150 ಅಭ್ಯರ್ಥಿಗಳ ಪಟ್ಟಿ ದೇವೇಗೌಡರ ಕೈಲಿದೆː ಎಚ್ಡಿಕೆ
ಬೆಂಗಳೂರು, ಜುಲೈ 03: ಮುಂಬರುವ ವಿಧಾನಸಭೆ ಚುನಾವಣೆಗಾಗಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧವಾಗಿದೆ. ಶ್ರಾವಣ ಮಾಸದ ಶುಭ ದಿನದಂದು ಪಟ್ಟಿ ಬಿಡುಗಡೆ ಮಾಡುವುದಾಗಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ (ಜುಲೈ 03)ದಂದು ಘೋಷಿಸಿದರು.
ನಗರದ ಜೆ.ಪಿ.ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಬೂತ್ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಬಳಿ ಪಟ್ಟಿ ಇದೆ. ಇದೀಗ ಆಷಾಡ ಮಾಸ ಇರುವುದರಿಂದ ಶ್ರಾವಣ ಮಾಸದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಮೊದಲು 150 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪಕ್ಷ ಸಂಘಟನೆ ಸೇರಿದಂತೆ ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಮುಂಬರುವ ಚುನಾವಣೆಗೆ ಬೂತ್ಮಟ್ಟದಲ್ಲಿ ಕಾರ್ಯಕರ್ತರು ಕೆಲಸ ನಿರ್ವಹಿಸಬೇಕಾದ ರೀತಿ, ಸಜ್ಜುಗೊಳ್ಳಲು ನಡೆಸಬೇಕಾದ ತಯಾರಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಮುಂಬರುವ ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ ಎಂದರು.
ಕಾಂಗ್ರೆಸ್ ತೊರೆದಿರುವ ಎ.ಎಚ್ ವಿಶ್ವನಾಥ್ ಅವರು ಜೆಡಿಎಸ್ ಸೇರ್ಪಡೆ ಬಳಿಕ ಕೆ. ಆರ್ ನಗರ, ಮೈಸೂರು ಭಾಗದ ಇನ್ನಷ್ಟು ನಾಯಕರು ಪಕ್ಷದತ್ತ ಮುಖ ಮಾಡಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.