ಕೊಲೆ ಮಾಡಿ ಹೆಣವನ್ನು 500 ಕಿ.ಮೀ. ತರಕಾರಿ ಬ್ಯಾಗಿನಲ್ಲಿ ಸಾಗಿಸಿದ್ದ ದಂಪತಿ ಸೆರೆ
ಬೆಂಗಳೂರು, ಫೆ. 16: ಆತ ಏಳು ವರ್ಷದ ಹಿಂದೆ ಕಾಣೆಯಾಗಿದ್ದ. 2015 ರಲ್ಲಿ ಕಣ್ಮರೆಯಾಗಿದ್ದ ಪ್ರಕರಣಕ್ಕೆ ಏಳು ವರ್ಷದ ಬಳಿಕ ರೋಚಕ ಟ್ವಿಸ್ಟ್ ಸಿಕ್ಕಿದೆ. ಆತನನ್ನು ಕೊಲೆ ಮಾಡಿದ್ದ ಕಿಲಾಡಿ ದಂಪತಿ, ತರಕಾರಿ ಬ್ಯಾಗ್ನಲ್ಲಿ ಹೆಣವನ್ನು 500 ಕಿ. ಮೀ ಸಾಗಿಸಿದ್ದರು. ಈ ಕೊಲೆ ಪಾತಕಿಗಳು ಏಳು ವರ್ಷದ ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಆತನ ಹೆಸರು ಮಹಮದ್ ಗೌಸ್, ಆಕೆ ಹೆಸರು ಕೌಸರ್. ಇಬ್ಬರ ದಾಂಪತ್ಯ ಚೆನ್ನಾಗಿಯೇ ಇತ್ತು. ಮೈತುಂಬಾ ಸಾಲ ಮಾಡಿಕೊಂಡಿದ್ದ ಮಹಮದ್ ಗೌಸ್ ಮನೆಗೆ ಬಾರದೇ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ. ಇನ್ನು ಗಂಡನ ಅನುಪಸ್ಥಿತಿಯಲ್ಲಿ ವಜೀರ್ ಎಂಬಾತ ಕೌಸರ್ಗೆ ಪರಿಚಯವಾಗಿತ್ತು. ಆಂಟಿ ನನ್ನ ಪ್ರೀತ್ಸೆ ಎಂದು ವಜೀರ್ ದುಂಬಾಲು ಬಿದ್ದಿದ್ದ. ಹೀನಾ ಆಲಿಯಾಸ್ ಕೌಸರ್ ಕೂಡ ವಜೀರನ ಜತೆ ಸಂಬಂಧ ಬೆಳೆಸಿದ್ದಳು. ಗಂಡ ಇಲ್ಲದ ಕಾರಣ ಇಬ್ಬರೂ ಪರಸ್ಪರ ಮನೆಯಲ್ಲಿಯೇ ಏಕಾಂತವಾಗಿ ಕಾಲ ಕಳೆಯುತ್ತಿದ್ದರು.
ಒಮ್ಮೆ ಕೌಸರ್ ಮತ್ತು ವಜೀರ್ ಸರಸ ಮಾಡುತ್ತಿದ್ದ ವೇಳೆ ಮಹಮದ್ ಗೌಸ್ ಕೈಗೆ ಸಿಕ್ಕಿಬಿದ್ದಿದ್ದರು. ವಜೀರ್ ಮನೆಯಿಂದ ಹೊರ ಹೋದ ಬಳಿಕ ಪತ್ನಿ ಜತೆ ಮಹಮದ್ ಗೌಸ್ ಜಗಳ ತೆಗೆದಿದ್ದಾನೆ. ವರಸೆ ಬದಲಿಸಿದ್ದ ಕೌಸರ್, ನೀವು ಇಲ್ಲದ ವೇಳೆ ವಜೀರ್ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ. ಹಲವು ಬಾರಿ ಇದೇ ವಿಚಾರಕ್ಕಾಗಿ ಜಗಳ ನಡೆದಿತ್ತು. ಆದರೂ ಬಲವಂತವಾಗಿ ಹೀಗೆ ಮಾಡುತ್ತಿದ್ದ ಎಂದು ಕಥೆ ಕಟ್ಟಿದ್ದಾಳೆ. ಇದನ್ನು ನಂಬಿದ ಮಹಮದ್ ಗೌಸ್ ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಅದಕ್ಕೆ ಕೌಸರ್ ಕೂಡ ಸಾಥ್ ನೀಡಿದ್ದಾಳೆ.

