JDS Manifesto: ಕೃಷ್ಣಾ ಮೇಲ್ದಂಡೆಗೆ ಜೆಡಿಎಸ್ ಭರ್ಜರಿ ಗಿಫ್ಟ್!
ಬೆಂಗಳೂರು: ಜೆಡಿಎಸ್ ಪ್ರಣಾಳಿಕೆ ಇಂದು ಬಿಡುಗಡೆ ಆಗಿದ್ದು, ಹಲವು ರೈತಪರ ಯೋಜನೆಗಳನ್ನ ಜಾರಿಗೆ ತರುವ ಆಶ್ವಾಸನೆ ನೀಡಿದೆ. ಪ್ರಮುಖವಾಗಿ ನೀರಾವರಿ ಯೋಜನೆಗಳಿಗೆ ಭಾರಿ ಅನುದಾನ ನೀಡುವ ಕುರಿತು ಜೆಡಿಎಸ್ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಜೆಡಿಎಸ್ ನೀಡಿರುವ ಆಶ್ವಾಸನೆ ಏನು ಎಂಬುದರ ಕುರಿತು ಇಲ್ಲಿ ತಿಳಿಯೋಣ.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಉತ್ತರ ಕರ್ನಾಟಕ ಭಾಗಕ್ಕೆ ಭಾರಿ ಲಾಭವಾಗಲಿದೆ. ಹೀಗಾಗಿ ಯೋಜನೆಯನ್ನ ಪೂರ್ಣ ಮಾಡುವ, ಮತ್ತು ರಾಜ್ಯದ ಪಾಲಿಗೆ ಸಿಕ್ಕಿರುವ ನೀರನ್ನು ಸಮರ್ಪಕವಾಗಿ ರೈತರಿಗೆ ಹಂಚಿಕೆ ಮಾಡುವ ಕುರಿತು ಜೆಡಿಎಸ್ ಪ್ರಣಾಳಿಕೆಯಲ್ಲಿ ವಾಗ್ದಾನ ನೀಡಿದೆ. ಹಾಗಾದರೆ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಜೆಡಿಎಸ್ ನೀಡಿದ ಆಶ್ವಾಸನೆಗಳು ಯಾವುವು? ಮುಂದೆ ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತಾ ಹೋಗೋಣ.

ವಿಜಯಪುರ, ಬಾಗಲಕೋಟೆ, ಕಲಬುರಗಿಗೆ ಬಂಪರ್!
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಗೆ 303 TMC ಹಂಚಿಕೆಯಾಗಿದೆ. ಇದರಲ್ಲಿ ಸ್ಕೀಮ್ -A ಅಡಿಯಲ್ಲಿ 173 TMC ಮತ್ತು ಸ್ಕೀಮ್ -B ಅಡಿ 130 TMC ನೀರು ಹಂಚಿಕೆ ಮಾಡಲಾಗಿದೆ. ಒಟ್ಟು 303 TMC ನೀರು ರಾಜ್ಯಕ್ಕೆ ಸಿಕ್ಕಿದೆ. ಹೀಗೆ ಸ್ಕೀಮ್-A ಅಡಿ ಹಂಚಿಕೆಯಾಗಿರುವ 173 TMC ನೀರನ್ನು ಬಳಸಿಕೊಂಡು ಬರಪೀಡಿತ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಒಟ್ಟು 16 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಆಶ್ವಾಸನೆ ನೀಡಿದೆ ಜೆಡಿಎಸ್. ಈ ಯೋಜನೆಗೆ ಇಲ್ಲಿಯವರೆಗೆ ₹30,000 ಕೋಟಿ ವೆಚ್ಚಮಾಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.
