ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ ಜನಾರ್ದನ ರೆಡ್ಡಿ ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 22 : ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದರು. ಮೊಹಮ್ಮದ್ ನಲಪಾಡ್ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್ ಆರೋಗ್ಯ ವಿಚಾರಿಸಿದರು.
ಗುರುವಾರ ಮಧ್ಯಾಹ್ನ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದರು. ನಟ ಶಿವರಾಜ್ ಕುಮಾರ್ ಸಹ ಅದೇ ಸಮಯಕ್ಕೆ ಆಸ್ಪತ್ರಗೆ ಆಗಮಿಸಿದರು.
ವಿದ್ವತ್ ಭೇಟಿ ಬಳಿಕ ಮಾತನಾಡಿದ ಶ್ರೀರಾಮುಲು ಅವರು, 'ವಿದ್ವತ್ಗೆ ಕಣ್ಣಿನ ಇನ್ ಫೆಕ್ಷನ್ ಆಗಿದೆ. ಆದ್ದರಿಂದ, ವೈದ್ಯರ ಸಲಹೆಯಂತೆ ಹೊರಗಡೆಯಿಂದ ನೋಡಿಕೊಂಡು ಬಂದೆವು' ಎಂದರು.

'ಕಾಂಗ್ರೆಸ್ ಪಕ್ಷದ ಮಂತ್ರಿಗಳು, ಶಾಸಕರು ಗೂಂಡಾಗಿರಿ ಮಾಡುತ್ತಿರುವುದು ಬೇಸರದ ಸಂಗತಿ. ಅವರ ಮಕ್ಕಳು ಗೂಂಡಾಗಿರಿ ಮಾಡುತ್ತಿದ್ದಾರೆ. ನಲಪಾಡ್ ಸೈಕೋ ಇರಬೇಕು. ತಂದೆ ಎಂಎಲ್ಎ ಎಂದು ಮಗ ಮೆರೆಯುತ್ತಿದ್ದಾನೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ಹೇಳಿದ್ದೇನು? : ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, 'ಲೋಕನಾಥ್ ಅವರು ನನ್ನ ಆತ್ಮೀಯ ಗೆಳೆಯರು. ಮೊಹಮ್ಮದ್ ನಲಪಾಡ್ ನನ್ನು ಪೊಲೀಸರು ಮೊಣಕಾಲಲ್ಲಿ ನಡೆಸುತ್ತಾ ಮೆರವಣಿಗೆ ಮಾಡಬೇಕಿತ್ತು. ಆಗ ಸರಿಯಾದ ಶಿಕ್ಷೆ ಆಗುತ್ತಿತ್ತು' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಮೊಹಮ್ಮದ್ ನಲಪಾಡ್ನ ಜೀವನ ಶೈಲಿ ಪ್ರಾರಂಭವಾಗುವುದು ತಡರಾತ್ರಿಯೇ.
ನಲಪಾಡ್ ಮಾದಕ ವಸ್ತುಗಳ ವ್ಯಸನಿ ಇರಬೇಕು. ವಿದ್ವತ್ ಆದಷ್ಟು ಬೇಗೆ ಗುಣಮುಖರಾಗಲಿ' ಎಂದು ಹಾರೈಸಿದರು.












Click it and Unblock the Notifications