ಕಲಬುರಗಿ ಅತಂತ್ರ ಪಾಲಿಕೆ: ಜೆಡಿಎಸ್ ಬೆಂಬಲ ಯಾರಿಗೆ? ಮಾಜಿ ಪ್ರಧಾನಿ ಒಲವೇನು?
ಬೆಂಗಳೂರು, ಸೆಪ್ಟೆಂಬರ್ 7: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡುಬೇಕೆಂಬ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ. ಕುಮಾರಸ್ವಾಮಿ ಹತ್ತಿರವೂ ಮಾತಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ಕಲಬುರಗಿ ಮಹಾನಗರ ವ್ಯಾಪ್ತಿಯ ಜೆಡಿಎಸ್ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ನಿರ್ಧಾರ ಮಾಡಬಾರದು ಎಂದು ಕುಮಾರಸ್ವಾಮಿಗೂ ಸೂಚಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠರೂ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಪ್ರತಿಕ್ರಿಯಿಸಿದರು.
ಮಂಗಳವಾರ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, "ಬಿಜೆಪಿಯವರು ನನ್ನ ಜೊತೆ ಯಾರೂ ಮಾತಾನಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಪಕ್ಷದವರನ್ನೇ ಸಂಪರ್ಕಿಸಿ ಮಾತಾಡಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಖರ್ಗೆ ಕೂತು ಮಾತಾಡುತ್ತಾರೆ ನೋಡೋಣವೆಂದರು. ಸಿಎಂ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಮಾತಾಡಿರಬಹುದು, ನನ್ನ ಜೊತೆ ಬಿಜೆಪಿಯ ಯಾವ ನಾಯಕರು ಮಾತನಾಡಿಲ್ಲ," ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

"ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ನಮಗೆ ನಾಲ್ಕು ಸ್ಥಾನ ಬಂದಿದೆ, ನಾಲ್ಕು ಸೀಟ್ ಬರುತ್ತದೆಂದೂ ನಾನು ಅಂದುಕೊಂಡಿರಲಿಲ್ಲ, ಕುಮಾರಸ್ವಾಮಿ ಹೋಗಿ ಪ್ರಚಾರ ಮಾಡಿದ್ದರು. ಜೆಡಿಎಸ್ ಎಲ್ಲಿಯೂ ಇಲ್ಲ ಅನ್ನುವ ಸ್ಥಿತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ನಮ್ಮ ಸ್ಥಿತಿ ಚೆನ್ನಾಗಿರಲಿಲ್ಲ. ಬೆಳಗಾವಿಯಲ್ಲಿ ಬಿಜೆಪಿ ಸ್ವೀಪ್ ಮಾಡಿದೆ," ಎಂದು ಹೇಳಿದರು.
"ಈ ಸಂದರ್ಭದಲ್ಲಿ ಕಾಂಗ್ರೆಸ್ ಬಗ್ಗೆ ಮಾತಾಡಲು ಹೋಗುವುದಿಲ್ಲ, ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಮೂರರಿಂದ ನಾಲ್ಕು ಸೀಟ್ ನಿರೀಕ್ಷೆ ಮಾಡಿದ್ದೇವು. ಆದರೆ ಒಂದು ಸೀಟ್ ಬಂದಿದೆ, ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲ ಕಡೆ ಪೈಪೋಟಿ ಕೊಟ್ಟಿದ್ದೇವೆ," ಎಂದರು.
