Bengaluru Suburban Rail: ಸಬ್ ಅರ್ಬನ್ ರೈಲು ಯೋಜನೆ, ಕಾರಿಡಾರ್ ರದ್ದು ಬಗ್ಗೆ ಕೆ-ರೈಡ್ ಸ್ಪಷ್ಟನೆ
ಬೆಂಗಳೂರು, ನವೆಂಬರ್ 27: ಉದ್ಯಾನ ನಗರಿ ಬೆಂಗಳೂರಿನ ಸಂಚಾರ ದಟ್ಟಣೆ ತಪ್ಪಿಸಲು ಉಪ ನಗರ ರೈಲು ಯೋಜನೆ ಅನುಕೂಲ ಮಾಡಿಕೊಡಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ)ಯನ್ನು ಕರ್ನಾಟಕ ಸರ್ಕಾರ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನ ಮಾಡುತ್ತಿದೆ. 148 ಕಿ. ಮೀ. ಉದ್ದದ ಸಬ್ ಅರ್ಬನ್ ರೈಲು ಯೋಜನೆ ಒಟ್ಟು 4 ಕಾರಿಡಾರ್ಗಳನ್ನು ಒಳಗೊಂಡಿದೆ.
ಮಲ್ಲಿಗೆ, ಕನಕ, ಪಾರಿಜಾತ ಮತ್ತು ಸಂಪಿಗೆ ಎಂದು ನಾಲ್ಕು ಕಾರಿಡಾರ್ಗಳನ್ನು ವಿಭಾಗ ಮಾಡಲಾಗಿದೆ. ಎರಡು ಕಾರಿಡಾರ್ಗಳ ಕಾಮಗಾರಿ ಆರಂಭವಾಗಿದೆ. ಇನ್ನೆರಡು ಕಾರಿಡಾರ್ಗಳು ಟೆಂಡರ್ ಹಂತದಲ್ಲಿದೆ. ಈ ಪೈಕಿ ವೈಟ್ಫೀಲ್ಡ್-ಕೆಂಗೇರಿ ಸಂಪರ್ಕಿಸುವ 35 ಕಿ. ಮೀ. 'ಪಾರಿಜಾತ' ಕಾರಿಡಾರ್-3 ರದ್ದುಗೊಳಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು.

ಬಿಎಸ್ಆರ್ಪಿ ಜಾರಿಗೊಳಿಸುತ್ತಿರುವ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಈ ಕುರಿತು ಸ್ಪಷ್ಟನೆಯನ್ನು ನೀಡಿದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಡಿಪಿಆರ್ ಪ್ರಕಾರವೇ ಕಾಮಗಾರಿ ನಡೆಯಲಿದೆ ಎಂದು ಹೇಳಿದೆ. ಆದ್ದರಿಂದ ಸಬ್ ಅರ್ಬನ್ ರೈಲು ಯೋಜನೆ 4 ಕಾರಿಡಾರ್ ನಿರ್ಮಾಣವಾಗುವುದು ಖಚಿತವಾಗಿದೆ.
ಕೆ-ರೈಡ್ ಸ್ಪಷ್ಟನೆ: ಸಾಮಾಜಿಕ ಜಾಲತಾಣದಲ್ಲಿ ಕೆ-ರೈಡ್ ಪೋಸ್ಟ್ ಹಾಕಿದ್ದು, 'ಬಿಎಸ್ಆರ್ಪಿ ಯೋಜನೆಯ ವಿನ್ಯಾಸಕ್ಕೆ ಒಪ್ಪಿಗೆ ಪಡೆದಿದ್ದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇಂದ್ರದ ಒಪ್ಪಿಗೆ ಪಡೆದ ಡಿಪಿಆರ್ನಂತೆಯೇ ಯೋಜನೆ ಇರಲಿದೆ. ಯಾವುದೇ ತಪ್ಪು ಮಾಹಿತಿ ಹರಡಬೇಡಿ' ಎಂದು ಸ್ಪಷ್ಟನೆಯನ್ನು ನೀಡಿದೆ.
ಕೆಲವು ಇಂಗ್ಲಿಶ್ ಮಾಧ್ಯಮಗಳಲ್ಲಿ ಮಂಗಳವಾರ ವೈಟ್ಫೀಲ್ಡ್-ಕೆಂಗೇರಿ ಸಂಪರ್ಕಿಸುವ 'ಪಾರಿಜಾತ' ಕಾರಿಡಾರ್-3 ವಿನ್ಯಾಸ ಬದಲಾವಣೆ ಮಾಡಲಾಗುತ್ತದೆ ಅಥವ ಕಾರಿಡಾರ್ ಜಾರಿಗೊಳಿಸುವ ಕುರಿತು ಪುನರ್ ಪರಿಶೀಲನೆ ನಡೆಸಲಾಗುತ್ತದೆ ಎಂದು ವರದಿ ಮಾಡಿದ್ದವು. ಆದ್ದರಿಂದ ಕೆ-ರೈಡ್ ಸ್ಪಷ್ಟನೆಯನ್ನು ಕೊಟ್ಟಿದೆ.
