ಕ್ರೈಸ್ತರ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳ ಬೆಂಬಲ
ಬೆಂಗಳೂರು, ಜೂನ್. 23: ಸಿವಿಲ್ ಕೋರ್ಟ್ ಆದೇಶದಂತೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಶ್ವನಾಥ ನಾಗನಹಳ್ಳಿಯ ಚರ್ಚ್ ಬಾಗಿಲು ತೆರೆಯಬೇಕೆಂದು ಆಗ್ರಹಿಸಿ ಸಂತ ವಚನ ಚಿನ್ನಪ್ಪ ದೇವಾಲಯದ ಕ್ಯಾಥೋಲಿಕ್ ಕ್ರೈಸ್ತರ ಧಾರ್ಮಿಕ ಹಕ್ಕುಗಳ ವೇದಿಕೆ ನಿರಂತರ ಪ್ರತಿಭಟನೆ ನಡೆಸುತ್ತಿದೆ.
ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರಾರ್ಥನಾ ಪ್ರತಿಭಟನೆಗೆ ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.[ಫಾ.ಚಸರಾ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ, ಸಾಧುಕೋಕಿಲ ಹೇಳಿದ್ದೇನು?]

ಚರ್ಚ್ ಬಾಗಿಲು ಮುಚ್ಚಿರುವ ಕ್ರಮಕ್ಕೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ತಂದಿದ್ದು, ಬೆಂಗಳೂರು ಮಹಾ ಧರ್ಮಾಧ್ಯಕ್ಷ ಡಾ. ಬರ್ನಾಡ್ ಮೊರಾಸ್ ತಕ್ಷಣ ಚರ್ಚ್ ಬಾಗಿಲು ತೆರೆದು ಕ್ರೈಸ್ತರಿಗೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಅನುವು ಮಾಡಿಕೊಟ್ಟು ಒಬ್ಬರು ಗುರುವನ್ನು ನೇಮಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಆದರೆ, ಧರ್ಮಾಧ್ಯಕ್ಷರು ಕೋರ್ಟ್ ಆದೇಶಕ್ಕೆ ಗೌರವ ಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಳೆದ 65 ದಿನಗಳಿಂದ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ ಕ್ರೈಸ್ತರ ಕನ್ನಡಪರ ಕಾಳಜಿಗೆ ಬೆಂಬಲ ವ್ಯಕ್ತಪಡಿಸಿದ್ದೇವೆ. ಇಲ್ಲಿ ಕ್ರೈಸ್ತರ ಧಾರ್ಮಿಕ ಹಕ್ಕುಗಳ ಉಲ್ಲಂಘನೆ ಆಗಿದೆ ಎಂಬುದನ್ನು ನಾವು ಮನಗಂಡಿದ್ದೇವೆ. ಚರ್ಚ್ ಗೆ ಹೋಗಲು ಅವರಿಗೆ ಅವಕಾಶ ನೀಡಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯ ಮಾಡಿದವು.[ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರು]
"ನ್ಯಾಯಾಲದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಅದರಂತೆ ಧರ್ಮಾಧಿಕಾರಿಗಳು ನಡೆದುಕೊಳ್ಳಬೇಕು. ಕನ್ನಡಿಗ ಕ್ರೈಸ್ತರ ಸಂವಿಧಾನ ಬದ್ಧವಾದಂತಹ ಧಾರ್ಮಿಕ ಹಾಗೂ ಭಾಷಿಕ ಹಕ್ಕುಗಳಿಗೆ ಯಾವುದೇ ದಕ್ಕೆ ಆಗದಂತೆ ನೋಡಿಕೊಳ್ಳಬೇಕು. ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗ ಕ್ರೈಸ್ತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ" ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.
ಡಾ. ಮನುಬಳಿಗಾರ್ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ನಮ್ಮ ಪ್ರತಿಭಟನೆಗೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿವೆ. ಅವರು ನ್ಯಾಯಾಲಯಕ್ಕೆ ಗೌರವ ಕೊಡದೇ ಇದ್ದ ಪಕ್ಷದಲ್ಲಿ ಎಲ್ಲ ಸಂಘಟನೆಗಳ ಜೊತೆಗೂಡಿ ನಾವು ಧರ್ಮಾಧ್ಯಕ್ಷರ ಮನೆ ಮುಂದೆ ಜೈಲ್ ಭರೋ ಹೋರಾಟವನ್ನು ಹಮ್ಮಿಕೊಳ್ಳಲಿದ್ದೇವೆ. ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ' ಎಂದು ಪ್ರತಿಭಟನೆ ನೇತೃತ್ವ ವಹಿಸಿಕೊಂಡಿರುವ ರಫಾಯಲ್ ರಾಜು ಎಚ್ಚರಿಕೆ ನೀಡಿದರು.












Click it and Unblock the Notifications