"ಈ ಫಲಿತಾಂಶದಿಂದ ಯಾರೂ ನಿರಾಶೆಯಾಗಬೇಕಿಲ್ಲ, ನಾವು ಹೆಚ್ಚಿನ ಸದಸ್ಯತ್ವ ನೋಂದಣಿ ಬಗ್ಗೆ ಗಮನ ಕೊಡುತ್ತೇವೆ. ಪಕ್ಷ ಕಟ್ಟುವ ಕಡೆಗೆ ಹೆಚ್ಚು ಗಮನ ಕೊಡುತ್ತೇವೆ. ನಾನು ಮತ್ತು ಪಕ್ಷದ ಎಲ್ಲಾ ನಾಯಕರು ಒಳಗೊಂಡಂತೆ ಜೆಡಿಎಸ್ ಪಕ್ಷ ಕಟ್ಟುವ ಕೆಲಸಕ್ಕೆ ಆದ್ಯತೆ ಕೊಡುತ್ತೇವೆ. ಒಟ್ಟಾಗಿ ಐಕ್ಯತೆಯಿಂದ ಪಕ್ಷ ಸಂಘಟನೆ ಮಾಡುತ್ತೇವೆ. ಸೋಲು- ಗೆಲುವು ಅಂತಾ ನೋಡಿ ಕುಳಿತುಕೊಳ್ಳಲು ಆಗುವುದಿಲ್ಲ. ನಾವು ಸೋಲು-ಗೆಲುವು, ಸಿಹಿ- ಕಹಿ ನೋಡಿದ್ದೇವೆ," ಎಂದು ಎಚ್ಡಿಡಿ ಹೇಳಿದರು.
ಜಿಟಿಡಿ ಪಕ್ಷಕ್ಕೆ ಹಾನಿಯಾಗಿಲ್ಲ
"ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಪಕ್ಷದಿಂದ ದೂರ ಇದ್ದಾರೆ, ಆದರೆ ಅವರು ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಟ್ಟಿಲ್ಲ. ನನಗೂ ಮಗನಿಗೂ ಟಿಕೆಟ್ ಕೊಡುವ ವಿಚಾರವಾಗಿ ಸಿದ್ದರಾಮಯ್ಯ ಬಳಿ ಮಾತನಾಡಿದ್ದೀನೆಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದೂ ಹೇಳಿಕೆ ಕೊಟ್ಟಿದ್ದಾರೆ. ಆದರೆ ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಕೊಟ್ಟಿಲ್ಲ, ಹಾಗಾಗಿ ಕ್ರಮ ಕೈಗೊಂಡಿಲ್ಲ," ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
"ಜಿ.ಟಿ. ದೇವೇಗೌಡ ಜೊತೆ ನಾನು ರಾಜಕೀಯ ಮಾತನಾಡಿಲ್ಲ, ತಿರುಪತಿಗೆ ಹೋಗಿದ್ದಾಗ ಜಿ.ಟಿ. ದೇವೇಗೌಡ ಸಿಕ್ಕಿದ್ದರು. ಆಗ ನಾನೇ ನೋಡಿ ಕರೆದು ತಮಾಷೆ ಮಾಡಿದೆ. ನಿನ್ನ ದರ್ಶನ ಇಲ್ಲಿ ಆಯ್ತಲ್ಲಪ್ಪಾ ಎಂದಿದ್ದೆ, ಆಗ ನಿಮ್ಮ ದರ್ಶನ ಆಗಿದ್ದು ಖುಷಿ ಆಯ್ತು ಸರ್ ಅಂದಿದ್ರು ಅಷ್ಟೇ, ಯಾವುದೇ ರಾಜಕೀಯ ಮಾತುಕತೆ ಆಗಿಲ್ಲ," ಎಂದು ಜೆಡಿಎಸ್ ವರಿಷ್ಠ ಎಚ್ಡಿಡಿ ಹೇಳಿದರು.
Recommended Video
"ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಜೊತೆ ಸೇರಿ ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಮಾತಾಡಿದ್ದರೆ, ಅವರ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮ ತೆಗೆದುಕೊಳ್ಳುತ್ತಾರೆ. ಕೋಲಾರ ವಿಚಾರದಲ್ಲಿ ಸಹಿಸಲಾಗದು, ಕೀಳಾಗಿ ಮಾತನಾಡಿದ್ದರೆ ಕ್ರಮ ಅನಿವಾರ್ಯವಾಗಿದೆ, ಕ್ರಮ ತೆಗೆದುಕೊಳ್ಳುತ್ತಾರೆ," ಎಂದರು.












Click it and Unblock the Notifications