'ಪಾರಿಜಾತ' ಕಾರಿಡಾರ್ ವಿನ್ಯಾಸವನ್ನು 43 ಕಿ. ಮೀ. ನೇರಳೆ ಮಾರ್ಗದ ನಮ್ಮ ಮೆಟ್ರೋ ಮಾರ್ಗದ ಹಿನ್ನಲೆಯಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ನೇರಳೆ ಮಾರ್ಗದ ನಮ್ಮ ಮೆಟ್ರೋ ರೈಲು ಚೆಲ್ಲಘಟ್ಟದಿಂದ ವೈಟ್ಫೀಲ್ಡ್ (ಕಾಡುಗೋಡಿ) ಅನ್ನು ಸಂಪರ್ಕಿಸುತ್ತದೆ.
ಕಾರಿಡಾರ್-3 ವಿನ್ಯಾಸ ಬದಲಿಸಿ ಅಥವ ರದ್ದುಗೊಳಿಸಿ ಚಿಕ್ಕಬಣಾವರ-ತುಮಕೂರು ವಯಾ ದಾಬಸ್ಪೇಟೆ, ಚಿಕ್ಕಬಣಾವರ-ಮಾಗಡಿ, ರಾಜನಕುಂಟೆ-ಗೌರಿಬಿದನೂರು ವಯಾ ದೊಡ್ಡಬಳ್ಳಾಪುರ ಪರ್ಯಾಯ ರೈಲು ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ಇದು ಉಪ ನಗರ ರೈಲು ಯೋಜನೆ ಸಂಪರ್ಕಿಸುವಂತೆಯೂ ಇರಲಿದೆ ಎಂದು ವರದಿಗಳು ಬಂದಿದ್ದವು.
ಕೇಂದ್ರ ಸರ್ಕಾರ ಈಗಾಗಲೇ ಸಬ್ ಅರ್ಬನ್ ರೈಲು ಯೋಜನೆಯ ಡಿಪಿಆರ್ಗೆ ಒಪ್ಪಿಗೆಯನ್ನು ನೀಡಿದೆ. ಜೂನ್ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಎಸ್ಆರ್ಪಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದಾರೆ. ಎರಡು ಕಾರಿಡಾರ್ನ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ.
ಉಪ ನಗರ ರೈಲು ಯೋಜನೆಯಲ್ಲಿ 'ಪಾರಿಜಾತ' ಕಾರಿಡಾರ್-3 ಆಗಿದೆ. ಈ ಯೋಜನೆ ಡಿಪಿಆರ್ಗೆ 21 ಅಕ್ಟೋಬರ್ 2020ರಲ್ಲಿ ಒಪ್ಪಿಗೆ ನೀಡಲಾಗಿದೆ. 35 ಕಿ. ಮೀ. ಮಾರ್ಗದ ಈ ಕಾರಿಡಾರ್ 13 ನಿಲ್ದಾಣಗಳನ್ನು ಹೊಂದಿದೆ. ಭವಿಷ್ಯದಲ್ಲಿ ರಾಮನಗರ, ಮೈಸೂರು, ಬಂಗಾರಪೇಟೆ, ಕೆಜಿಎಫ್ ತನಕ ಇದನ್ನು ವಿಸ್ತರಣೆ ಮಾಡುವಂತೆ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.
ಈ ಕಾರಿಡಾರ್ನಲ್ಲಿ ಕೆಂಗೇರಿ, ಆರ್ವಿಸಿಇ, ಜ್ಞಾನ ಭಾರತಿ, ನಾಯಂಡಹಳ್ಳಿ, ಕೃಷ್ಣದೇವರಾಯ, ಜಗಜೀವನ್ರಾಮ್ ನಗರ, ಮೆಜೆಸ್ಟಿಕ್, ಕುಮಾರ ಪಾರ್ಕ್, ಕಂಟೋನ್ಮೆಂಟ್ ನಿಲ್ದಾಣಗಳು ಬರಲಿದ್ದು, ಕಂಟೋನ್ಮೆಂಟ್ ಮೂಲಕ ರೈಲು ವೈಟ್ಫೀಲ್ಡ್ ತನಕ ಸಂಚಾರವನ್ನು ಮುಂದುವರೆಸಲಿದೆ.
ಉಳಿದಂತೆ ಬಿಎಸ್ಆರ್ಪಿ ಯೋಜನೆಯಲ್ಲಿ ಬೈಯಪ್ಪನಹಳ್ಳಿ-ಚಿಕ್ಕಬಣಾವರ 24 ಕಿ. ಮೀ. ಮಲ್ಲಿಗೆ ಕಾರಿಡಾರ್, ಹೀಗಲಿಗೆ-ರಾಜನಕುಂಟೆ 46 ಕಿ. ಮೀ. ಕನಕ ಕಾರಿಡಾರ್, ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ ವಯಾ ಯಲಹಂಕ 41 ಕಿ. ಮೀ. ಸಂಪಿಗೆ ಕಾರಿಡಾರ್ ನಿರ್ಮಾಣವಾಗುತ್ತಿದೆ.












Click it and Unblock the Notifications