ರಾಘವೇಶ್ವರ ಭಾರತಿ ಸ್ವಾಮೀಜಿಯಿಂದ ಕನ್ಯಾ ಸಂಸ್ಕಾರ ದೀಕ್ಷೆ
ಬೆಂಗಳೂರು, ಆಗಸ್ಟ್ 21: ಇಲ್ಲಿನ ಗಿರಿನಗರದಲ್ಲಿರುವ ರಾಮಚಂದ್ರಪುರ ಮಠದ ಶಾಖಾ ಮಠದಲ್ಲಿ ಭಾನುವಾರ 'ಕನ್ಯಾಸಂಸ್ಕಾರ' ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಘವೇಶ್ವರ ಭಾರತಿ ಸ್ವಾಮೀಜಿ ಹೆಣ್ಣುಮಕ್ಕಳಿಗೆ ಅದರಲ್ಲೂ ಚಿಕ್ಕವಯಸ್ಸಿನವರಿಗೆ ಕನ್ಯಾಸಂಸ್ಕಾರ ದೀಕ್ಷೆ ನೀಡಿದರು.
ಕನ್ಯಾಸಂಸ್ಕಾರದ ಬಗ್ಗೆ ಬೋಧಾಯನ ಗೃಹ್ಯಸೂತ್ರದಲ್ಲಿ ವಿವರಣೆ ಇದೆ. ಹೇಗೆ ಗಂಡುಮಕ್ಕಳಿಗೆ ಉಪನಯನ ಎಂಬುದಿದೆಯೋ ಅದೇ ರೀತಿ ಹೆಣ್ಣುಮಕ್ಕಳಿಗೆ ಕನ್ಯಾಸಂಸ್ಕಾರ ಎಂಬುದಿದೆ. ಭಕ್ತರ ಮನವಿ ಮೇರೆಗೆ ರಾಘವೇಶ್ವರ ಭಾರತಿ ಸ್ವಾಮೀಜಿ ಈ ಕಾರ್ಯಕ್ರಮ ಆಯೋಜಿಸಿದ್ದರು.

ಕನ್ಯಾಸಂಸ್ಕಾರದಂದು ಪಂಚಗವ್ಯ ಹವನ ಮಾಡಲಾಯಿತು. ಆ ನಂತರ ಮಂತ್ರೋಪದೇಶ ನಡೆಯಿತು. ಯಾರು ಕನ್ಯಾಸಂಸ್ಕಾರ ಸ್ವೀಕಾರ ಮಾಡಿದರೋ ಆ ಹೆಣ್ಣುಮಕ್ಕಳು ಕನಿಷ್ಠ ನೂರೆಂಟು ಬಾರಿ ಬೆಳಗ್ಗೆ ಹಾಗೂ ಸಂಜೆ ಈ ಶ್ಲೋಕ ಪಠಣ ಮಾಡಬೇಕಾಗುತ್ತದೆ. ಇದರಿಂದ ಹೆಣ್ಣುಮಕ್ಕಳ ವೈಯಕ್ತಿಕ ಹಾಗೂ ವೃತ್ತಿಪರ ಬದುಕು ಚೆನ್ನಾಗಿ ಆಗುತ್ತದೆ ಎಂಬುದು ನಂಬಿಕೆ.

ವೇದ ಕಾಲದಿಂದಲೂ ಈ ಆಚರಣೆ ರೂಢಿಯಲ್ಲಿದೆ. ಹೆಣ್ಣುಮಕ್ಕಳಲ್ಲಿ ಅದರಲ್ಲೂ ಬಾಲ್ಯದಲ್ಲಿ ಅವರಿಗೆ ಈ ರೀತಿಯ ಸಂಸ್ಕಾರ ಬೋಧಿಸಲಾಗುತ್ತದೆ. ಈ ಕಾರ್ಯಕ್ರಮದ ವಿರುದ್ಧ ಕೆಲವರು ಪ್ರತಿಭಟನೆ ನಡೆಸಿದರು. ಇಂಥವು ಕೂಡ ತುಂಬಾ ಮಾಮೂಲು ಎಂಬಂತಾಗಿದೆ.












Click it and Unblock the Notifications