ಬೆಂಗಳೂರಲ್ಲಿ ಇನ್ನೆರಡು ಕ್ಷೇತ್ರ ಬಿಜೆಪಿ 'ಕೈ' ವಶವಾಗಬೇಕಿತ್ತು!
ಬೆಂಗಳೂರು, ಮೇ 17: ಬೆಂಗಳೂರಿನಲ್ಲಿ ಮತದಾರರ ಸಂಖ್ಯೆ ಹೆಚ್ಚಿಸಲು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಶೇಕಡಾವಾರು ಮತದಾನ 50% ದಾಟಲಿಲ್ಲ. ಇದು ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.
ಯಲಹಂಕ, ರಾಜಾಜಿನಗರ, ಕೆಆರ್ ಪುರಂ, ಬಸವನಗುಡಿ, ಮಹಾಲಕ್ಷ್ಮಿ ಬಡಾವಣೆ, ಹೆಬ್ಬಾಳ, ಗಾಂಧಿನಗರ, ಚಿಕ್ಕಪೇಟೆ, ಪದ್ಮನಾಭನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಬಹುತೇಕ ನಿರೀಕ್ಷಿತ ಫಲಿತಾಂಶ ಬಂದಿದೆ.
2013ರ ಫಲಿತಾಂಶದಂತೆ ಬೆಂಗಳೂರು ಜಿಲ್ಲೆಯ 28 ಕ್ಷೇತ್ರಗಳ ಕಾಂಗ್ರೆಸ್ 13 ಬಿಜೆಪಿ 12 ಹಾಗೂ ಜೆಡಿಎಸ್ 3 ರಲ್ಲಿ ಗಳಿಸಿತ್ತು. 2018ರಲ್ಲಿ ಬೆಂಗಳೂರಿನಲ್ಲಿ ಎರಡು ಪಕ್ಷಗಳು ಸಮಬಲ ಸಾಧಿಸಿವೆ. ಜತೆಗೆ ಜೆಡಿಎಸ್ ನ ಬಂಡಾಯ ಶಾಸಕರು ಆಯ್ಕೆಯಾಗಿದ್ದಾರೆ. ಜೆಡಿಎಸ್ 2 ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರೆ, ಕಾಂಗ್ರೆಸ್ಸಿಗೆ ಒಂದು ಸ್ಥಾನ ಖೋತಾ ಆಗಿದೆ.
ಇನ್ನೆರಡು ಕ್ಷೇತ್ರದ ಚುನಾವಣೆ ಬಾಕಿಯಿದೆ
ಜಯನಗರದ ಹಾಲಿ ಶಾಸಕ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರದ ಚುನಾವಣೆ ಮುಂದೂಡಲ್ಪಟ್ಟಿದ್ದು, ಜೂನ್ 11ರಂದು ಮತದಾನ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಹೊರ ಬರಲಿದೆ. ಇನ್ನು ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ಅಕ್ರಮ ಕಂಡು ಬಂದಿದ್ದರಿಂದ ಚುನಾವಣೆ ಮುಂದೂಡಲ್ಪಟ್ಟಿದ್ದು, ಮೇ 28ರಂದು ಮತದಾನ ನಡೆಯಲಿದ್ದು, ಮೇ 31ರಂದು ಫಲಿತಾಂಶ ಹೊರಬೀಳಲಿದೆ.

ಬಿಜೆಪಿಗೆ ಗೆಲುವು ಸುಲಭವಲ್ಲ
ಜಯನಗರ, ರಾಜರಾಜೇಶ್ವರಿ ನಗರ ಈ ಎರಡು ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಮುಂದಾಗಿದ್ದು, ಸೂಕ್ತ ಅಭ್ಯರ್ಥಿ ಹುಡುಕಾಟ ಮುಂದುವರೆಸಿದೆ. ಆರ್ ಆರ್ ನಗರದಲ್ಲಿ ಹಾಲಿ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಬಿಜೆಪಿಯ ಮುನಿರಾಜುಗೌಡ, ಜೆಡಿಎಸ್ ನಿಂದ ಜಿಎಚ್ ರಾಮಚಂದ್ರ ಅವರು ಕಣದಲ್ಲಿದ್ದಾರೆ. ಸದ್ಯಕ್ಕೆ ಚುನಾವಣ ಅಕ್ರಮ ಆರೋಪ ಹೊತ್ತು ಪ್ರಕರಣದಲ್ಲಿ ಜಾಮೀನು ಪಡೆದಿರುವ ಮುನಿರತ್ನ ನಾಯ್ಡು ಅವರ ಮೇಲೆ ಏನೇ ಆಪಾದನೆ ಇದ್ದರೂ ಕ್ಷೇತ್ರದ ಜನತೆ ಅವರ ಪರವಾಗಿ ಇದ್ದಾರೆ ಎಂಬ ಸುದ್ದಿಯಿದೆ. ಹೀಗಾಗಿ, ಬಿಜೆಪಿ ಹೆಚ್ಚಿನ ಶ್ರಮ ವಹಿಸುತ್ತಿದೆ.

