ಸ್ಲಂನಲ್ಲಿದ್ದು ದುರ್ವಾಸನೆ ಆಗೊಲ್ಲ ಎಂದರೆ ಹೇಗೆ?: ರಮೇಶ್ ಕುಮಾರ್ ಮಾರ್ಮಿಕ ನುಡಿ
ಸಬೆಂಗಳೂರು, ಜುಲೈ 9: ಇಡೀ ರಾಜ್ಯ ರಾಜಕಾರಣದ ಗಮನ ಸ್ಪೀಕರ್ ರಮೇಶ್ ಕುಮಾರ್ ಅವರತ್ತ ನೆಟ್ಟಿದೆ. ತಮ್ಮ ಕಚೇರಿಯಲ್ಲಿ ಅತೃಪ್ತ ಶಾಸಕರು ಸಲ್ಲಿಸಿರುವ ರಾಜೀನಾಮೆ ಪತ್ರಗಳನ್ನು ರಮೇಶ್ ಕುಮಾರ್ ಇಂದು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಅವರ ರಾಜೀನಾಮೆ ಪತ್ರಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ರಮೇಶ್ ಕುಮಾರ್ ಅವರು ತಮಗೆ ಇರುವ ಕಾನೂನು ಬದ್ಧ ಅಧಿಕಾರವನ್ನು ಬಳಸಿ ಈ ಶಾಸಕರ ರಾಜೀನಾಮೆಯನ್ನು ತಿರಸ್ಕರಿಸಲಿದ್ದಾರೆಯೇ ಅಥವಾ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಅದೇಶಿಸಲಿದ್ದಾರೆಯೇ ಅಥವಾ ರಾಜೀನಾಮೆಗಳನ್ನು ಅಂಗೀಕರಿಸಿ ಅವರ ಹಾದಿ ಸುಗಮಗೊಳಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ರಾಜೀನಾಮೆ ನೀಡಿರುವ ಶಾಸಕರನ್ನು ವಿಚಾರಣೆಗೆ ಕರೆಯಿಸುವ ಅಧಿಕಾರ ಅವರಿಗಿದೆ. ಎಲ್ಲ ಶಾಸಕರನ್ನೂ ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸುತ್ತಾರೆಯೇ ಅಥವಾ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಾರೆಯೇ ಎಂಬುದನ್ನು ನೋಡಬೇಕಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಸಿದ್ದರಾಮಯ್ಯ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ನೀಡಿದ್ದರು. ಅದರ ಬಗ್ಗೆಯೂ ಸ್ಪೀಕರ್ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು
'ನಾನು ಇಂದು ಸ್ಪೀಕರ್ ಕಚೇರಿಯಲ್ಲಿಯೇ ಇರುತ್ತೇನೆ. ಇಂದು ನನ್ನ ಭೇಟಿಗೆ ಯಾರೂ ಸಮಯ ಕೇಳಿಲ್ಲ. ಯಾರು ಬೇಕಾದರೂ ಬಂದು ರಾಜೀನಾಮೆ ನೀಡಲಿ. ಕೊಟ್ಟಿರುವ ರಾಜೀನಾಮೆ ಪತ್ರಗಳನ್ನು ಪರಿಶೀಲಿಸುತ್ತೇನೆ. ಕ್ಷೇತ್ರದ ಜನರು ನೀಡಿರುವ ದೂರುಗಳನ್ನು ಸಹ ಪರಿಶೀಲಿಸಬೇಕು. ಜನರ ಹಿತಾಸಕ್ತಿಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ರಮೇಶ್ ಕುಮಾರ್ ತಿಳಿಸಿದರು.
'ನಾನು ಯಾವುದೇ ಒತ್ತಡದಲ್ಲಿ ಇಲ್ಲ. ಯೋಚಿಸಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುತ್ತೇನೆ ಮತ್ತು ಪಕ್ಷಾತೀತ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನು ಕಾಂಗ್ರೆಸ್ನಲ್ಲಿ ಇಲ್ಲವಲ್ಲ' ಎಂದು ಹೇಳಿದರು.
ಸಾರ್ವಜನಿಕರ ದೂರು ಆಲಿಸುತ್ತೇನೆ
ಇಂದು ರಾಜೀನಾಮೆ ಕೊಡುವವರು ಇದ್ದರೂ ಕೊಡಲಿ. ಮೊದಲು ಸಾರ್ವಜನಿಕರ ದೂರು ಆಲಿಸುತ್ತೇನೆ. ಮತದಾರರ ಅಭಿಪ್ರಾಯವನ್ನೂ ಸಂಗ್ರಹಿಸುತ್ತೇನೆ. ಮತದಾರರ ಅಭಿಪ್ರಾಯ ಆಲಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಚೇರಿಗೆ ದೂರು ನೀಡಿದ್ದರೆ ಪರಿಶೀಲನೆ ಮಾಡುತ್ತೇನೆ. ಯಾರು ಬೇಕಾದರೂ ಬಂದು ಭೇಟಿ ಆಗಬಹುದು ಎಂದರು.
