ಅಕ್ರಮ ಪಿಸ್ತೂಲ್ ಮಾರಾಟ, ಸಿಸಿಬಿಯಿಂದ ಕನ್ನಡ ನಟ ಬಂಧನ
ಬೆಂಗಳೂರು, ನವೆಂಬರ್ 04 : ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಮಾರಾಟ ಮಾಡುತ್ತಿದ್ದ ಕನ್ನಡ ಚಿತ್ರನಟ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಪಿಸ್ತೂಲ್ ಮತ್ತು 10 ಸಜೀವಗುಂಡುಗಳ್ನು ವಶಕ್ಕೆ ಪಡೆಯಲಾಗಿದೆ.
ಮಹಮ್ಮದ್ ನಿಜಾಮ್ (25), ಜಗದೀಶ್ ಎಸ್. ಹೊರಮಠ (31), ಬಿ.ಜಿ ಸತೀಶ್ ಕುಮಾರ್ (44) ಮತ್ತು ಸೈಯದ್ ಸಮೀರ್ ಅಹಮದ್ ಬಂಧಿತರು. ಈ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಜಗದೀಶ್ ಎಸ್. ಹೊಸಮಠ ಕನ್ನಡ ಚಲನಚಿತ್ರ ನಟನಾಗಿದ್ದು, 'ಸರ್ಕಾರ್' ಚಲನಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ.
23 ಅಕ್ಟೋಬರ್ 2018 ರಂದು ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬೆಮಲ್ ಆಡಿಟೋರಿಯಂ ಸಮೀಪ ಇಬ್ಬರು ಅಕ್ರಮವಾಗಿ ತಮ್ಮ ವಶದಲ್ಲಿದ್ದ ಪಿಸ್ತೂಲ್ ಮತ್ತು ಗುಂಡುಗಳನ್ನು ಇಟ್ಟುಕೊಂಡು ಅವುಗಳನ್ನು ಮಾರಾಟ ಮಾಡಲು ಗಿರಾಕಿಗಳಿಗೆ ಕಾಯುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳಾದ ಪ್ರಕಾಶ್.ಆರ್ ಹಾಗೂ ರಾಜೀವ್.ಎ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದರು. ಬಂಧಿತರಿಂದ 1 ಅಕ್ರಮ ಪಿಸ್ತೂಲ್ ಹಾಗೂ 10 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡರು.
ಈ ಪ್ರಕರಣದ ತನಿಖೆ ಮುಂದುವರೆಸಿದ ಸಿಸಿಬಿ ಅಧಿಕಾರಿ ಎಂ.ಮುರುಗೇಂದ್ರಯ್ಯ ಅವರು ಬಂಧಿತ ಆರೋಪಿಗಳು ನೀಡಿದ ಮಾಹಿತಿ ಅನ್ವಯ ಇನ್ನೂ ಇಬ್ಬರನ್ನು ಬಂಧಿಸಿದರು. ಬಂಧಿತರಿಂದ 1 ಪಿಸ್ತೂಲ್ ಮತ್ತು 11 ಗುಂಡುಗಳನ್ನು ವಶಕ್ಕೆ ಪಡೆದುಕೊಂಡರು.
ಈ ಕುರಿತು ಎಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 4 ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬೆಂಗಳೂರು ನಗರದ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಆಲೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.












Click it and Unblock the Notifications