ಕೇರಳದಲ್ಲಿ ಬಿಎಸ್ವೈ ವಿರುದ್ಧ ಪ್ರತಿಭಟನೆ; ಬಿಎಸ್ವೈ ಏನಂದ್ರು?
ಬೆಂಗಳೂರು, ಡಿಸೆಂಬರ್ 24: ಕೇರಳದ ದೇಗುಲಕ್ಕೆ ಇಂದು ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಅಲ್ಲಿನ ಎಡಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಕ್ಕೆ, ಸ್ವತಃ ಬಿಎಸ್ವೈ ತೀವ್ರ ಕಿಡಿ ಕಾರಿದ್ದಾರೆ. ಅಲ್ಲದೇ ಕರ್ನಾಟಕದ ಹಲವು ರಾಜಕೀಯ ಮುಖಂಡರು ಕರ್ನಾಟಕದ ಮುಖ್ಯಮಂತ್ರಿಗೆ ಕೇರಳದ ಎಡಪಕ್ಷಗಳ ಕಾರ್ಯಕರ್ತರು ಮಾಡಿದ ಅವಮಾನವನ್ನು ಖಂಡಿಸಿದ್ದಾರೆ.
ಕೇರಳದಲ್ಲಿ ಸಿಎಂ ಯಡಿಯೂರಪ್ಪ ಕಾರಿಗೆ ಮುತ್ತಿಗೆ
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೇರಳದ ದೇಗುಲಕ್ಕೆ ತೆರಳಿದಾಗ ನಡೆದ ಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸಂಚು. ಮೊದಲಿನಿಂದಲೂ ನಾನು ದೈವತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. ಇದು ನನ್ನ ವೈಯುಕ್ತಿಕ ಭೇಟಿ. ಕೆಲವರ ಕುಕೃತ್ಯಕ್ಕೆ ಎಲ್ಲ ಕೇರಳಿಗರನ್ನೂ ದೂಷಿಸುವುದು ತಪ್ಪು. ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಬಿಎಎಸ್ವೈ ಅವರು ಕೇರಳದ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಕೈಗೊಂಡಿದ್ದರು. ಮಂಗಳೂರು ಗೋಲಿಬಾರ್ ಘಟನೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ನಡೆ ಖಂಡಿಸಿರುವ ಅಲ್ಲಿನ ಎಡಪಕ್ಷಗಳ ಕಾರ್ಯಕರ್ತರು ಯಡಿಯೂರಪ್ಪ ತೆರಳುತ್ತಿದ್ದ ಕಾರ್ ಗೆ ಅಡ್ಡಗಟ್ಟಿ ಕಪ್ಪು ಭಾವುಟ ಪ್ರದರ್ಶಿಸಿ, ಗಲಾಟೆ ಮಾಡಿದ್ದರು.