ಕೊಲೆಗೆ ಮುಹೂರ್ತ: ವಜೀರ್ನನ್ನು ಹತ್ಯೆ ಮಾಡಲು ಗಂಡ ಮಹಮದ್ ಗೌಸ್ ಸೂಚಿಸಿದ್ದಾನೆ. ಅದರಂತೆ ಸಂಚು ರೂಪಿಸಿದ್ದು, ಗೌಸ್ ಸ್ಕೆಚ್ನಂತೆ ಕೌಸರ್ ಸರಸಕ್ಕೆ ಬರುವಂತೆ ವಜೀರ್ಗೆ ಆಹ್ವಾನ ನೀಡಿದ್ದಾಳೆ. ಕೌಸರ್ ಕರೆದಿದ್ದೇ ತಡ ವಜೀರ್ ಓಡಿ ಬಂದಿದ್ದಾನೆ. ವಜೀರ್ ಮನೆಗೆ ಬರುವ ಮುನ್ನ ಮಂಚದ ಕೆಳಗೆ ಮಹಮದ್ ಗೌಸ್ ಅವಿತಿದ್ದ. ಸರಸದ ಸೋಗಿನಲ್ಲಿ ವಜೀರ್ ಬಟ್ಟೆ ಬಿಚ್ಚಿಸಿದ ಹೀನಾ ಕೌಸರ್, ಸೀರೆಯಿಂದಲೇ ಕುತ್ತಿಗೆ ಬಿಗಿದು ಲಾಕ್ ಮಾಡಿದ್ದಾಳೆ. ಈ ವೇಳೆ ಮಂಚದ ಕೆಳಗೆ ಇದ್ದ ಮಹಮದ್ ಗೌಸ್ ಎಂಟ್ರಿಯಾಗಿ ಕೊಲೆಯಾಗಿ ವಜೀರ್ನನ್ನು ಕೊಲೆ ಮಾಡಿದ್ದಾರೆ. ಪರಿ ಪರಿ ಬೇಡಿಕೊಂಡರೂ ವಜೀರ್ನನ್ನು ಬಿಡದೇ ಗೌಸ್ ಮತ್ತು ಹೀನಾ ಕೌಸರ್ ದಂಪತಿ ಹತ್ಯೆ ಮಾಡಿದ್ದಾರೆ.
ತರಕಾರಿ ಬ್ಯಾಗ್ನಲ್ಲಿ ಹೆಣ ಪಾಲ ಸಮುದ್ರಕ್ಕೆ ರವಾನೆ: ತರಕಾರಿ ಬ್ಯಾಗ್ನಲ್ಲಿ ವಜೀರ್ ಹೆಣ ಸಾಗಿಸಲು ದಂಪತಿ ಪ್ಲಾನ್ ರೂಪಿಸಿದ್ದಾರೆ. ತರಕಾರಿ ತರುವ ದೊಡ್ಡ ಬ್ಯಾಗ್ನಲ್ಲಿ ವಜೀರ್ ಶವ ಹಾಕಿ ಕಟ್ಟಿ ಹಾಕಿದ್ದಾರೆ. ಆನಂತರ ದ್ವಿಚಕ್ರ ವಾಹನದಲ್ಲಿ ಇಟ್ಟುಕೊಂಡು, ಮಗು ಸಮೇತ ಗೌಸ್ ಮತ್ತು ಕೌಸರ್ ಆಂಧ್ರ ಪ್ರದೇಶಕ್ಕೆ ತೆರಳಿದ್ದಾರೆ ಬೆಂಗಳೂರಿನಿಂದ ಸುಮಾರು ಐದು ನೂರು ಕಿ.ಮೀ. ದೂರದಲ್ಲಿರುವ ಪಾಲಸಮುದ್ರ ಎಂಬಲ್ಲಿಗೆ ತೆರಳಿದ್ದಾರೆ. ಆಂಧ್ರಪ್ರದೇಶದ ಪಾಲ ಸಮುದ್ರದ ಬಳಿ ಹೆಣ ಬಿಸಾಡಿ ಎಸ್ಕೇಪ್ ಆಗಿದ್ದರು. ಕೆಲ ಕಾಲ ಆಂಧ್ರಪ್ರದೇಶದಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಕಾಲ ಕಳೆದಿದ್ದರು. ಕೆಲ ತಿಂಗಳ ಬಳಿಕ ಬೆಂಗಳೂರಿಗೆ ಬಂದು ಪುನಃ ಆಂಧ್ರ ಪ್ರದೇಶಕ್ಕೆ ತೆರಳಿದ್ದರು.
ಇನ್ನು ಗೌಸ್ ದಂಪತಿ ಬಿಸಾಡಿದ್ದ ವಜೀರ್ ಶವ ಅಂಧ್ರ ಪ್ರದೇಶದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಪೋಷಕರು ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ವರ್ಷಗಳು ಕಳೆದರೂ ವಜೀರ್ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈ ಬಿಟ್ಟಿದ್ದರು.
ಕೊಲೆ ಪ್ರಕರಣ ಬಯಲಿಗೆ: ವಜೀರ್ನನ್ನು ಮನೆಗೆ ಕರೆಸಿ ಹತ್ಯೆ ಮಾಡಿದ್ದ ಗೌಸ್ ದಂಪತಿ ಇತ್ತೀಚೆಗೆ ವಾಪಸು ಬೆಂಗಳೂರಿಗೆ ಬಂದಿದ್ದರು. ವಜೀರ್ನ ಸ್ನೇಹಿತ ಗೌಸ್ ದಂಪತಿ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗೌಸ್ ಮತ್ತು ಕೌಸರ್ನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಏಳು ವರ್ಷದ ಹಿಂದೆ ಕಾಣೆಯಾಗಿದ್ದ ವಜೀರ್ನನ್ನು ಕೊಲೆ ಮಾಡಿದ ಅಸಲಿ ಕಥೆ ಬಯಲಿಗೆ ಬಂದಿದೆ.












Click it and Unblock the Notifications