ಪ್ರೆಸ್ ಕ್ಲಬ್ ಆಫ್ ಬೆಂಗಳೂರಿಗೆ ಹೊಸ ತಂಡ
ಬೆಂಗಳೂರು, ಜೂ. 30: "ಉದಯ ಟಿವಿ" ವಾಹಿನಿಯ ವರದಿಗಾರ ಹಾಗೂ ನಿರೂಪಕ ಆರ್ ಶ್ರೀಧರ್ ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ 'ಪ್ರಜಾವಾಣಿ' ದಿನಪತ್ರಿಕೆಯ ನಿವೃತ್ತ ಮುಖ್ಯ ವರದಿಗಾರ ಇ ವಿ ಸತ್ಯನಾರಾಯಣ ಅವರಿಗಿಂತ 139 ಅಧಿಕ ಮತಗಳಿಸಿ ಜಯಶೀಲರಾಗಿದ್ದಾರೆ.
ಸದಸ್ಯರ ಸಾಮಾನ್ಯಸಭೆ ಹಾಗೂ ಆಡಳಿತಮಂಡಳಿಗೆ ಚುನಾವಣೆಗಳು ಕಬ್ಬನ್ ಪಾರ್ಕಿನಲ್ಲಿರುವ ಕ್ಲಬ್ಬಿನ ಆವರಣದಲ್ಲಿ ಭಾನುವಾರ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಖಚಾಂಜಿ ಹಾಗೂ ಆಡಳಿತ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಹೆಸರುಗಳು ಕೆಳಕಂಡಂತಿದೆ.
ಆರ್ ಶ್ರೀಧರ್ (ಅಧ್ಯಕ್ಷ), ಕಿರಣ್ ಎಚ್.ವಿ. (ಉಪಾಧ್ಯಕ್ಷ), ಸದಾಶಿವ ಶೆಣೈ ಕೆ. (ಪ್ರಧಾನ ಕಾರ್ಯದರ್ಶಿ), ಶಿವಕುಮಾರ್ ಎಂ.ಡಿ. (ಕಾರ್ಯದರ್ಶಿ), ಶಿವಪ್ರಕಾಶ್ ಎಸ್. (ಖಜಾಂಚಿ - ಅವಿರೋಧ ಆಯ್ಕೆ) : ಆಯೆಷ ಕಾನಮ್, ಶ್ಯಾಮ ಪ್ರಸಾದ್ ಎಸ್., ಬಿ.ಎನ್. ಮೋಹನ್ಕುಮಾರ್, ರಂಗನಾಥ್ ಎಚ್.ಎಸ್, ಆಲ್ಫ್ರೆಡ್ ಟೆನ್ನಿಸನ್ ಡಿ, ವಿಜಯ ಗ್ರೋವರ್ (ಎಲ್ಲರೂ ಸದಸ್ಯರು).

ಬೆಳಗ್ಗೆ 8 ಗಂಟೆಯಿಂದ ಮಧ್ಯಾನ್ಹ 2 ಗಂಟೆವರೆಗೆ ಮತದಾನಕ್ಕೆ ಅವಕಾಶವಿತ್ತು. ಮತದಾನ ಮಾಡಲು ವಿದ್ಯುನ್ಮಾನ ಯಂತ್ರ ಬಳಸಿದ್ದರಿಂದ ಫಲಿತಾಂಶ ಬೇಗ ಹೊರಬಿತ್ತು. ಬೆಂಗಳೂರು ಆಕಾಶವಾಣಿಯ ನಿವೃತ್ತ ಮುಖ್ಯ ವರದಿಗಾರ ಆರ್ ಶೇಷಚಂದ್ರಿಕ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅರ್ಹ ಮತದಾರರ ಸಂಖ್ಯೆ 764, ಚಲಾವಣೆಯಾದ ಮತಗಳು 569. ಮತದಾನ ಶೇ 74.