ಯಾವ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯೊಲ್ಲ: ರಾಮಲಿಂಗಾ ರೆಡ್ಡಿ
ಸ್ಲಂನಲ್ಲಿದ್ದು ದುರ್ವಾಸನೆ ಬೇಡ ಎಂದರೆ...?
ಇಂದಿನ ರಾಜಕೀಯದ ಬೆಳವಣಿಗೆಗಳ ಕುರಿತು ಬೇಸರವಾಗುತ್ತಿಲ್ಲವೇ ಎಂಬ ಪ್ರಶ್ನೆಗೆ, ಕೊಳಚೆ ಪ್ರದೇಶದಲ್ಲಿ ವಾಸ ಮಾಡುವವರಿಗೆ ದುರ್ವಾಸನೆ ಎಂದರೆ ಹೇಗೆ? ಸ್ಲಂನಲ್ಲಿದ್ದು ಸುಗಂಧದ ಪರಿಮಳ ಬರಬೇಕು ಎಂದರೆ ಹೇಗೆ? ಎಂದು ರಾಜಕೀಯವನ್ನು ಸ್ಲಂನಲ್ಲಿ ವಾಸ ಮಾಡುತ್ತಿರುವ ಸ್ಥಿತಿಗೆ ಹೋಲಿಸಿದರು.
ಶಾಸಕರ ರಾಜೀನಾಮೆ ಅಂಗೀಕಾರ ಆಗುತ್ತದೆಯೋ? ಇಲ್ಲವೋ? ಸ್ಪೀಕರ್ ನಡೆ ಏನು?
ಸಂವಿಧಾನದ ಅಡಿಯಲ್ಲಿ ಕ್ರಮ
ಕೆಲಸದ ಅವಧಿಯಲ್ಲಿ ಕಚೇರಿ ತೆರೆದಿರುತ್ತದೆ. ಅಂದು ನಾನು ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಕಚೇರಿಯ ಸಿಬ್ಬಂದಿಗೆ ಆ ರಾಜೀನಾಮೆ ಪತ್ರಗಳನ್ನು ಪಡೆದು ಸ್ವೀಕೃತಿ ಪತ್ರ ನೀಡುವಂತೆ ಹೇಳಿದ್ದೆ. ನನ್ನ ಆಪ್ತ ಕಾರ್ಯದರ್ಶಿ ರಾಜೀನಾಮೆ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಅವರ ಕೆಲಸ ಮಾಡಿದ್ದಾರೆ. ಮುಂದಿನದು ನನ್ನ ಕೆಲಸ. ಸಂವಿಧಾನದ ಅಡಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ. ಇಂದೂ ಕೂಡ ಯಾರು ಬೇಕಾದರೂ ರಾಜೀನಾಮೆ ಕೊಡಬಹುದು ಎಂದು ಹೇಳಿದರು.
ಮದುವೆಯ ಮೂಲ ಉದ್ದೇಶವೇ ಇಲ್ಲವಲ್ಲ
ರಾಜಕೀಯ ಎಂದರೆ ಮದುವೆಯಂತೆ. ಈಗ ಸಂಪ್ರದಾಯ, ಆಚರಣೆಗಳು ಮುಖ್ಯವಲ್ಲ. ಅದು ವೈಭವದ್ದು. ಮದುವೆ ಆಯ್ತೋ ಇಲ್ಲವೋ, ತಾಳಿ ಕಟ್ಟಿದ್ದಾರೆಯೋ ಇಲ್ಲವೋ ಎಂದು ಜನರು ನೋಡುವುದಿಲ್ಲ. ಅಲಂಕಾರ ಹೇಗಿದೆ, ಬ್ಯಾಂಡ್ ಸೆಟ್, ವಿಡಿಯೋದವರು ಬಂದಿದ್ದಾರೆಯೇ, ಊಟಕ್ಕೇನು ಮಾಡಿದ್ದಾರೆ ಎನ್ನುವುದನ್ನಷ್ಟೇ ನೋಡುತ್ತಾರೆ. ಮದುವೆಯ ಸಂಪ್ರದಾಯ ಉದ್ದೇಶ ಹೊರಟು ಹೋಗಿದೆ ಎಂದು ಮಾರ್ಮಿಕವಾಗಿ ಹೇಳಿದರು.