ಉಪಾಧ್ಯಕ್ಷ ಹುದ್ದೆ ಕೊಟ್ಟ ಎರಡೇ ದಿನದಲ್ಲಿ ರಾಜೀನಾಮೆ: ಗೌಡ್ರಿಗೆ ಇದೆಂಥಾ ಮುಖಭಂಗ
ಬೆಂಗಳೂರು, ಜುಲೈ 6: ಮುಖ್ಯಮಂತ್ರಿ ಹುದ್ದೆ ಕೊಡಿ ಎಂದು ನಾನೇನು ಕಾಂಗ್ರೆಸ್ ಮನೆಬಾಗಿಲಿಗೆ ಹೋಗಿರಲಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ್ರು ಪದೇ ಪದೇ ಹೇಳುತ್ತಿದ್ದರೂ, ಕಳೆದ ಸುಮಾರು ಒಂದು ವರ್ಷದ ಅವಧಿಯಲ್ಲಿ ಕುಮಾರಸ್ವಾಮಿ ನೆಟ್ಟಗೆ ಅಧಿಕಾರ ನಡೆಸಲು ಸಾಧ್ಯವೇ ಆಗಲಿಲ್ಲ.
ತಾಜಾ ಬೆಳವಣಿಗೆಯ ಪ್ರಕಾರ, ಹದಿನಾಲ್ಕು ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಜೊತೆಗೆ, ಪ್ರತ್ಯೇಕವಾಗಿ ಸ್ಪೀಕರ್ ಅವರಿಗೆ ಪತ್ರ ಬರೆದು ರಾಜೀನಾಮೆ ಆಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಮಂಗಳವಾರದೊಳಗೆ (ಜುಲೈ 9) ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಪೀಕರ್ ಅವರು ಭರವಸೆ ನೀಡಿದ್ದಾರೆಂದು, ಎಚ್ ವಿಶ್ವನಾಥ್ ಹೇಳಿದ್ದಾರೆ.
ಜೆಡಿಎಸ್ ಸಭೆಯಲ್ಲೇ ಗೌಡ್ರಿಗೆ 'ಕ್ಲಾಸ್' ತೆಗೆದುಕೊಂಡ ಕಾರ್ಯಕರ್ತ ಸಸ್ಪೆಂಡ್
ರಾಜೀನಾಮೆ ನೀಡಿದ ಹದಿನಾಲ್ಕು ಶಾಸಕರಲ್ಲಿ ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಕೆ ಗೋಪಾಲಯ್ಯ ಕೂಡಾ ಒಬ್ಬರು. ಗೌಡ್ರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗೋಪಾಲಯ್ಯ ರಾಜೀನಾಮೆ, ನಿಜವಾಗಲೂ ದೇವೇಗೌಡ್ರಿಗೆ ಆದ ಬಹುದೊಡ್ಡ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಕೇವಲ ಎರಡು ದಿನದ ಹಿಂದೆ, ಜೆಡಿಎಸ್ ರಾಜ್ಯಾಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳ ಹುದ್ದೆಗೆ ಹೊಸಬರನ್ನು ದೇವೇಗೌಡ್ರು ನೇಮಿಸಿದ್ದರು. ಅದರಲ್ಲಿ, ಶಾಸಕ ಕೆ ಗೋಪಾಲಯ್ಯ ಕೂಡಾ ಒಬ್ಬರು. ದೇವೇಗೌಡ್ರು, ಎನ್ ಎಂ ನಬಿ ಜೊತೆ ಗೋಪಾಲಯ್ಯ ಅವರನ್ನು ಹಿರಿಯ ಉಪಾಧ್ಯಕ್ಷರನ್ನಾಗಿ ಗೌಡ್ರು ನೇಮಿಸಿದ್ದರು.
I am sorry, ಐ ಆಮ್ ಹೆಲ್ಪ್ ಲೆಸ್: ಹೈಕಮಾಂಡಿಗೆ ಸಿದ್ದರಾಮಯ್ಯ?
ಈಗ, ಗೌಡ್ರು ಕೊಟ್ಟ ಅಧಿಕಾರವನ್ನು ರಿಜೆಕ್ಟ್ ಮಾಡಿರುವ ಗೋಪಾಲಯ್ಯ, ಅತೃಪ್ತ ಶಾಸಕರ ಜೊತೆ ಗುರುತಿಸಿಕೊಂಡಿದ್ದು, ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ, ಉಪಾಧ್ಯಕ್ಷರಾದ ಕೇವಲ ಎರಡೇ ದಿನದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ, ಸಮ್ಮಿಶ್ರ ಸರಕಾರಕ್ಕೆ ತಿರುಗೇಟು ನೀಡಿದ್ದಾರೆ.
ಜೆಡಿಎಸ್ ನಲ್ಲಿನ ಕುಟುಂಬ ರಾಜಕಾರಣದ ಬಗ್ಗೆ ಕೆಲವು ದಿನಗಳ ಹಿಂದೆ ಕಾರ್ಯಕರ್ತರು ಗೌಡ್ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ನಡುವೆಯೂ, ನಿಖಿಲ್ ಕುಮಾರಸ್ವಾಮಿಯನ್ನು ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ಬೇಸರಕ್ಕೆ ಕಾರಣವಾಗಿದೆ ಎನ್ನುವ ಮಾಹಿತಿಯಿದೆ.