ಗೆಲವು ಸಾಧಿಸಿದ ನಂತರ ಅಧ್ಯಕ್ಷ ಶ್ರೀಧರ್ ಒನ್ಇಂಡಿಯ ಕನ್ನಡದ ಜತೆ ಮಾತನಾಡಿದರು. ಪತ್ರಕರ್ತ ಸಮುದಾಯಕ್ಕೆ ಕ್ಲಬ್ ಮೀಸಲಾಗಬೇಕು, ಇಸ್ಪೀಟು ಆಟ ಮತ್ತು ಮದ್ಯಪಾನಕ್ಕೆ ಮಾತ್ರ ಕ್ಲಬ್ ಇದೆ ಎಂಬ ಆರೋಪ ಅಳಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕುಟುಂಬವರ್ಗದವರನ್ನೂ ಸೆಳೆಯುವುದರತ್ತ ಗಮನಹರಿಸಲಾಗುವುದು ಎಂದರು.
ಹೊಸ ಸದಸ್ಯತ್ವ ಮುಂಜೂರು ಮಾಡುವುದಕ್ಕೆ ಇರುವ ನಿಯಮಾವಳಿಗಳನ್ನು ಸರಿಪಡಿಸುವುದರ ಜತೆಗೆ ಕೆಲವು ಹೊಸ ಕಟ್ಟುಪಾಡುಗಳನ್ನು ತರಬೇಕಾಗಿದೆ. ಚುನಾವಣೆ ಹತ್ತಿರ ಬಂದಾಗ ಹೊಸ ಸದಸ್ಯರ ಸೇರ್ಪಡೆ ಮಾಡುವ ಚಾಳಿಯಿಂದ ಓಟ್ ಬ್ಯಾಂಕ್ ಸೃಷ್ಟಿಸುವ ಅಪಾಯ ಇರತ್ತೆ. ಅದನ್ನು ಹೋಗಲಾಡಿಸುವುದು ಹಾಗೂ ಕಿರಿಯ ಸದಸ್ಯರಿಗೆ ವೃತ್ತಿಯ ಕಷ್ಟ, ಸವಾಲು ಹಾಗೂ ಅದರ ಸಂತೋಷಗಳನ್ನು ಮನನ ಮಾಡಿಸುವ ಸರಣಿ ಉಪನ್ಯಾಸ ಆಯೋಜಿಸುವ ಇರಾದೆ ಎಂದೂ ಹೇಳಿದರು.
ಕೊನೆ ಗುಟುಕು : ಈಚೀಚೆಗೆ ಮಾಧ್ಯಮ ಮಿತ್ರರು ನೌಕರಿ/ವೃತ್ತಿ ಸಂಬಂಧಿ ಕೆಲಸಗಳಿಗೆ ಅಂತರ್ಜಾಲವನ್ನು ಅವಲಂಬಿಸಿರುವುದು ಕಂಡುಬರುತ್ತಿದೆ. ಹೀಗಿರುವಾಗ, ಕ್ಲಬ್ಬಿನ ಮಾಹಿತಿ ಮತ್ತು ಆಗುಹೋಗುಗಳನ್ನು ಸದಸ್ಯರಿಗೆ ಮತ್ತು ಪತ್ರಕರ್ತ ಸಮುದಾಯಕ್ಕೆ ಏಕಕಾಲಕ್ಕೆ ತಲುಪಿಸಲು ಆನ್ ಲೈನ್ ಮಾಧ್ಯಮ ಸರಿಯಾದ ವಾಹಕ ಎನ್ನುವ ಅಂಶವನ್ನು ಕಾರ್ಯಕಾರಿ ಸಮಿತಿ ಅರಿಯಬೇಕಾಗಿದೆ.
ತನ್ನದೇ ಆದ ವೆಬ್ ಸೈಟನ್ನು ಜೀರ್ಣೋದ್ಧಾರ ಮಾಡುವ ಕೆಲಸವನ್ನು ಪ್ರೆಸ್ ಕ್ಲಬ್ಬಿನ ಹೊಸ ಆಡಳಿತ ಮಂಡಳಿ ಮೊದಲು ಮಾಡಬೇಕಾಗಿದೆ. ಹಾಗೆ ಮಾಡುತ್ತಾರೆಂಬ ಆಶಯ ನಮ್ಮದೂ ಕೂಡ.












Click it and Unblock the Notifications