ಅಶೋಕ್ ಕಟ್ಟಿಹಾಕಲು ಡಿಕೆಶಿ ಮೆಗಾ ಪ್ಲ್ಯಾನ್: ಪದ್ಮನಾಭನಗರದಲ್ಲಿ ಡಿಕೆ ಸುರೇಶ್ ಕಣಕ್ಕೆ?
ಬೆಂಗಳೂರು, ಏಪ್ರಿಲ್ 18: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿ ಉಳಿದಿವೆ. ಈ ಸಮಯದಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕನಪುರದಲ್ಲಿ ಬಿಜೆಪಿ ಕಣಕ್ಕಿಳಿಸಿದೆ. ಅವರನ್ನು ಬೆಂಗಳೂರಿನ ಪದ್ಮನಾಭನಗರದಿಂದಲೂ ಕಣಕ್ಕಿಳಿಸಲಾಗಿದೆ. ಅಶೋಕ್ರನ್ನು ಕಟ್ಟಿಹಾಕಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.
ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಂತ್ರವನ್ನು ಕಾಂಗ್ರೆಸ್ ಮಾಡಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ನಾಯಕನನ್ನು ಕಣಕ್ಕಿಳಿಸಲು ಶಿವಕುಮಾರ್ ಚಿಂತನೆ ನಡೆಸಿದ್ದಾರೆ. ಪದ್ಮನಾಭನಗರದಲ್ಲಿ ಆರ್ ಅಶೋಕ್ರನ್ನು ಕಟ್ಟಿಹಾಕಿದರೆ, ಕನಕಪುರದಲ್ಲಿ ಅವರಿಗೆ ಪ್ರಚಾರ ನಡೆಸಲು ಸಮಯ ಸಿಗುವುದಿಲ್ಲ ಎಂದು ಆಲೋಚನೆಯನ್ನು ಡಿಕೆ ಶಿವಕುಮಾರ್ ಮಾಡಿದ್ದಾರೆ.

ಕೇಳಿಬಂತು ಡಿಕೆ ಸೂರಿ ಹೆಸರು
ಪದ್ಮನಾಭನಗರದಲ್ಲಿ ಆರ್ ಅಶೋಕ್ ಅವರನ್ನು ಕಟ್ಟಿಹಾಕಲು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ವಿಚಾರವಾಗಿ ಟಿವಿ ಮಾಧ್ಯಮಗಳ ಜೊತೆ ಮಾತನಾಡಿರುವ ಡಿಕೆ ಸುರೇಶ್ ಅವರು ಪದ್ಮನಾಭನಗರದಿಂದ ಕಣಕ್ಕಿಳಿಯುವ ವಿಚಾರವನ್ನು ಅಲ್ಲಗಳೆದಿಲ್ಲ.
ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿಯಾಗಿ ರಘುನಾಥ್ ನಾಯ್ಡು ಅವರನ್ನು ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.
ಆದರೆ, ಅಶೋಕ್ ವಿರುದ್ಧ ಕಣಕ್ಕಿಳಿಸಲು ಸ್ವತಃ ನಾಯ್ಡು ಸುರೇಶ್ ಅವರನ್ನು ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.
'ನಾನು ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲು ಬಯಸಿದ್ದೆ, ಆದರೆ ನಾನು ಅದನ್ನು ತಡಮಾಡಿದೆ. ಅಶೋಕ್ ವಿರುದ್ಧ ಸ್ಪರ್ಧಿಸುವಂತೆ ಡಿ.ಕೆ.ಸುರೇಶ್ ಅವರಿಗೆ ಮನವಿ ಮಾಡಿದ್ದೇನೆ. ಶಿವಕುಮಾರ್ ಅವರೊಂದಿಗೂ ಮಾತನಾಡಿದ್ದೇನೆ. ಆದರೆ ಅವರು ಸ್ಪರ್ಧಿಸುವಂತೆ ಕೇಳಿದ್ದಾರೆ. ನಿನ್ನೆ ರಾತ್ರಿಯೂ ನಾನು ಸುರೇಶ್ ಅವರೊಂದಿಗೆ ಮಾತನಾಡಿದ್ದೇನೆ, ಅವರು ಚರ್ಚೆಯ ನಂತರ ನನಗೆ ತಿಳಿಸುವುದಾಗಿ ಹೇಳಿದರು' ಎಂದು ನಾಯ್ಡು ಹೇಳಿದರು.
ಕಾಂಗ್ರೆಸ್ನಿಂದ ಇಬ್ಬರು ಪ್ರಮುಖ ನಾಯಕರನ್ನು ನಿರ್ಬಂಧಿಸಲು ಬಿಜೆಪಿ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ ಸೋಮಣ್ಣ ಮತ್ತು ಕನಕಪುರದಲ್ಲಿ ಶಿವಕುಮಾರ್ ವಿರುದ್ಧ ಅಶೋಕ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.












Click it and Unblock the Notifications