ಗ್ರಾಮಗಳ ರಕ್ಷಣೆಗೆ ಕ್ರಮದ ಭರವಸೆ
ಇನ್ನು ಸ್ಕೀಮ್-B ಅಡಿಯಲ್ಲಿ ರಾಜ್ಯಕ್ಕೆ ಸಿಕ್ಕಿರುವ 130 TMC ನೀರನ್ನು ಬಳಸಿಕೊಂಡು ಒಟ್ಟಾರೆ 14 ಲಕ್ಷ ಎಕರೆಗೆ ನೀರಾವರಿ ಕಲ್ಪಿಸುವ ಉದ್ದೇಶವನ್ನು ಜೆಡಿಎಸ್ ತಿಳಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅಡಿಯಲ್ಲಿ 20 ಗ್ರಾಮಗಳು ಮುಳುಗಡೆ ಆಗುತ್ತಿದ್ದು, ಈ ಗ್ರಾಮಗಳ ಸ್ಥಳಾಂತರ ಮತ್ತು ಗ್ರಾಮಸ್ಥರಿಗೆ ಪುನರ್ವಸತಿ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಆಶ್ವಾಸನೆ ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ತಾರತಮ್ಯ ಸರಿಪಡಿಸುವ ಭರವಸೆ
ಹಾಗೇ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಅಗತ್ಯವಿದ್ದ 1,33,867 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡು ಭೂ ಪರಿಹಾರ ನೀಡುವಲ್ಲಿಉಂಟಾಗುವ ತಾರತಮ್ಯಕ್ಕೆ ಏಕರೂಪ ದರ ನಿಗಡಿಪಡಿಸಿ, ಸಮಸ್ಯೆ ಪರಿಹರಿಸಲಾಗುವುದು ಎಂಬ ಭರವಸೆ ನೀಡಲಾಗಿದೆ. ಹಾಗೇ ಈ ಯೋಜನೆಗೆ ಅಗತ್ಯವಿರುವ ₹51 ಸಾವಿರ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿ, ಮುಂದಿನ 5 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ.
ನೆರೆ ರಾಜ್ಯಗಳ ನೀರಿನ ಕಿರಿಕ್ಗೆ ಬ್ರೇಕ್?
ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ನಲ್ಲಿ ನೆರೆ ರಾಜ್ಯಗಳು ಹೂಡಿರುವ ನನೆಗುದಿಗೆ ಬಿದ್ದಿರುವ ಪ್ರಕರಣಗಳ ತೆರವು ಮಾಡಿ, ಜಲವಿವಾದ ಕಾಯ್ದೆ ಸೆಷನ್ 6(1)ರ ಅಡಿ ಕೇಂದ್ರ ಸರ್ಕಾರದಿಂದ ಅಧಿಕೃತ ಗೆಜೆಟ್ನಲ್ಲಿ ಅಂತಿಮ ನಿರ್ಧಾರ ಪ್ರಕಟವಾಗುವಂತೆ ಒತ್ತಾಯಿಸಲಾಗುವುದು ಎಂಬ ವಿಶ್ವಾಸವನ್ನೂ ದಳಪತಿಗಳು ಪ್ರಣಾಳಿಕೆಯಲ್ಲಿ ನೀಡಿದ್ದಾರೆ. ಹೀಗೆ ರೈತರಿಗೆ ಆಶ್ವಾಸನೆಗಳ ಮಹಾಪೂರವನ್ನೇ ನೀಡಲಾಗಿದೆ. ಅಲ್ಲದೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಸರ್ವಪ್ರಯತ್ನ ಮಾಡಲಾಗುವುದು ಎಂದು ಜೆಡಿಎಸ್ ತಿಳಿಸಿದೆ.
ಒಟ್ಟಾರೆ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗ ಜೆಡಿಎಸ್ ತನ್ನ ಪ್ರಣಾಳಿಕೆ ರಿಲೀಸ್ ಮಾಡಿದೆ. ಈ ಮೂಲಕ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತಪರ ಯೋಜನೆಗಳನ್ನ ಜಾರಿಗೆ ತರುವ ಆಶ್ವಾಸನೆ ನೀಡಲಾಗಿದೆ. ಆದರೆ ಈ ಆಶ್ವಾಸನೆಗಳು ರೈತರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನ ಕಾದು ನೋಡಬೇಕಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ.












Click it and Unblock the Notifications