ಸಿದ್ದರಾಮಯ್ಯ ಕಚೇರಿ ಬಾಗಿಲನ್ನೂ ತಟ್ಟಲಿದೆ 'ಕಲಾಸೌಧ ಉಳಿಸಿ' ಅಭಿಯಾನ
ಬೆಂಗಳೂರು, ಜುಲೈ 12: ಟೆಂಡರ್ ಸಮಸ್ಯೆಯಿಂದಾಗಿ ಕೆ.ಎಚ್. ಕಲಾಸೌಧಕ್ಕೆ ಬೀಗ ಜಡಿದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕ್ರಮಕ್ಕೆ ಕಲಾವಿದರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಜುಲೈ 14 ಶುಕ್ರವಾರದಿಂದ ಕಲಾಸೌಧದ ಕಾರ್ಯಚಟುವಟಿಕೆಗಳನ್ನು ಬೀಗ ಹಾಕಿದ ಬಾಗಿಲಿನ ಎದುರಲ್ಲೇ ಪ್ರದರ್ಶಿಸಲಾಗುವುದು ಎಂದು ಕಲಾವಿದರು ಹೇಳಿದ್ದಾರೆ.
ಬೆಂಗಳೂರಿನ ಕಲಾಸೌಧ ಉಳಿಸುವುದಕ್ಕಾಗಿ ಆನ್ ಲೈನ್ ಅಭಿಯಾನ
ಅಷ್ಟೇ ಅಲ್ಲ, ಈ ಕುರಿತು ಕಲಾಸೌಧದ ಮುಖ್ಯಸ್ಥ ಪಿ.ಡಿ. ಸತೀಶ್ ಚಂದ್ರ ನೇತೃತ್ವದಲ್ಲಿ ಪ್ರಮುಖ ಕಲಾವಿದರೆಲ್ಲ ಸೇರಿ ಜು.13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ಕಲಾಸೌಧವನ್ನು ಉಳಿಸಿಕೊಳ್ಳುವ ಕೂಗು ಮುಖ್ಯಮಂತ್ರಿ ಕಚೇರಿ ಬಾಗಿಲನ್ನೂ ತಟ್ಟಲಿದೆ.
ಪಿ.ಡಿ. ಸತೀಶ್ ಚಂದ್ರ 2009ರಲ್ಲಿ ಕೆ.ಎಚ್. ಕಲಾಸೌಧ ನಿರ್ವಹಣೆಗಾಗಿ ಪಡೆದಿದ್ದ ಟೆಂಡರ್ ಅವಧಿ 2014ರಲ್ಲಿ ಮುಕ್ತಾಯವಾಗಿತ್ತು. ಆ ನಂತರ ಬಿಬಿಎಂಪಿ ಟೆಂಡರ್ ಅವಧಿಯನ್ನು ವಿಸ್ತರಣೆ ಮಾಡುತ್ತಾ ಬಂದಿತ್ತು. 2017ರ ಫೆಬ್ರವರಿ ನಂತರ ಟೆಂಡರ್ ವಿಸ್ತರಣೆ ಆಗದೆ, ಕಲಾಸೌಧಕ್ಕೆ ಬೀಗ ಜಡಿಯಲಾಗಿದೆ.
10,000 ರೂ. ಇದ್ದ ಕಲಾಸೌಧದ ಬಾಡಿಗೆಯನ್ನು ಬಿಬಿಎಂಪಿ ಏಕಾಏಕಿ 40,000 ರೂ.ಗಳಿಗೆ ಏರಿಸಿದ್ದು, ಇಷ್ಟು ದೊಡ್ಡ ಮೊತ್ತವನ್ನು ಪ್ರತಿ ತಿಂಗಳು ಪಾವತಿಸುವುದು ಕಷ್ಟ ಎಂದು ಕಲಾಸೌಧ ಸಂಘದ ಕಲಾವಿದರು ತಮ್ಮ್ ಸಮಸ್ಯೆಯನ್ನು ತೋಡಿಕೊಂಡಿದ್ದರು. ಆದರೆ ಕೇವಲ 10,000 ರೂ. ಬಾಡಿಕೆ ನೀಡೀದರೆ ಅದು ಕಲಾಸೌಧದ ನಿರ್ವಹಣೆಯ ವೆಚ್ಚಕ್ಕೂ ಸಾಕಾಗುವುದಿಲ್ಲ ಎಂಬ ದೂರಿನೊಂದಿಗೆ ಬಿಬಿಎಂಪಿ ಕಟ್ಟಡಕ್ಕೇ ಬೀಗ ಜಡಿದಿತ್ತು.
ಈ ಕುರಿತು change.org ಯಲ್ಲಿ #savekalasoudha ಆನ್ ಲೈನ್ ಪಿಟಿಶನ್ ಅಭಿಯಾನ ಸಹ ಆರಂಭವಾಗಿದ್ದು, ಇದಕ್ಕೆ ಈಗಾಗಲೇ 2100 ಸಹಿ ಸಂಗ್ರಹವಾಗಿದೆ.