲೆ ಮರುಬಳಕೆ ಮಾಡಿ ಇನ್ನುಳಿದ ನೀರನ್ನು ಮಾತ್ರ ವಾಣಿಜ್ಯ ಚಟುವಟಿಕೆಗಳ ಉಪಯೋಗಕ್ಕೆ ಬಳಸಬಹುದಾಗಿದೆ.

3. ಸಂಸ್ಕರಿತ ನೀರನ್ನು ನಿರ್ಮಾಣ, ಕೈಗಾರಿಕೆ, ತೋಟಗಾರಿಕೆ, ಅಗ್ನಿ ಶಮನ, ದೂಳು ತಗ್ಗಿಸುವಿಕೆ, ಗಣಿಗಾರಿಕೆ, ಉಪಯೋಗಕ್ಕಾಗಿ ಅಥವಾ ಸಕ್ಷಮ ಪ್ರಾಧಿಕಾರ / BWSSB ರವರ ಪೂರ್ವಾನುಮತಿಯೊಂದಿಗೆ ಅಂರ್ತಜಲದ ಮಟ್ಟವನ್ನು ವೃದ್ಧಿಗೊಳಿಸಲು ಅನುಮತಿಸಬಹುದಾಗಿರುತ್ತದೆ.
4. ಸಂಸ್ಕರಿಸಿದ ತ್ಯಾಜ್ಯ ನೀರಿನ ಬಳಕೆಯನ್ನು ಕುಡಿಯುವ ಉದ್ದೇಶಗಳಿಗಾಗಿ, ಔಷಧೀಯ ತಯಾರಿಕೆಯಲ್ಲಿ ಮತ್ತು ಆಹಾರ ಸಂಸ್ಕರಣೆಯಲ್ಲಿ ಕಟ್ಟುನಿಟ್ಟಾಗಿ ಬಳಸದಂತೆ ನಿಷೇಧಿಸಲಾಗಿದೆ.
5. ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಖರೀದಿದಾರರು ಮತ್ತು ಮಾರಾಟಗಾರರು ಇಬ್ಬರೂ ಜಂಟಿಯಾಗಿ ಜವಾಬ್ದಾರರಾಗಿರುತ್ತಾರೆ ಹಾಗೂ ಬಳಕೆದಾರರ ಜೊತೆ ಒಪ್ಪಂದ (MOU) ಮಾಡಿಕೊಳ್ಳಬೇಕಾಗಿರುತ್ತದೆ.
6. ಸಂಸ್ಕರಿಸಿದ ನೀರನ್ನು ಬಾಹ್ಯವಾಗಿ ವಿತರಿಸುವ ಅಪಾರ್ಟ್ಮೆಂಟ್ಗಳು CCTV ಕಣ್ಣಾವಲು ಸೇರಿದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಬೇಕು, ಗುಣಮಟ್ಟ ಮತ್ತು ಪ್ರಮಾಣದ ಡೇಟಾವನ್ನು ಪರೀಕ್ಷಿಸಲು ಸಮಗ್ರ ಲಾಗ್ಬುಕ್ನ ನಿರ್ವಹಣೆ ಮತ್ತು ಸಂಸ್ಕರಿಸಿದ ಗರಿಷ್ಠ 50% ರಷ್ಟು ನೀರನ್ನು ಮಾತ್ರ ಹೊರಗೆ ಕಳುಹಿಸಲು ಅನುಮತಿಯನ್ನು ನೀಡಲು ಕ್ರಮವಹಿಸುವುದು.
7. ಮರುಬಳಕೆ ನೀರು ಸಾಗಾಣಿಕೆಗೆ ಬಳಸುವ ವಾಹನಗಳ / ಟ್ಯಾಂಕರ್ಗಳ ಮೇಲೆ "ಮರು ಬಳಕೆ ನೀರು ಸಾಗಾಣಿಕೆ ವಾಹನ" ಎಂದು ದಪ್ಪ ಅಕ್ಷರಗಳಲ್ಲಿ ಬರೆಸತಕ್ಕದ್ದು.
ಪರಿಸರ (ಸಂರಕ್ಷಣೆ) ಕಾಯ್ದೆ, 1986 ನಿಯಮ 5 ರ ಅಡಿಯಲ್ಲಿ ಕುಡಿಯುವ ನೀರನ್ನು ಇತರ ಉದ್ದೇಶಿತ ಕಾರ್ಯಗಳಾದ ಉದ್ಯಾನಗಳು, ರೆಸಾರ್ಟ್ಗಳು ಮತ್ತು ಗಾಲ್ಫ್ ಮೈದಾನಗಳು ಒಳಗೊಂಡಂತೆ ತೋಟಗಾರಿಕೆ ಕೆಲಸಗಳಿಗೆ, ತೊಳೆಯುವುದು, ವಾಹನಗಳ ಸರ್ವಿಸಿಂಗ್ ಮತ್ತು ಸ್ವಚ್ಛಗೊಳಿಸುವುದನ್ನು ನಿಷೇಧಿಸಲಾಗಿದೆ.
ಬೆಂಗಳೂರು ನಗರದಲ್ಲಿನ ಖಾಸಗಿ ಡೆವೆಲಪರ್, ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಎಲ್ಲಾ ನಾಗರೀಕ ಕಾಮಗಾರಿ ಚಟುವಟಿಕೆಗಳಾದ ಬಹುಮಹಡಿ ಕಟ್ಟಡ, ವಾಣಿಜ್ಯ ಸಂಕೀರ್ಣ, ವಸತಿ ಸಂಕೀರ್ಣ, ಬೆಂಗಳೂರು ನಗರದಲ್ಲಿನ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಕೆಲಸಗಳಿಗೆ ಮೂರನೇ ಹಂತಕ್ಕೆ ಶುದ್ಧೀಕರಿಸಿದ ನೀರನ್ನು ಮಾತ್ರ ಉಪಯೋಗಿಸಬೇಕು.












Click it and Unblock the Notifications