ರಾಷ್ಟ್ರಕವಿ ಕುವೆಂಪು ಬಗ್ಗೆ ಅವಹೇಳನಕಾರಿ ಮಾತು: ಋಷಿಕುಮಾರ ಸ್ವಾಮೀಜಿ ಮುಖಕ್ಕೆ ಮಸಿ
ಬೆಂಗಳೂರು ಮೇ 12: ಕಾಳಿ ಸ್ವಾಮಿ ಎಂದೇ ಗುರುತಿಸಿಕೊಳ್ಳುವ ಋಷಿ ಕುಮಾರ ಸ್ವಾಮಿಜೀಯ ಮೇಲೆ ಶಿವರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದಿದ್ದಾರೆ.
Recommended Video
ಋಷಿ ಕುಮಾರ ಸ್ವಾಮಿಜೀ ರಾಷ್ಟ್ರಕವಿ ಕುವೆಂಪು ಮತ್ತು ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಮಲ್ಲೇಶ್ವರದ ಗಂಗಮ್ಮ ದೇವಾಲಯಕ್ಕೆ ಋಷಿಕುಮಾರ ಸ್ವಾಮಿ ಬಂದಿದ್ದ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಋಷಿಕುಮಾರ ಸ್ವಾಮೀಜಿಗೆ ದಿಕ್ಕಾರವನ್ನು ಕೂಗಿ ಮುಖಕ್ಕೆ ಕಪ್ಪು ಬಣ್ಣವನ್ನು ಬಳಿಯಲಾಗಿದೆ.
ಮಸಿ ಬಳಿಯುವ ಮುನ್ನ ಮಾತಿನ ಚಕಮಕಿ..!
ಮಲ್ಲೇಶ್ವರಂನ ಗಂಗಮ್ಮ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ವಿಚಾರ ತಿಳಿದ ಕನ್ನಡ ರಕ್ಷಣಾ ವೇದಿಕೆಯ ಕೆಲವು ಕಾರ್ಯಕರ್ತರು ದೇವಾಲಯದ ಬಳಿಗೆ ಬಂದಿದ್ದಾರೆ. ದೇವಾಲಯದ ಬಳಿ ಬಂದ ವೇಳೆ ಋಷಿಕುಮಾರ ಸ್ವಾಮೀಜಿ ಮತ್ತು ಕನ್ನಡ ಸಂಘಟನೆಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಋಷಿಕುಮಾರ ಸ್ವಾಮೀಜಿ ಏನೇ ಸಮರ್ಥನೆಯನ್ನು ನೀಡಿದರು. ಇದಕ್ಕೆ ಒಪ್ಪದ ಕನ್ನಡ ಪರ ಸಂಘಟನೆಗಳು ಋಷಿಕುಮಾರ ಸ್ವಾಮೀಜಿಗೆ ಮಸಿಯನ್ನು ಬಳಿದು ಹೋಗಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಋಷಿಕುಮಾರ ಸ್ವಾಮೀಜಿ, "ತಾವು ಕುವೆಂಪು ಮತ್ತು ನಾಡಪ್ರಭು ಕೆಂಪೇಗೌಡರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿಲ್ಲ. ತಾಕತ್ ಇದ್ದರೇ ತನ್ನ ಮೇಲೆ ಮಾಡಿರುವ ಆರೋಪವನ್ನು ನ್ಯಾಯಾಲಯದಲ್ಲಿ ಸಾಬೀತು ಪಡಿಸಲಿ. ನನಗೆ ಮಸಿ ಬಳಿದಿದ್ದಾರೆ ನನ್ನ ಮುಖವನ್ನು ನಾನು ಕನ್ನಡಿಯಲ್ಲಿ ನೋಡಿಕೊಂಡಾಗ ಸಂತೋಷ ಆಯ್ತು. ಕಾಳಿಯ ಬಣ್ಣವೂ ಕಪ್ಪು ನನಗೂ ಬಳಿದಿರುವ ಬಣ್ಣವೂ ಕಪ್ಪು ಎಂದಿದ್ದಾರೆ. ನಾನು ಹೆದರುವವನಲ್ಲ ಎಲ್ಲವನ್ನು ಎದುರಿಸುತ್ತೇನೆ. ಈ ಘಟನೆಯನ್ನು ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ," ಎಂದು ಪ್ರತಿಕ್ರಿಯೆ ನೀಡಿದ್ದಾರೆ.