ಬಿಬಿಎಂಪಿಯಲ್ಲಿ ಮೈತ್ರಿ : ಎಲ್ಲಾ ಗೊಂದಲ ಬಗೆಹರಿಸಿದ ಎಚ್ಡಿಕೆ
ಬೆಂಗಳೂರು, ಸೆಪ್ಟೆಂಬರ್, 07 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಎದ್ದಿದ್ದ ಎಲ್ಲಾ ಗೊಂದಲಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. 'ಐದು ವರ್ಷಗಳ ಕಾಲ ಬೇಷರತ್ ಬೆಂಬಲ ನೀಡುತ್ತೇವೆ' ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ.
ಸೋಮವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು, 'ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡುತ್ತಿರುವುದಾಗಿ' ಹೇಳಿದರು. [ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಎಚ್ಡಿಕೆ ಅಸಮಾಧಾನ?]

'ಆಗಿದ್ದು ಆಗಲಿ, ಯಾರಿಂದ ಯಾವಾಗ ತಪ್ಪಾಗಿದೆ? ಎಂದು ವಿಮರ್ಶಿಸಲು ಇದು ಕಾಲವಲ್ಲ. ನಾವು ನೀಡಿರುವ ಬೆಂಬಲವನ್ನು ಕಾಂಗ್ರೆಸ್ ಪಕ್ಷದವರು ಸದ್ಭಳಕೆ ಮಾಡಿಕೊಳ್ಳಲಿ' ಎಂದು ಕುಮಾರಸ್ವಾಮಿ ತಿಳಿಸಿದರು. 'ಮೈತ್ರಿ ಬಗ್ಗೆ ಪಕ್ಷದ ಎರಡನೇ ಹಂತದ ನಾಯಕರು ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ' ಎಂದರು. [ಮೇಯರ್ ಆಯ್ಕೆ : ಮಂಗಳವಾರ ಹೈಕೋರ್ಟ್ ತೀರ್ಪು]
'ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಜೊತೆ ಫೋನ್ನಲ್ಲಿ ಮಾತನಾಡಿದ್ದೇನೆ. ಒಂದು ವೇಳೆ ಉಭಯ ನಾಯಕರು ಖುದ್ದಾಗಿ ಭೇಟಿಯಾಗಲು ಬಯಸಿದರೆ, ಭೇಟಿಯಾಗುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. [ಮೈತ್ರಿ ಮಾಡಿಕೊಂಡರೆ ಯಾರಿಗೆ ಲಾಭ ಹೆಚ್ಚು]
ಸದಸ್ಯರು ರೆಸಾರ್ಟ್ಗೆ : ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ನ ಬಿಬಿಎಂಪಿ ಸದಸ್ಯರು ಮಡಿಕೇರಿಯ ರೆಸಾರ್ಟ್ಗೆ ತೆರಳಲಿದ್ದಾರೆ. ಮೂವರು ಶಾಸಕರ ನೇತೃತ್ವದಲ್ಲಿ 76 ಸದಸ್ಯರು ಶುಂಠಿಕೊಪ್ಪದ ಮಹೇಂದ್ರ ಕ್ಲಬ್ ರೆಸಾರ್ಟ್ಗೆ ಹೋಗಲಿದ್ದು, ಸೆ.11ರಂದು ಬೆಂಗಳೂರಿಗೆ ಮರಳಲಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಸೆ.11ರ ಶುಕ್ರವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ. 260 ಸದಸ್ಯರು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲಿದ್ದು, ಮೇಯರ್ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 131.












Click it and Unblock the Notifications