ಕುತೂಹಲ ಮೂಡಿಸಿರುವ ಕ್ಷೇತ್ರ
ಜಯನಗರದಲ್ಲಿ ಅನುಕಂಪದ ಆಧಾರದ ಮೇಲೆ ಜಯ ಗಳಿಸಲು ಬಿಜೆಪಿ ಸಿದ್ಧವಾಗಿದೆ. ಆದರೆ, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರು ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಪ್ರಚಾರದ ವೇಳೆ ಉತ್ತಮ ಬಾಂಧವ್ಯ ಸಾಧಿಸಿದ್ದು, ಶಾಸಕಿಯಾಗುವ ಹುಮ್ಮಸ್ಸಿನಲ್ಲಿದ್ದಾರೆ. ಭ್ರಷ್ಟಾಚಾರ ವಿರೋಧಿ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಅವರು ಸಾಕಷ್ಟು ಸದ್ದು ಮಾಡಿದ್ದಾರೆ. ಹೀಗಾಗಿ, ಬಿಜೆಪಿ ಆಯ್ಕೆ ಮಾಡುವ ಅಭ್ಯರ್ಥಿ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪೈಪೋಟಿ ನೀಡಿತ್ತು
ಸದ್ಯ ಮುಕ್ತಾಯವಾಗಿರುವ ಚುನಾವಣೆಯಲ್ಲಿ ಬಿಜೆಪಿಗೆ ವಿಜಯನಗರ ಹಾಗೂ ಬ್ಯಾಟರಾಯನಪುರ ಗೆಲ್ಲುವ ಎಲ್ಲಾ ಸಾಧ್ಯತೆಗಳಿತ್ತು. ಗೋವಿಂದರಾಜನಗರದಲ್ಲಿ ಬಿಜೆಪಿಯ ವಿ ಸೋಮಣ್ಣ ಅವರು ಪ್ರಿಯಕೃಷ್ಣ ವಿರುದ್ಧ 11375 ಅಂತರದಿಂದ ಗೆಲುವು ಸಾಧಿಸಿದ್ದು, ಪಕ್ಕದಲ್ಲೇ ಇರುವ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ರವೀಂದ್ರ ಅವರು ಎಂ ಕೃಷ್ಣಪ್ಪ ವಿರುದ್ಧ 2775 ಅಂತರದಿಂದ ಸೋಲು ಕಂಡಿದ್ದಾರೆ.

ಕೃಷ್ಣಬೈರೇಗೌಡ ಅವರು ಉತ್ತಮ ಸಾಧನೆ
ಇದೇ ರೀತಿ ಬ್ಯಾಟರಾಯನಪುರದಲ್ಲಿ ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿಯ ಎ. ರವಿ ಅವರು ಉತ್ತಮ ಪೈಪೋಟಿ ನೀಡಿ ಕೊನೆಗೆ 5671 ಅಂತರದಿಂದ ಸೋಲು ಕಂಡಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ 22 ಸಾವಿರಕ್ಕೂ ಅಧಿಕ ಮತಗಳನ್ನು ಗಳಿಸಿ, ಮತ ವಿಭಜನೆ ಮಾಡಿದ್ದಾರೆ. ಸಚಿವರಾಗಿ ಕೃಷ್ಣಬೈರೇಗೌಡ ಅವರು ಉತ್ತಮ ಸಾಧನೆ ಮಾಡಿದ್ದರೂ, ಆತಂಕ ಕ್ಷಣಗಳನ್ನು ಎದುರಿಸಿ, ಜಯ ಸಾಧಿಸಿದ್ದಾರೆ.

ಆನೇಕಲ್ ನಲ್ಲಿ ಅವಕಾಶ ತಪ್ಪಿತು
ಈ ಎರಡು ಕ್ಷೇತ್ರ ಬಿಟ್ಟರೆ, ಆನೇಕಲ್ ನಲ್ಲಿ ಮತ್ತೊಮ್ಮೆ ಕಮಲ ಅರಳುವ ನಿರೀಕ್ಷೆಯಿತ್ತು. ಆದರೆ, ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಬಿ ಶಿವಣ್ಣ ಅವರಿಗೆ ಎಲ್ಲಾ ಸಮುದಾಯದವರ ಬೆಂಬಲ ದೊರೆತು, 8627 ಅಂತರದಿಂದ ಗೆಲುವು ಸಿಕ್ಕಿತು. ಮಿಕ್ಕಂತೆ ಯಾವ ಕ್ಷೇತ್ರದಲ್ಲೂ ಬಿಜೆಪಿ ಕಡಿಮೆ ಅಂತರದ ಸೋಲು ಕಂಡಿಲ್ಲ. ಜೆಡಿಎಸ್ ಉತ್ತಮ ಪೈಪೋಟಿ ನೀಡಿದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೆಚ್ಚಿನ ಸ್ಥಾನ ಲಭಿಸಲು ಸಾಧ್ಯವಾಗಿಲ್ಲ ಎನ್ನಬಹುದು.












Click it and Unblock the Notifications